ಕಲಬುರಗಿ: ಖಾಸಗಿ ಅಂಗಗಳನ್ನು ಕತ್ತರಿಸಿ ಬಿಜೆಪಿ ಮುಖಂಡನ ಭೀಕರ ಹತ್ಯೆ
ಕಲಬುರಗಿ, ನ.16: ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಮುಖಂಡರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು 64 ವರ್ಷದ ಮಲ್ಲಿಕಾರ್ಜುನ ಮುತ್ಯಾಲ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಕಾರ್ಜುನ ಮುತ್ಯಾಲ ಈ ಹಿಂದೆ ಜೆಡಿಎಸ್ನಲ್ಲಿದ್ದರು. ಇತ್ತೀಚೆಗಷ್ಟೇ ಅವರು ಬಿಜೆಪಿಯ ಭಾಗವಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ಪ್ರೇಯಸಿಯ ಕೊಲೆ ಮಾಡಲು ಅಮೆರಿಕದ ಕ್ರೈಂ ಶೋ ಸ್ಫೂರ್ತಿ ಪಡೆದಿದ್ದ ಆರೋಪಿ
ಮಲ್ಲಿಕಾರ್ಜುನ ಮುತ್ಯಾಲ ಅವರು ಸೇಡಂ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡಿದ್ದರು. ನವೆಂಬರ್ 14 ರಂದು ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದು ಅಂಗಡಿಯಲ್ಲಿ ಮಲಗಿದ್ದರು. ಅಂದೇ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಖಾಸಗಿ ಅಂಗಗಳನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸ್ಥಳೀಯ ಪೊಲೀಸರು ಕಳ್ಳತನದ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅಂಗಡಿಯಿಂದ ಯಾವುದೇ ಸರಕು ಅಥವಾ ಹಣ ಕಳ್ಳತನವಾಗಿಲ್ಲ.
ಕೆಲ ವರದಿಗಳಂತೆ ಮೃತ ಮಲ್ಲಿಕಾರ್ಜುನ ಮುತ್ಯಾಲ ಎರಡು ಮದುವೆಯಾಗಿದ್ದಾರೆ. ಅವರ ಕೆಲವು ಆಸ್ತಿ ವಿವಾದಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಕುಟುಂಬ ಸದಸ್ಯರನ್ನೆಲ್ಲ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳೀಯ ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಇನ್ನು, ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮೃತ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂಬುದನ್ನು ನಿರಾಕರಿಸಿದ್ದಾರೆ.