ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ಕೊಡಿಸಿದ್ದು ಕಾಂಗ್ರೆಸ್:ಸಿಎಂ
ಕಲಬುರಗಿ, ಡಿಸೆಂಬರ್ 16: ಹೈದರಾಬಾದ್ ಕರ್ನಾಟಕಕ್ಕೆ 371 (ಜೆ) ವಿಶೇಷ ಮಾನ್ಯತೆ ಕೊಡಿಸಿದ್ದು ಕಾಂಗ್ರೆಸ್ ಪಕ್ಷ. ನೀರಾವರಿ ಕ್ಷೇತ್ರಕ್ಕೆ ಕಳೆದ ಐದು ವರ್ಷಗಳಲ್ಲಿ ರೂ.52,000 ಕೋಟಿ ವೆಚ್ಚ ಮಾಡುತ್ತಿದ್ದೇವೆ. ಕಲಬುರಗಿ ಜಿಲ್ಲೆ ಒಂದಕ್ಕೇ ನೀರಾವರಿಗೆ ರೂ.1,530 ಕೋಟಿ ವೆಚ್ಚ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿಯಲ್ಲಿ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಬಜೆಟ್ ನಿರ್ವಹಣೆ ಮತ್ತು ವಿತ್ತೀಯ ಕೊರತೆ ಕಾಯ್ದೆಯನ್ನು ಐದು ವರ್ಷಗಳಲ್ಲಿ ನಾವು ಪಾಲನೆ ಮಾಡಿದ್ದೇವೆ. ಇಡೀ ದೇಶದಲ್ಲೇ ಹಣಕಾಸು ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮವಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶ್ಲಾಘಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸಮ ಸಮಾಜ ನಿರ್ಮಾಣ ಮಾಡಬೇಕೆಂದು ಪ್ರತಿಪಾದನೆ ಮಾಡಿದ್ದರು. ಆ ದಾರಿಯಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ದೃಢವಾಗಿ ಹೆಜ್ಜೆ ಇಟ್ಟಿದೆ ಎಂದರು.
ರಾಜ್ಯದಲ್ಲಿ ಸತತ ಬರ ಇದ್ದುದರಿಂದ ನಮ್ಮ ರೈತರು ಸಂಕಷ್ಟದಲ್ಲಿದ್ದರು. ಆ ಕಾರಣದಿಂದ ಪ್ರತಿ ರೈತರ ರೂ.50,000 ವರೆಗೂ ಸಾಲ ಮನ್ನಾ ಮಾಡಿದೆವು. ಒಟ್ಟು ರೂ.8,165 ಕೋಟಿ ಮನ್ನಾ ಮಾಡಿದ್ದೇವೆ. ಇದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವ ಕಲಬುರಗಿಯನ್ನು ಅಗ್ರಗಣ್ಯ ಜಿಲ್ಲೆಗಳ ಸಾಲಿಗೆ ತರಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಹೊಸ ಶಾಲೆಗಳ ಆರಂಭ, ಶಿಕ್ಷಕರ ನೇಮಕದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಿದೆ ಎಂದರು.
ಕಲಬುರಗಿ ಜಿಲ್ಲೆ ಪೌಷ್ಟಿಕಾಂಶದ ಪಟ್ಟಿಯಲ್ಲಿ ಹಂತ ಹಂತವಾಗಿ ಮೇಲೇರುತ್ತಿದೆ. ಮಾತೃಪೂರ್ಣ, ಕ್ಷೀರಭಾಗ್ಯದಂತಹ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಪೌಷ್ಟಿಕತೆ ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿವೆ ಎಂದು ಹೇಳಿದರು.

ಇಂದು ಕಲಬುರಗಿಯಲ್ಲಿ ಕೋಟ್ಯಂತರ ರೂಪಾಯಿಗಳ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದೇನೆ. ಅಫಜಲಪೂರ, ಸೇಡಂ ಮತ್ತು ಯಡ್ರಾಮಿಗಳಲ್ಲಿ ಬಹಿರಂಗ ಸಭೆಗಳಲ್ಲಿ ಮಾತನಾಡಲಿದ್ದೇವೆ. ಕಲಬುರಗಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.












Click it and Unblock the Notifications