ಲೋಕಪಾಲ ನೇಮಕ ಎಂಬುದು ಕೇಂದ್ರ ಸರಕಾರದ ಗಿಮಿಕ್: ಖರ್ಗೆ
ಕಲಬುರಗಿ, ಮಾರ್ಚ್ 18:ಮೊದಲ ಲೋಕಪಾಲರ ಆಯ್ಕೆ ಅನ್ನೋದು ಚುನಾವಣೆ ಗಿಮಿಕ್. ಈ ವಿಚಾರವಾಗಿ ನಾಲ್ಕು ವರ್ಷದಿಂದ ಸುಮ್ಮನಿದ್ದು, ಲೋಕಸಭೆ ಚುನಾವಣೆಗೆ ಹತ್ತಿರ ಇರುವಾಗ ಕೇಂದ್ರ ಸರಕಾರದಿಂದ ದಿಢೀರ್ ನೇಮಕ ಮಾಡಿದ್ದು ಏಕೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಲೋಕಪಾಲರನ್ನು ಚುನಾವಣೆಯನ್ನು ಎದುರಿಗಿಟ್ಟುಕೊಂಡು ನೇಮಕ ಮಾಡುವ ಮೂಲಕ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಸಮರ್ಥಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಏಕೆ ನೇಮಕ ಮಾಡಲಿಲ್ಲ ಎಂದು ನರೇಂದ್ರ ಮೋದಿ ಉತ್ತರ ನೀಡಬೇಕು ಎಂದಿದ್ದಾರೆ.
ವಿರೋಧ ಪಕ್ಷದ ನಾಯಕರನ್ನು ಅಥವಾ ಸಂಸತ್ ನಲ್ಲಿನ ಎರಡನೇ ಅತಿ ದೊಡ್ಡ ಪಕ್ಷದ ನಾಯಕರನ್ನು ಲೋಕಪಾಲ್ ನ ಸದಸ್ಯರಾಗಿ ಮಾಡಬೇಕು. ಅದಕ್ಕೆ ಲೋಕಪಾಲ ಮಸೂದೆಯಲ್ಲಿ ಅವಕಾಶ ಮಾಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಆಡಳಿತಾರೂಢ ಪಕ್ಷ ಅದಕ್ಕೆ ಅವಕಾಶ ನೀಡಲಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉದ್ದೇಶದಿಂದ ಲೋಕಪಾಲ ನೇಮಕ ಮಾಡಿಲ್ಲ. ಇದು ಚುನಾವಣೆ ಗಿಮಿಕ್ ಅಷ್ಟೇ ಎಂದಿದ್ದಾರೆ.

ಬಿಜೆಪಿಯ 'ಮೈ ಭೀ ಚೌಕೀದಾರ್' ಅಭಿಯಾನವನ್ನು ಟೀಕಿಸಿದ ಖರ್ಗೆ, ನರೇಂದ್ರ ಮೋದಿ ತಮ್ಮನ್ನು ತಾವು ಚೌಕೀದಾರ್ ಅಂತ ಕರೆದುಕೊಳ್ಳುತ್ತಾರೆ. ಆದರೆ ಅವರೊಬ್ಬರು 'ಕಳ್ಳ'. ಅವರು ದೇಶದ ಹಣವನ್ನು ಲೂಟಿ ಮಾಡಿ, ತಮ್ಮ ಕಾರ್ಪೊರೇಟ್ ಸ್ನೇಹಿತರಿಗೆ ಹಂಚುತ್ತಿದ್ದಾರೆ. ಅವರು ನಿಜವಾಗಲೂ ಕಾಯುವವರಾಗಿದ್ದರೆ ನಮ್ಮ ದೇಶವನ್ನು ರಕ್ಷಣೆ ಮಾಡಿ, ಜನರ ಹಿತಕ್ಕೆ ಶ್ರಮಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಈಚೆಗೆ ಕೇಂದ್ರದಿಂದ ಪರಿಚಯಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಟೀಕಿಸಿದ ಅವರು, ವರ್ಷದ ಲೆಕ್ಕಾಚಾರದಲ್ಲಿ ಹೇಳುವುದಾದರೆ ದಿನಕ್ಕೆ ಹದಿನೇಳು ರುಪಾಯಿ ಕೂಡ ರೈತರಿಗೆ ಆ ಯೋಜನೆ ಅಡಿ ನೀಡುವುದಿಲ್ಲ. ಇದನ್ನು ಕೂಡ ಚುನಾವಣೆ ಗಮನ ಇಟ್ಟುಕೊಂಡು ಮಾಡಲಾಗಿದೆ. ತಾನು ಜನಪರ ಎನ್ನುವ ಪ್ರಧಾನಿ, ಕಾರ್ಪೊರೇಟ್ ಹೌಸ್ ಗಳ ಪರ ಇದ್ದಾರೆ. ಆವರನ್ನು ಚೌಕೀದಾರ್ ಎಂದು ಕರೆಯುವುದರಲ್ಲಿ ಆರ್ಥವಿಲ್ಲ ಎಂದಿದ್ದಾರೆ.












Click it and Unblock the Notifications