ಬಿಜೆಪಿ ಕಾರ್ಯಕಾರಣಿಯಲ್ಲಿ ನನ್ನ ಬಂಧನವಾಗಿಲ್ಲ: ವೆಂಕಟೇಶ್ ಮೌರ್ಯ ಸ್ಪಷ್ಟನೆ
ಕೇವಲ ವಿಚಾರಣೆಗಷ್ಟೇ ಕರೆದೊಯ್ದಿದ್ದರು, ಆದರೆ ಬಂಧನವಾಗಿದೆ ಎಂದು ಸುಳ್ಳಿ ಸುದ್ದಿ ಹಬ್ಬಿಸಲಾಗಿದೆ ಎಂದ ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಸದಸ್ಯ ಸ್ಪಷ್ಟನೆ
ಕಲಬುರಗಿ, ಜನವರಿ 21: ಕಲಬುರಗಿಯಲ್ಲಿ ಶನಿವಾರ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದಾಗ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರಿಂದ ತಮ್ಮ ಬಂಧನವಾಗಿತ್ತೆಂಬ ವರದಿಗಳು ಸತ್ಯಕ್ಕೆ ದೂರವಾದವು ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಸದಸ್ಯ ವೆಂಕಟೇಶ್ ಮೌರ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸಂಜೆ ಹೊತ್ತಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನನ್ನನ್ನು ಕೇವಲ ವಿಚಾರಣೆ ನಡೆಸಲು ಪೊಲೀಸರು ಕರೆದೊಯ್ದಿದ್ದರು.
ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ನೇರವಾಗಿ ಬಂದು ನನ್ನನ್ನು ವಿಚಾರಣೆಗೆ ಕರೆದೊಯ್ದಿದ್ದು ನೋಡಿ ಹಲವರು ನನ್ನ ಬಂಧನವಾಗಿದೆ ಎಂದು ತಿಳಿದಿದ್ದಾರೆ. ಮಹಿಳೆಯೊಬ್ಬರಿಗೆ ನಾನು ವಂಚಿಸಿದ್ದೆ ಎಂಬ ಪ್ರಕರಣದಲ್ಲಿ ನನ್ನನ್ನು ಬಂಧಿಸದಂತೆ ಈಗಾಗಲೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಅವರು ವಿವರಿಸಿದರು. [ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ]
ಶನಿವಾರ ಬೆಳಗ್ಗೆ ಕಾರ್ಯಕಾರಣಿ ಆರಂಭಗೊಂಡಿತ್ತು. ಇದರಲ್ಲಿ ರಾಜ್ಯ ಬಿಜೆಪಿಯ ಪ್ರಮುಖರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಭಾಗವಹಿಸಿದ್ದರು. ಅದೇ ವೇಳೆಗೆ ಪೊಲೀಸರು ಬಂದು ವೆಂಕಟೇಶ್ ಮೌರ್ಯ ಅವರನ್ನು ಕರೆದೊಯ್ದಿದ್ದರು.
ಇದು ಅನೇಕ ಗೊಂದಲಗಳಿಗೆ ಎಡೆಮಾಡಿಕೊಟ್ಟಿತ್ತಲ್ಲದೆ, ಕಾರ್ಯಕಾರಿಣಿಯಲ್ಲೇ ಪೊಲೀಸರು ಬಂಧಿಸಿದ್ದರ ಬಗ್ಗೆ ಕೆಲವಾರು ಬಿಜೆಪಿ ಮುಖಂಡರು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.