ಶಮನವಾಗದ ಬಂಡಾಯ, ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರಿಂದಲೇ ತಾಪತ್ರಯ!
Recommended Video

ಜೈಪುರ, ನವೆಂಬರ್ 22: ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರವೇ ಕೊನೇ ದಿನ. ಈ ಹಂತದಲ್ಲಿ ಬಂಡಾಯ ಎದ್ದಿರುವ ನಾಯಕರನ್ನು ಸಮಾಧಾನ ಮಾಡುವುದೇ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಟಿಕೆಟ್ ವಂಚಿತರಾದ ಸುಮಾರು 50 ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪಕದಷದ ವಿರುದ್ಧವೇ ಧಂಗೆ ಎದ್ದಿದ್ದಾರೆ. ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕಿಂತ ಹೆಚ್ಚಾಗಿ ಪಕ್ಷದ ಅತೃಪ್ತ ನಾಯಕರನ್ನು ಶಾಂತಗೊಳಿಸುವುದು ಮತ್ತು ಅವರು ಬೇರೆ ಪಕ್ಷಕ್ಕೆ ಸೇರದಂತೆ ನೋಡಿಕೊಳ್ಳುವುದೇ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿದೆ.
ಬಂಡಾಯ ನಾಯಕರಲ್ಲಿ ಹಲವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ, ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಲಿದಿದ್ದಾರೆ. ಇದೀಗ ಸತೃಪ್ತ ನಾಯಕರನ್ನು ಶಾಂತಗೊಳಿಸುವುದಕ್ಕಾಗಿಯೇ ಕಾಂಗ್ರೆಸ್ ಸ್ಟ್ರಾಟಜಿ ರೂಪಿಸಿದೆ.

ಏಳು ವಲಯಗಳಾಗಿ ವಿಭಜನೆ
ರಾಜ್ಯದಲ್ಲಿ ಬಂಡಾಯ ಎದ್ದಿರುವವರನ್ನು ಶಮನಗೊಳಿಸಲು ರಾಜ್ಯವನ್ನು ಏಳು ವಲಯಗಳನ್ನಾಗಿ ವಿಭಜಿಸಿಕೊಂಡಿರುವ ಕಾಂಗ್ರೆಸ್ ಎಲ್ಲಾ ವಲಯಗಳಿಗೂ ಹಿರಿಯ ಕಾಂಗ್ರೆಸ್ ನಾಯಕರಿಗೆ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಸ್ಥಳೀಯ ನಾಯಕರೇ ಈ ವಲಯಗಳ ಉಸ್ತುವಾರಿ ಹೊತ್ತಿದ್ದು, ಈ ಭಾಗದಲ್ಲಿ ಬಂಡಾಯ ಶಮನಕ್ಕೆ ಅವರು ಪ್ರಯತ್ನಿಸಲಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಾಗಿ ನಾಯಕರ ತಲೆದಂಡ!
ಟಿಕೆಟ್ ಸಿಗದೆ ಇದ್ದ ಕಾರಣಕ್ಕೆ ಪಕ್ಷದಲ್ಲೇ ಇದ್ದುಕೊಂಡೂ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಕೆಲ ನಾಯಕರನ್ನು ಕಾಂಗ್ರೆಸ್ ಮುಲಾಜಿಲ್ಲದೆ ಆಚೆ ಕಳಿಸಿದೆ. ಕಾಂಗ್ರೆಸ್ ಸದಸ್ಯೆ, ಇಲ್ಲಿನ ಫುಲೆರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಪರ್ಧಾ ಚೌಧರಿ ಎಂಬುವವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ.

ಟಿಕೆಟ್ ಗಾಗಿ ನೋಟು!
ಉಚ್ಛಾಟಿತರಾದ ಸ್ಪರ್ಧಾ ಚೌಧರಿ ಅವರು, ಕಾಂಗ್ರೆಸ್ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರು ಹಣ ಪಡೆದು ಟಿಕೆಟ್ ನೀಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಪೈಲಟ್ ಅವರು ತಾವು ಬೆಳೆಯಬೇಕೆಂದು ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ, ಟಿಕೆಟ್ ದೊರೆಯದಂತೆ ಮಾಡಿದ್ದಾರೆ ಎಂದು ಆಕೆ ದೂರಿದ್ದಾರೆ.

ಭ್ರಷ್ಟ ನಾಯಕರಿಗೆ ಟಿಕೆಟ್!
ಪಕ್ಷವು ಭ್ರಷ್ಟ ನಾಯಕರಿಗೆ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ಶಾಸಕ ರಮೇಶ್ ಮೀನಾ ಅವರು ಆರೋಪಿಸಿದ್ದಾರೆ. ಅವರಿಗೆ ಸಹ ಪಕ್ಷ ಟಿಕೆಟ್ ನೀಡದೆ ಇದ್ದಿದ್ದು ಅವರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಈಗಾಗಲೇ ಟಿಕೆಟ್ ದೊರೆಯದೆ ಬಂಡಾಯ ಎದ್ದಿರುವ ನಾಯಕರೆಲ್ಲರೂ ಒಟ್ಟಾಗಿ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ವಿರೋಧಿ ಅಲೆಯನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಬ್ಬಿಸಿದರೆ ಅದು ಪಕ್ಷಕ್ಕೆ ಭಾರೀ ನಷ್ಟವನ್ನುಂಟು ಮಾಡಲಿದೆ.

ಡಿ.7 ರಂಡು ಚುನಾವಣೆ
200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 195 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಐದು ಕ್ಷೇತ್ರಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.












Click it and Unblock the Notifications