ಕಲಬುರಗಿಯ ಸಿಪಿಐ ಮೇಲೆ ಗಾಂಜಾ ಗ್ಯಾಂಗ್ ದಾಳಿ, ಸಂಪೂರ್ಣ ವಿವರ
ಕಲಬುರಗಿ, ಸೆಪ್ಟೆಂಬರ್, 25: ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತರೂರಿನಲ್ಲಿ ಶುಕ್ರವಾರ ರಾತ್ರಿ ಗಾಂಜಾ ಮಾಫಿಯಾ ಮೂಲ ಭೇದಿಸಲು ತೆರಳಿದ್ದ ಕರ್ನಾಟಕ ಪೊಲೀಸ್ ತಂಡದ ಮೇಲೆ ದಂಧೆಕೋರರು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬುರಗಿ ಸಿಪಿಐ ಶ್ರೀಮಂತ ಇಲ್ಲಾಳ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಇಲ್ಲಾಳರಿಗೆ ನಗರದ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ಲಿಫ್ಟ್ ಮಾಡುವ ಸಿದ್ಧತೆ ನಡೆದಿದೆ. ದಾಳಿಗೆ ಬಂದ ಪೊಲೀಸ್ ಅಧಿಕಾರಿಗಳ ಮೇಲೆಯೇ ಮಾರಣಾಂತಿಕ ದಾಳಿ ನಡೆಸುವುದರ ಜೊತೆಗೆ ಅವರನ್ನು ದೋಚಿರುವ ಗಾಂಜಾ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಜೋರಾಗಿಯೇ ಕೇಳಿಬರುತ್ತಿದೆ.
ಕಲ್ಯಾಣ ಕರ್ನಾಟಕ ಉತ್ಸವ 2022; ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ
ಗಾಂಜಾ ಮಾರಾಟಗಾರ ಸಂತೋಷ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಆರೋಪಿ ನೀಡಿದ ಮಾಹಿತಿಯನ್ನು ಆಧರಿಸಿ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ 9 ಗಂಟೆ ಸಮಯದಲ್ಲಿ ದಿಢೀರನೆ 40 ಜನರ ಗುಂಪೊಂದು ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಇದರಿಂದ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಗಂಭೀರವಾಗಿತ್ತು. ಇನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟಿ ನೀಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ ಶ್ರೀಮಂತ್ ಇಲ್ಲಾಳ್ ಆರೋಗ್ಯ ವಿಚಾರಿಸಿದ್ದರು.
Kalaburagi Rural CPI #ShrimanthIlal has been seriously injured by #GanjaMafia. A team of 10 police men had gone to seize #Ganja. However, they were attacked by more than 50 people. CPI Shrimanth even fired warning shots. He is getting treatment at #Kalaburagi hospital.#Karnataka pic.twitter.com/FaDRybVaL0
— Hate Detector 🔍 (@HateDetectors) September 24, 2022
ದಾಳಿ ಬಗ್ಗೆ ಇಶಾ ಪಂತ್ ಪ್ರತಿಕ್ರಿಯೆ
ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾತನಾಡಿ, ಗಾಂಜಾ ಜಪ್ತಿ ಮಾಡಲು ಹೋಗಿದ್ದಾಗ ದಾಳಿ ನಡೆದಿದೆ. ಮಹಾರಾಷ್ಟ್ರದ ಗಡಿ ಉಮ್ಮರ್ಗಾ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಆಗಿದೆ. 30ಕ್ಕೂ ಹೆಚ್ಚು ಜನರು ದಿಢೀರ್ ದಾಳಿ ಮಾಡಿದ್ದಾರೆ. ಸಿಪಿಐ ಆರೋಗ್ಯದ ಕುರಿತು ಎಲ್ಲಾ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಏರ್ಲಿಫ್ಟ್ ಮಾಡಿ ಬೇರೆಡೆ ಚಿಕಿತ್ಸೆ ಕೊಡಿಸುವ ಬಗ್ಗೆ ಚಿಂತನೆ ನಡೆದಿದೆ. ಗೃಹ ಸಚಿವರು, ಎಲ್ಲ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದಾರೆ ಎಂದರು.
ಆಸ್ಪತ್ರೆಯ ವೈದ್ಯ ಡಾ.ಸುದರ್ಶನ್ ಹೇಳಿದ್ದೇನು
ಇನ್ನು ಶ್ರೀಮಂತ ಇಲ್ಲಾಳ ಅವರಿಗೆ ಡಾ.ಸುದರ್ಶನ್ ಲಾಖೆ, ಡಾ.ರಾಕೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯ ವೈದ್ಯ ಡಾ.ಸುದರ್ಶನ ಆರೋಗ್ಯ ಸಂಬಂಧ ಮಾಹಿತಿ ನೀಡಿದ್ದಾರೆ. ಸದ್ಯ ಶ್ರೀಮಂತ್ ಇಲ್ಲಾಳ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ದೇಹದ ವಿವಿಧೆಡೆ ಗಾಯಗಳಾಗಿವೆ. ಪಕ್ಕೆಲುಬು, ಮುಖದ ಎಲಬುಗಳು ಮುರಿದಿವೆ. ಮೆದುಳಿನ ಕೆಲ ಭಾಗಕ್ಕೆ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಕೂಡ ಆಗಿದೆ. ಅವರ ಆರೋಗ್ಯ ಸುಧಾರಣೆಗೆ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ವೆಂಟಿಲೇಟರ್ನಲ್ಲಿದ್ದಾರೆ ಎಂದರು.
ಅಕ್ರಮ ಗಾಂಜಾ ದಂಧೆ ಆರೋಪದಡಿ ಕಳೆದ ಎರಡು- ಮೂರು ದಿನಗಳ ಹಿಂದೆ ಸಂತೋಷ್ ಹಾಗೂ ಕಲಬುರಗಿಯ ನವೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ನವೀನ್ ಬಂಧಿತನಾಗಿದ್ದ. ಮಹಾರಾಷ್ಟ್ರ ಗಡಿಯ ಹೊನ್ನಳ್ಳಿಯ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವುದಾಗಿ ತನಿಖೆ ವೇಳೆ ಆತ ಬಾಯಿಬಿಟ್ಟಿದ್ದ.
ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ದಾಳಿ
ಈ ಮಾಹಿತಿ ಆಧರಿಸಿ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಮಹಾಗಾಂವ್ ಪಿಎಸ್ಐ ಆಶಾ ರಾಥೋಡ್ ಸೇರಿದಂತೆ 10 ಜನ ಪೊಲೀಸರ ತಂಡ ಗಾಂಜಾ ವಿರುದ್ಧದ ಕಾರ್ಯಾಚರಣೆಗಾಗಿ ಕಲಬುರಗಿ ಗಡಿ ಪ್ರದೇಶ ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತರೂರಿ ಗ್ರಾಮಕ್ಕೆ ತೆರಳಿತ್ತು. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಊರಾದ್ದರಿಂದ ತಂಡದಲ್ಲಿದ್ದ ಕೆಲ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರ ಪಡೆಯಲು ಅಲ್ಲಿನ ಠಾಣೆಗೆ ತೆರಳಿದ್ದರು. ತಂಡದಲ್ಲಿದ್ದ ಉಳಿದ ಪೊಲೀಸರು ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿದಾಗ ಗಾಂಜಾ ಗಿಡಗಳು ಕಂಡು ಬಂದವು. ಮಹಾರಾಷ್ಟ್ರ ಪೊಲೀಸರ ಬರುವಿಕೆಗಾಗಿ ಇವರು ಕಾಯುತ್ತಿದ್ದ ಹೊಲದಲ್ಲೇ ಠಿಕಾಣಿ ಹೂಡಿದ್ದರು ಎನ್ನಲಾಗಿದೆ. ಈ ವೇಳೆ ಗಾಂಜಾ ದಂಧೆಕೋರರು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಶುಕ್ರವಾರ ರಾತ್ರಿ 9.30ರ ವೇಳೆಗೆ ದಾಳಿ
ಗಾಂಜಾ ದಂಧೆಕೋರರು ಕಟ್ಟಿಗೆ, ರಾಡ್, ಕಲ್ಲುಗಳನ್ನು ಬಳಸಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 9.30ರ ವೇಳೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಗಾಂಜಾ ಮಾಫಿಯಾದವರು ಗುಂಪಾಗಿ ತಮ್ಮ ತಂಡದ ಮೇಲೆ ಮುಗಿಬಿದ್ದಿದ್ದನ್ನು ಕಂಡ ಸಿಪಿಐ ಇಲ್ಲಾಳ, ತಕ್ಷಣವೇ ತಮ್ಮ ಬಳಿಯ ಸರ್ವಿಸ್ ರಿವಾಲ್ವರ್ ಬಳಸಿ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಅದಕ್ಕೆ ಬಗ್ಗದ ದಂಧೆಕೋರರು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಶ್ರೀಮಂತ ಇಲ್ಲಾಳ ತೀವ್ರವಾಗಿ ಗಾಯಗೊಂಡು, ಅಲ್ಲೇ ಪ್ರಜ್ಞಾಹೀನರಾಗಿ ಬಿದ್ದರು. ಈ ನಡುವೆ ಉಳಿದ ಪೊಲೀಸರು ಗಾಂಜಾ ಗ್ಯಾಂಗ್ ದಾಳಿಗೆ ಹೆದರಿ, ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿದ್ದಾರೆ.
ಈ ವೇಳೆ ಗಾಂಜಾ ಮಾಫಿಯಾಕೋರರು ಇಲ್ಲಾಳ ಬಳಿಯಿದ್ದ ರಿವಾಲ್ವರ್ ಸಹ ಕಿತ್ತುಕೊಂಡಿದ್ದಾರೆ. ಇದರಲ್ಲಿ ಇನ್ನು 8 ಗುಂಡುಗಳಿದ್ದವು ಎಂಬ ಮಾಹಿತಿ ಹೊರಬಿದ್ದಿದೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಲ್ಲಾಳರನ್ನು ಸಮೀಪದ ಬಸವಕಲ್ಯಾಣದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ತಡರಾತ್ರಿ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಈ ಬಗ್ಗೆ ಕಲಬುರಗಿ ಡಿಸಿ ಯಶವಂತ ಗುರುಕರ್ ಮಾತನಾಡಿದ್ದು, ಇಲ್ಲಾಳ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿದ್ದೇನೆ. ಇಲ್ಲಾಳ್ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.