ಕಲಬುರಗಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪುತ್ರನ ಹತ್ಯೆ: ಆರು ಆರೋಪಿಗಳು ಸೆರೆ
ಕಲಬುರಗಿ, ನ. 09: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕಲಬುರಗಿಯ ಪೊಲೀಸ್ ಕಾನ್ಸ್ಟೇಬಲ್ ಪುತ್ರನ ಭೀಕರ ಹತ್ಯೆ ಪ್ರಕರಣ ಸಂಬಂಧ ಆರು ಹಂತಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಒಬ್ಬ ಹೆಡ್ ಕಾನ್ಸ್ಟೇಬಲ್ ಪುತ್ರ ಬಂಧನಕ್ಕೆ ಒಳಗಾಗಿದ್ದಾನೆ. ಹುಡುಗಿಯೊಬ್ಬಳ ವಿಚಾರವಾಗಿ ಎರಡು ರೌಡಿ ಪಡೆಗಳ ನಡುವೆ ಉಂಟಾದ ಜಗಳ ಹೆಡ್ ಕಾನ್ಸ್ಟೇಬಲ್ ಪುತ್ರನನ್ನು ಬಲಿ ಪಡೆದಿದೆ.
ಹತ್ಯೆಯ ಆರೋಪಿಗಳಾದ ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ ಭೈರಾಮಡಗಿ (22), ಆಕಾಶ ಜಾಧವ (22), ಶುಭಂ ದೊಡ್ಡಮನಿ (23), ಅಶೋಕ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಬಂಧಿತರು. ಕಲಬುರಗಿ ಬಸ್ ನಿಲ್ದಾಣದಲ್ಲಿ ದೀಪಾವಳಿ ಹಬ್ಬದ ದಿನದಂದು ಕಾನ್ಸಟೇಬಲ್ ಪುತ್ರ ಅಭಿಷೇಕ್ ಹತ್ಯೆಯಾದವನು.
ಏನಿದು ಘಟನೆ: ದೀಪಾವಳಿ ಹಬ್ಬದ ಸಲುವಾಗಿ ಬೆಂಗಳೂರಿನಿಂದ ಕಲುಬುರಗಿಗೆ ಬಂದಿದ್ದ ಅಭಿಷೇಕ್ ನನ್ನು ಬಸ್ ನಿಲ್ದಾಣದಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಐದಾರು ಜನರಿದ್ದ ಗುಂಪು ಹಾಡಹಗಲೇ ಕೊಚ್ಚಿ ಕೊಲೆ ಮಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಮುಂದೇನಾಯ್ತು ಓದಿ?...
ಸೈಬರ್ ಪೊಲೀಸ್ ಠಾಣೆಯ ಮುಖ್ಯ ಪೇದೆ
ಕಲಬುರಗಿ ವಿದ್ಯಾನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯ ಮಗ ಅಭಿಷೇಕ್ ಬೆಂಗಳೂರಿನಿಂದ ಬಂದಿರುವ ವಿಚಾರ ತಿಳಿದುಕೊಂಡು ಹಿಂಬಾಲಿಸಿತ್ತು. ಮನೆಯಿಂದ ಜಿಮ್ಗೆ ತೆರಳಿದ್ದ ಅಭಿಷೇಕ್ನನ್ನು ಲಾಂಗುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಕಲಬುರಗಿ ಪೊಲೀಸರು ಆರು ಹಂತಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮುರ್ತುಜಾ ಮಹಮದ್ ಆಲಿ ಕೂಡ ಪೊಲೀಸ್ ಪೇದೆಯ ಪುತ್ರನಾಗಿದ್ದಾನೆ. ಉಳಿದ ಐವರು ಆತನ ಸಹಚರರನ್ನು ಬಂಧಿಸಿದ್ದು, ಆರೋಪಿಗಳಿಂದ ನಾಲ್ಕು ಲಾಂಗು, ಮಚ್ಚು, ಎರಡು ಬೈಕ್ ಒಂದು ಇನ್ನೋವಾ ಕಾರು ವಶಪಡಿಸಿಕೊಂಡಿದ್ದಾರೆ. ಹತ್ಯೆಯಾದ ಅಭಿಷೇಕ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಹಳೇ ವೈಷಮ್ಯದಿಂದ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಹುಡುಗಿ ವಿಚಾರವಾಗಿ ಕೊಲೆ
ಬಂಧಿತ ಆರೋಪಿ ಸಾಗರ್ ಎಂಬಾತ ಕಾಲೇಜಿನಲ್ಲಿ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯ ಜತೆ ಸುತ್ತಾಡುತ್ತಿದ್ದ. ಈ ವಿಚಾರವಾಗಿ ಅಭಿಷೇಕ್ ಗ್ಯಾಂಗ್ ಮತ್ತು ಸಾಗರ್ ಗ್ಯಾಂಗ್ ನಡುವೆ ಗಲಾಟೆ ಆಗಿತ್ತು. ಒಂದೂವರೆ ವರ್ಷದ ಹಿಂದೆ ಸಾಗರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದರು. ಆದರೆ, ಸಾಗರ್ ಜೀವ ಉಳಿಸಿಕೊಂಡಿದ್ದ. ಅದೇ ಸಾಗರ್ ಮುರ್ತಜಾ ಮತ್ತು ಟೀಮ್ ಅಭಿಷೇಕ್ನನ್ನು ಹಾಡಹಗಲೇ ಬಸ್ ನಿಲ್ದಾಣದಲ್ಲಿ ಕೊಚ್ಚಿ ಕೊಲೆ ಮಾಡಿ ಸೇಡು ತೀರಿಸಿಕೊಂಡಿದೆ. ಆರೋಪಿಗಳನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಕಲುಬುರಗಿಯ ರಕ್ತ ಚರಿತ್ರೆ
ದೀಪಾವಳಿ ಹಬ್ಬದ ದಿನವೇ ಕಾನ್ಸ್ಟೇಬಲ್ ಪುತ್ರ ಅಭಿಷೇಕ್ನನ್ನು ಕೊಚ್ಚಿ ಕೊಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಪೊಲೀಸಪ್ಪನ ಪುತ್ರನ ಕೊಲೆ ಪ್ರಕರಣದ ಭೀಕರ ದೃಶ್ಯ ನೋಡಿ ಇಡೀ ಕಲಬುರಗಿ ಬೆಚ್ಚಿ ಬಿದ್ದಿತ್ತು. ಬಸ್ ನಿಲ್ದಾಣದಲ್ಲಿ ಜನರ ನಡುವೆ ಆಗಿದ್ದ ಕೊಲೆ ಭೀತಿ ಹುಟ್ಟಿಸಿತ್ತು. ಅಭಿಷೇಕ್ ಕೊಲೆ ದೃಶ್ಯಗಳನ್ನು ಸ್ಥಳೀಯರೇ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಅಭಿಷೇಕ್ ಈ ಹಿಂದೆ ಸಾಗರ್ ಅನ್ನೋ ಹುಡುಗನಿಗೆ ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡೋದಕ್ಕೆ ಮುಂದಾಗಿದ್ದ. ಆದ್ರೆ ಆಗ ಅದೃಷ್ಟವಶಾತ್ ಸಾಗರ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದ.
Recommended Video
ಅಭಿಷೇಕ್ ಮೇಳೆ ಮಾರಣಾಂತಿಕವಾಗಿ ಹಲ್ಲೆ
ಅದಾದ ಬಳಿಕ ಅಭಿಷೇಕ್ ಕಲಬುರಗಿ ಬಿಟ್ಟು ಬೆಂಗಳೂರಿಗೆ ತೆರಳಿದ್ದ. ಇತ್ತ ಆಸ್ಪತ್ರೆಯಂದ ಗುಣಮುಖನಾಗಿ ಬಂದ ಮೇಲೆ ಸಾಗರ್ ಅಭಿಷೇಕ್ಗಾಗಿ ಹೊಂಚು ಹಾಕಿ ಕುಳಿತಿದ್ದ. ಹಾಗಾಗಿಯೆ ಅಭಿಷೇಕ್ ಬೆಂಗಳೂರಿನಿಂದ ವಾಪಸ್ ಬಂದಿರುವ ಮಾಹಿತಿ ಪಡೆದ ಬೆನ್ನಲ್ಲೆ ಸಾಗರ್ ಆಂಡ್ ಗ್ಯಾಂಗ್ ಅಭಿಷೇಕ್ ಮೇಳೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಅಂತೂ ಕಲಬುರಗಿಯ ಎರಡು ರೌಡಿ ಪಡೆಗಳ ಬೀದಿ ಕಾಳಗದಲ್ಲಿ ಒಬ್ಬ ಜೀವ ಕಳೆದುಕೊಂಡಿದ್ದಾನೆ.