ಕೋರ್ಟ್ ಹಣ ಮರಳಿಸಿದ ಮೇಲೆ ಕಾಂಗ್ರೆಸ್ ಗೆ ಭಯ ಹುಟ್ಟಿದೆ: ಜನಾ ರೆಡ್ಡಿ
ಕಲಬುರಗಿ, ಮೇ 29: ಕೋರ್ಟ್ ನಿಂದ ನನಗೆ ಹಣ ಮರಳಿಸಿರುವುದು ಕಾಂಗ್ರೆಸ್ ಗೆ ಭಯ ಹುಟ್ಟಿಸಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಇದೇ ವೇಳೆ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೂರೈವತ್ತು ಸ್ಥಾನ ಗೆಲ್ಲುವ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದಾರೆ.
ಇಲ್ಲಿಗೆ ಹತ್ತಿರದ ಕಲ್ಮೂಡ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಪುತ್ಥಳಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ರೆಡ್ಡಿ ಜನಾಂಗದ ಕಾರ್ಯಕ್ರಮ ಎಲ್ಲಿ ನಡೆದರೂ ಭಾಗವಹಿಸುತ್ತಿದ್ದೇನೆ. ಒಂದು ತಿಂಗಳಲ್ಲೇ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದಿದ್ದಾರೆ.[ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ]
ಈ ರೀತಿ ಭಾಗವಹಿಸುತ್ತಿರುವ ಹಿಂದೆ ಯಾವ ರಾಜಕೀಯ ಉದ್ದೇಶವೂ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಸಿಬಿಐ ನ್ಯಾಯಾಲಯದಲ್ಲಿ ಈಚೆಗೆ ಜನಾರ್ದನ ರೆಡ್ಡಿ ವಿರುದ್ಧ ಇದ್ದ ಅಕ್ರಮ ಗಣಿಗಾರಿಕೆ ಹಗರಣದ ಹಲವು ಪ್ರಕರಣಗಳು ಖುಲಾಸೆಯಾಗಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈಚೆಗೆ ಜನಾ ರೆಡ್ಡಿ ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.