35 ಕೋಟಿ ಆಫರ್: ಕಾಂಗ್ರೆಸ್ ಶಾಸಕನಿಗೆ ನೋಟಿಸ್ ನೀಡಿದ ಸಚಿನ್ ಪೈಲೆಟ್
ಜೈಪುರ, ಜುಲೈ 22: ರಾಜ್ಯಸಭೆ ಚುನಾವಣೆ ವೇಳೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಸಚಿನ್ ಪೈಲೆಟ್ 35 ಕೋಟಿ ಆಫರ್ ನೀಡಿದ್ದರು ಎಂದು ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಆರೋಪಿಸಿದ್ದರು.
ಕಾಂಗ್ರೆಸ್ ಶಾಸಕನ ಈ ಆರೋಪದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್.
35 ಕೋಟಿ ಆಫರ್ ನೀಡಿದ್ದರು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಗಿರಿರಾಜ್ ಮಾಲಿಂಗ ಅವರಿಗೆ ಸಚಿನ್ ಪೈಲೆಟ್ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪದ ಕುರಿತು ವಿವರಣೆ ನೀಡುವಂತೆ ನ್ಯಾಯಾಲಯದ ಮೂಲಕ ಆಗ್ರಹಿಸಿದ್ದಾರೆ.

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಅಡ್ಡ ಮತದಾನ ಮಾಡಲು 35 ಕೋಟಿ ಆಫರ್ ನೀಡಿದ್ದರು. ಜೊತೆಗೆ ನಿನಗೆ ಏನು ಬೇಕು ಅದನ್ನು ಕೊಡಲು ಸಿದ್ಧ ಎಂದು ಸಹ ಸಚಿನ್ ಪೈಲೆಟ್ ಹೇಳಿದ್ದರು ಎಂದು ಸೋಮವಾರವಷ್ಟೇ ಕಾಂಗ್ರೆಸ್ ನಾಯಕ ಗಿರಿರಾಜ್ ಮಾಲಿಂಗ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ನಾನು ವಿಷಯ ತಿಳಿಸಿದ್ದೆ. ನಾನು ಸಚಿನ್ ಅವರ ಆಫರ್ ಗೆ ಒಪ್ಪಿಕೊಂಡಿಲ್ಲ. ಅದು ತಪ್ಪು ಎಂದು ಹೇಳಿ ತಿರಸ್ಕರಿಸಿದ್ದೆ ಎಂದು ಮಾಲಿಂಗ ಹೇಳಿದ್ದರು.
ಗಿರಿರಾಜ್ ಮಾಲಿಂಗ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿನ್ ಪೈಲೆಟ್ ''ಆಧಾರ ರಹಿತ ಆರೋಪಗಳ ಬಗ್ಗೆ ಆಶ್ಚರ್ಯವಾಗಿದೆ. ಇದು ನನ್ನ ವಿರುದ್ಧ ಹಾಗೂ ನನ್ನನ್ನು ಕೆಣಕಲು ಮಾಡಿರುವ ಆರೋಪ ಅಷ್ಟೆ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ'' ಎಂದಿದ್ದರು.












Click it and Unblock the Notifications