ರಾಜಸ್ಥಾನ: ದಲಿತ ಬಾಲಕ ಹತ್ಯೆ ಪ್ರಕರಣ- ಗ್ರಾಮಕ್ಕೆ ಸಚಿನ್ ಪೈಲಟ್ ಭೇಟಿ
ಜೈಪುರ ಆಗಸ್ಟ್ 16: ರಾಜಸ್ಥಾನದಲ್ಲಿ ಮೇಲ್ಜಾತಿಗಳಿಗೆ ಮೀಸಲಾದ ಪಾತ್ರೆಯಲ್ಲಿದ್ದ ನೀರು ಕುಡಿದ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ಹಲ್ಲೆ ನಡೆಸಿದ್ದರಿಂದ ದಲಿತ ಬಾಲಕ ಸಾವನ್ನಪ್ಪಿರುವ ಘಟನೆ ಆಡಳಿತಾರೂಢ ಕಾಂಗ್ರೆಸ್ಗೆ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುವ ಭೀತಿ ಎದುರಾಗಿದೆ.
ಈ ಘಟನೆ ಪ್ರತಿಪಕ್ಷ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದೆ. ಅಶೋಕ್ ಗೆಹ್ಲೋಟ್ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ. ಈ ಘಟನೆ ಬಳಿಕ ಬರನ್-ಅತ್ರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪಣಚಂದ್ ಮೇಘವಾಲ್ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದಾರೆ. ಒಂಬತ್ತು ವರ್ಷದ ವಿದ್ಯಾರ್ಥಿಯ ಸಾವಿನಿಂದ ನನಗೆ ತೀವ್ರ ನೋವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಈ ಹಿಂದೆ ಬಂಡಾಯವೆದ್ದು ಗೆಹ್ಲೋಟ್ ಅವರ ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಬಾಲಕನ ಕುಟುಂಬವನ್ನು ಭೇಟಿ ಮಾಡಲು ಜಲೋರ್ ಜಿಲ್ಲೆಗೆ ತೆರಳುತ್ತಿದ್ದಾರೆ. "ನಾವು ಜಲೋರ್ನಂತಹ ಘಟನೆಗಳನ್ನು ಕೊನೆಗೊಳಿಸಬೇಕಾಗಿದೆ. ದಲಿತ ಸಮಾಜದ ಜನರೊಂದಿಗೆ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಬೇಕು" ಎಂದು ಪೈಲಟ್ ಹೇಳಿದ್ದಾರೆ.
"ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಭವಿಷ್ಯದಲ್ಲಿಯೂ ಹೀಗೆ ಮಾಡುತ್ತದೆ. ನಾವು ಈ ರೀತಿಯ ಸಮಸ್ಯೆಯನ್ನು ರಾಜಕೀಯಗೊಳಿಸಬಾರದು" ಎಂದು ಗೆಹ್ಲೋಟ್ ಹೇಳಿದ್ದಾರೆ. ಜೊತೆಗೆ ಪೈಲಟ್ ರಾಜಕೀಯ ಮೈಲೇಜ್ ಸೆಳೆಯಲು ಬಿಡಬಾರದು ಎಂದು ನಿರ್ಧರಿಸಿದ ಮುಖ್ಯಮಂತ್ರಿ ಈಗ ಹಿರಿಯ ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ಜಲೋರ್ಗೆ ಕಳುಹಿಸಿದ್ದಾರೆ.
ಕೆಳಜಾತಿಯ ಬಾಲಕನಿಗೆ ಥಳಿಸಿದ ಶಿಕ್ಷಕ
ಕಳೆದ ಜು. 20 ರಂದು ಇಲ್ಲಿನ ಸುರಾಣಾ ಗ್ರಾಮದ ಖಾಸಗಿ ಶಾಲೆಯಲ್ಲಿ ಒಂಬತ್ತು ವರ್ಷದ ಬಾಲಕ ಇಂದ್ರ ಮೇಘವಾಲ್ನನ್ನು ನೀರಿನ ಮಡಿಕೆ ಮುಟ್ಟಿದ್ದಕ್ಕೆ ಶಿಕ್ಷಕರು ಥಳಿಸಿದ್ದರು. ಈ ವೇಳೆ ಪ್ರಜ್ಞೆ ತಪ್ಪಿದ್ದ ಬಾಲಕನನ್ನು 3 ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಆತ ಕಳೆದ ವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಥಳಿಸಿದ ಶಿಕ್ಷಕ ಚಾಯಿಲ್ ಸಿಂಗ್ (40)ನನ್ನು ಹತ್ಯೆಯ ಆರೋಪ ಹಾಗೂ ಪರಿಶಿಷ್ಟಜಾತಿ ಹಾಗೂ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು ಆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯ ಶಿಕ್ಷಣ ಇಲಾಖೆ ಘಟನೆ ಕುರಿತು ವಿಚಾರಣೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಘಟನೆಯ ತನಿಖೆ ನಡೆಸುವಂತೆ ನೇಮಿಸಲಾಗಿದ್ದು, ವಾರದ ಒಳಗೆ ವರದಿಯನ್ನು ಬ್ಲಾಕ್ ಶಿಕ್ಷಣ ಅಧಿಕಾರಿ ಬಳಿ ಸಲ್ಲಿಸುವಂತೆ ಸೂಚಿಸಲಾಗಿದೆ. ರಾಜಸ್ಥಾನದ ಪರಿಶಿಷ್ಟಜಾತಿ ಆಯೋಗದ ಮುಖ್ಯಸ್ಥ ಖಿಲಾಡಿ ಲಾಲ್ ಬೈರ್ವಾ ಘಟನೆ ತ್ವರಿತ ತನಿಖೆಗೆ ಆಗ್ರಹಿಸಿದ್ದಾರೆ.
5 ಲಕ್ಷ ನೆರವು
ಪ್ರಕರಣದಲ್ಲಿ ದಾಖಲಾದ ಎಫ್ಐಆರ್ನಲ್ಲಿ ಇಂದ್ರ "ನಿಷ್ಕಪಟ ಮತ್ತು ಮೇಲ್ಜಾತಿಯ ಶಿಕ್ಷಕರಿಗಾಗಿ ಮಡಕೆಯನ್ನು ಇಡಲಾಗಿದೆ ಎಂದು ತಿಳಿದಿರಲಿಲ್ಲ" ಎಂದು ಹೇಳುತ್ತದೆ. "ಶಿಕ್ಷಕ ಚೈಲ್ ಸಿಂಗ್ ಹುಡುಗನಿಗೆ 'ನೀನು ಕೆಳಜಾತಿಯವನು, ನನ್ನ ಮಡಕೆಯಿಂದ ನೀರು ಕುಡಿಯಲು ನಿನಗೆ ಎಷ್ಟು ಧೈರ್ಯ! ಎಂದು ನಂತರ ಅವರು ಇಂದ್ರನನ್ನು ಥಳಿಸಿದ್ದಾರೆ" ಎಂದು ಎಫ್ಐಆರ್ ಹೇಳುತ್ತದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರಕರಣದ ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಸಂತ್ರಸ್ತ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ದೊರಕಿಸಿಕೊಡಲಾಗುವುದು. ಜೊತೆಗೆ ₹ 5 ಲಕ್ಷ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಶಾಸಕ ರಾಜೀನಾಮೆ
ಮಗುವಿನ ಸಾವು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಬಿಜೆಪಿ ಹೇಳಿತ್ತು. "ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜಸ್ಥಾನದಲ್ಲಿ ದಲಿತರಿಗೆ ನ್ಯಾಯ ದೊರಕಿಸಿಕೊಡಲು ಗೆಹ್ಲೋಟ್ಗೆ ಯಾವಾಗ ಸಲಹೆ ನೀಡುತ್ತಾರೆ" ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಜೊತೆಗೆ ಕಾಂಗ್ರೆಸ್ ಶಾಸಕ ಮೇಘವಾಲ್ ರಾಜ್ಯದಲ್ಲಿ ಜಾತಿ ಅಪರಾಧಗಳನ್ನು ಫ್ಲ್ಯಾಗ್ ಮಾಡುವ ಮೂಲಕ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Recommended Video
ಗೆಹ್ಲೋಟ್ v/s ಪೈಲಟ್
ಇಂತಹ ಪ್ರಕರಣಗಳ ತನಿಖೆಯ ಹೆಸರಿನಲ್ಲಿ ಕಡತಗಳನ್ನು ಮಾತ್ರ ಸರಿಸಲಾಗಿದೆ ಎಂದು ಶಾಸಕರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ ಮತ್ತು ಅವರು ವಿಧಾನಸಭೆಯಲ್ಲಿ ಪ್ರಕರಣಗಳನ್ನು ಪ್ರಸ್ತಾಪಿಸಿದರೂ ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸಲಿಲ್ಲ. "ನಮ್ಮ ಸಮಾಜದ ಹಕ್ಕುಗಳನ್ನು ರಕ್ಷಿಸಲು ಮತ್ತು ನ್ಯಾಯವನ್ನು ಪಡೆಯಲು ನಮಗೆ ಸಾಧ್ಯವಾಗದಿದ್ದಾಗ, ಈ ಹುದ್ದೆಯಲ್ಲಿ ಮುಂದುವರಿಯಲು ನಮಗೆ ಯಾವುದೇ ಹಕ್ಕಿಲ್ಲ" ಎಂದು ಅವರು ಬರೆದಿದ್ದಾರೆ.
ಸದ್ಯ ಪೈಲಟ್ ಅವರ ಭೇಟಿಯಿಂದ ಗೆಹ್ಲೋಟ್ ಮೇಲೆ ಜನ ಭರವಸೆ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 2020 ರ ಬಂಡಾಯದ ನಂತರ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬಹುತೇಕ ಉರುಳಿಸಿದ ನಂತರ, ಪಕ್ಷದ ಹೈಕಮಾಂಡ್ನ ಮಧ್ಯಸ್ಥಿಕೆಯಿಂದಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಅಹಿತಕರ ಸಮತೋಲನವು ಮುಂದುವರೆದಿದೆ. ಆದರಲ್ಲೂ ಗೆಹ್ಲೋಟ್ ಮತ್ತು ಪೈಲಟ್ ನೇತೃತ್ವದ ಶಿಬಿರಗಳ ನಡುವೆ ಘರ್ಷಣೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಜಾಲೋರ್ಗೆ ಪೈಲಟ್ರ ಪ್ರವಾಸವನ್ನು ಉತ್ಸುಕತೆಯಿಂದ ವೀಕ್ಷಿಸುತ್ತಿದ್ದಾರೆ.