ಮೇ 24 ಕ್ಕೆ ಯಡಿಯೂರಪ್ಪ ಸಿಎಂ: ಉಮೇಶ್ ಜಾಧವ್
Recommended Video
ಕಲಬುರಗಿ, ಮೇ 20: "ಚುನಾವಣೋತ್ತರ ಫಲಿತಾಂಶದ ನಂತರ ಕರ್ನಾಟಕದ ಮೈತ್ರಿ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದ್ದು, ಮೇ 24 ರ ನಂತರ ಬಿ ಎಸ್ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಬಿಜೆಪಿಯ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.
ಭಾನುವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶದಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರುತ್ತದೆಂಬ ಸೂಚನೆ ಸಿಕ್ಕಿದ್ದು, ರಾಜ್ಯದಲ್ಲೂ ಬಿಜೆಪಿ ಉತ್ತಮ ಸಾಧನೆ ಮೆರೆಯಲಿದೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ. ಜಾಧವ್, "ಇನ್ನು 48 ಗಂಟೆಗಳ ನಂತರ ಜನತೆಯ ಎಕ್ಸಿಟ್ ಪೋಲ್ ಪ್ರಕಟವಾಗಲಿದೆ. ಮೇ 23 ರಂದು ಕರ್ನಾಟಕದ ಮೈತ್ರಿ ಸರ್ಕಾರ ಬೀಳುವುದು ಖಚಿತ. ಮೇ 24 ರ ನಂತರ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಪಕ್ಕಾ" ಎಂದು ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಅವರಿಗೆ ಕಲಬುರಗಿ ಕ್ಷೇತ್ರದಿಂದ ಟಿಕೆಟ್ ನೀಡಿದ್ದ ಬಿಜೆಪಿ, ಕಾಂಗ್ರೆಸ್ ಸಂಸದ, ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕಣಕ್ಕಿಳಿಸಿದೆ. ಮೇ 23 ರಂದು ಫಲಿತಾಂಶ ಬಿಡುಗಡೆಯಾಗಲಿದ್ದು, ಏಪ್ರಿಲ್ 23 ರಂದು ಈ ಕ್ಷೇತ್ರಕ್ಕೆ ಮತದಾನವಾಗಿತ್ತು.











Click it and Unblock the Notifications