ಕಲಬುರಗಿ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ಕಲಬುರಗಿ, ನವೆಂಬರ್ 2: ಬಹಿರ್ದೆಸೆಗೆಂದು ಹೊರ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಘಟನೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಪೋಲಿಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಜಲಪುರ ತಾಲೂಕಿನ ವಿದ್ಯಾರ್ಥಿನಿ ಆಳಂದ ತಾಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಇತ್ತೀಚೆಗೆ ಬಾಲಕಿ ಹಬ್ಬಕ್ಕೆಂದು ಐದಾರು ದಿನಗಳ ಮಟ್ಟಿಗೆ ಊರಿಗೆ ಹೋಗಿದ್ದು, ಮಂಗಳವಾರವಷ್ಟೇ ಮರಳಿ ಕೊರಳ್ಳಿಗೆ ಬಂದಿದ್ದಳು. ಬಾಲಕಿಯ ಅತ್ತೆ ಮನೆಯಲ್ಲಿರುವಂತೆ ಹೇಳಿ ಹೊರ ಹೋಗಿದ್ದರು.

ಬಾಲಕಿ ಪಕ್ಕದ ಮನೆಯವರಿಗೆ ಬಹಿರ್ದೆಸೆಗೆ ಹೋಗುವುದಾಗಿ ಮಧ್ಯಾಹ್ನ ಮನೆಯಿಂದ ಹೋದವಳು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಬಾಲಕಿ ಅತ್ತೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದಾರೆ. ನಂತರ ಹುಡುಕಾಡಿದಾಗ ಸಮೀಪದ ಕಬ್ಬಿನ ತೋಟವೊಂದರ ಬಳಿ ಚಪ್ಪಲಿ ದೊರೆತಿದೆ, ನಂತರ ಗ್ರಾಮಸ್ಥರೆಲ್ಲರೂ ಸೇರಿ ಹುಡುಕಾಟ ನಡೆಸಿದಾಗ ಬಾಲಕಿ ಶವ ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನ ಬಯಲುಕಡೆ ಹೋಗಿದ್ದ ವೇಳೆ ಕೆಲ ದುಷ್ಕರ್ಮಿ ಬಾಲಕಿಯನ್ನು ಎಳೆದೊಯ್ದು ಕಬ್ಬಿನ ಗದ್ದೆಯಲ್ಲಿ ಕಾಲು, ಕೈ ಕಟ್ಟಿ ಹಾಕಿ ಬಲವಂತದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಬಾಲಕಿಯ ಮೈ ಮೇಲಿನ ಬಟ್ಟೆ ಹರಿದಿದ್ದು, ಅಲ್ಲಲ್ಲಿ ರಕ್ತದ ಕಲೆ ಕಂಡಿವೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿರಬಹದು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚವ್ಹಾಣ, ಪಿಎಸ್ಐ ತಿರುಮಲೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕುಟುಂಬ ಹಾಗೂ ಊರಿನವರಿಂದ ಮಾಹಿತಿ ಕಲೆಹಾಕಿದರು. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಂಡಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚವ್ಹಾಣ, ಪಿಎಸ್ಐ ತಿರುಮಲೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications