ಜಾತಿ, ಜಾತಿ, ಜಾತಿ... ರಾಜಸ್ಥಾನ ರಾಜಕೀಯದ ಮೂಲಮಂತ್ರ!
ಜೈಪುರ, ಡಿಸೆಂಬರ್ 07: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಂಗತಿಗಳು ಮೂರು... 1. ಜಾತಿ, 2. ಜಾತಿ, 3. ಜಾತಿ!
ನಿಜ, ಕರ್ನಾಟಕಕ್ಕೂ ರಾಜಸ್ಥಾನ ಚುನಾವಣೆಗೂ ಹೆಚ್ಚು ವ್ಯತ್ಯಾಸವಿಲ್ಲ. ಎರಡು ರಾಜ್ಯಗಳಲ್ಲೂ ಜಾತಿಯೇ ಮೂಲಮಂತ್ರ. ಈ ಬಾರಿಯೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಜಾತಿಯೇ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ರಾಜಸ್ಥಾನದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ವಸುಂಧರಾ ರಾಜೆ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಈ ಕಾರಣದಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದ್ದು, ಉಭಯ ಪಕ್ಷಗಳೂ ಜಾತಿಯನ್ನೇ ಬ್ರಹ್ಮಾಸ್ತ್ರವನ್ನಾಗಿ ಪ್ರಯೋಗಿಸಿವೆ.

ಜಾತಿಯದ್ದೇ ಕಾರುಬಾರು!
ರಾಜಸ್ಥಾನದಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಬಿಜೆಪಿ ಯಾವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆಯೋ, ಅದೇ ಸಮುದಾಯದ ಅಭ್ಯರ್ಥಿಯನ್ನು, ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಸಹ ಕಣಕ್ಕಿಳಿಸಿದೆ. ಅಂದರೆ ಅಭ್ಯರ್ಥಿಯ ಅಭಿವೃದ್ಧಿ ಕಾರ್ಯಗಳಿಗಿಂತ ಆತನ ಜಾತಿಯೇ ಪ್ರಮುಖ ಪಾತ್ರ ವಹಿಸುತ್ತದೆ ಎಂದಾಯ್ತು! ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಗೆದ್ದರೂ ಶಾಸಕರು ಮಾತ್ರ ಒಂದೇ ಸಮುದಾಯದವರಾಗಿರುತ್ತಾರೆ.

ಈ ಜಾತಿ ರಾಜಕಾರಣದ ತರ್ಕವೇನು?
ದೇಶದ ಚುನಾವಣಾ ಇತಿಹಾಸವನ್ನು ಅವಲೋಕಿಸಿದರೆ ಒಂದು ಕ್ಷೇತ್ರದಲ್ಲಿ ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಮತಗಳು ಶೇ.10 ಕ್ಕಿಂತ ಹೆಚ್ಚಿದ್ದರೆ ಆ ಸಮುದಾಯದ ಅಭ್ಯರ್ಥಿ ಗೆಲ್ಲುತ್ತಾನೆ. ಒಟ್ಟಾರೆಯಾಗಿ ನೋಡಿದರೆ, ಯಾವ ಸಮುದಾಯದ ಮತಗಳು ಶೇ.10 ಕ್ಕಿಂತ ಹೆಚ್ಚಿದೆಯೋ ಆ ಸಮುದಾಯವೇ ಸರ್ಕಾರ ರಚನೆಗೂ ಸಹಕರಿಸಿದೆ. ಆದ್ದರಿಂದಲೇ ಜಾತಿಯೇ ರಾಜಕೀಯದ ಮೂಲಮಂತ್ರವಾಗಿ ಬದಲಾಗಿದೆ.

ರಾಜಸ್ಥಾನದಲ್ಲಿ 272 ಜಾತಿ!
ರಾಜಸ್ಥಾನದಲ್ಲಿ ಒಟ್ಟು 272 ಜಾತಿಗಳಿವೆ. ಇವುಗಳಲ್ಲಿ ಶೇ.51 ರಷ್ಟು ಜನರು ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿದವರು. ಜಾತ್ ಸಮುದಾಯದವರು 9%, ಗುಜ್ಜಾರ್ 5%, ಮಾಲಿ 4%, ಪರಿಶಿಷ್ಠ ಜಾತಿಯ 18% ರಷ್ಟು ಜನರಿದ್ದಾರೆ. ಇನ್ನು ಈ ರಾಜ್ಯದಲ್ಲಿ ಇತರೆ 59 ಉಪಜಾತಿಗಳಿದ್ದು, ಅವುಗಳಲ್ಲಿ ಮೆಘಾವತ್ 6%, ಬೈರವ 3 %, ಭೀಲ್ 4% ಮತ್ತು ಇತರರು 18 ಪ್ರತಿಶತ ಜನರಿದ್ದಾರೆ. ಬ್ರಾಹ್ಮಣರು 7%, ರಜಪೂತರು 6% ಮತ್ತು ವೈಶ್ಯ 4 % ಪ್ರತಿಶತ ಜನರಿದ್ದಾರೆ.

ಯಾವೆಲ್ಲ ಜಾತಿಗಳು ಪ್ರಭಾವಿಗಳು
ರಾಜಸ್ಥಾನದ ರಾಜಕೀಯದಲ್ಲಿ ಜಾತ್, ಮೀನಾ, ರಾಜಪೂತ್ ಮತ್ತು ಬ್ರಾಹ್ಮಣ ಸಮುದಾಯದ ಜನರು ಪ್ರಭಾವಿಗಳು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಈ ಸಮುದಾಯಗಳ ಒಟ್ಟು 60 ನಾಯಕರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿವೆ. ಆಯಾ ಜಾತಿಯ ಅಭ್ಯರ್ಥಿಯ ಎದುರು ಅದೇ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಪಗಡೆಯಾಟದ ದಾಳವನ್ನು ಜಾತಿಯ ಅಂಗಳದಲ್ಲಿರಿಸಿದೆ.

ಡಿಸೆಂಬರ್ 11 ರಂದು ಫಲಿತಾಂಶ
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನ ಡಿ. ರಂದು ನಡೆದಿದೆ. ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ನಾಳೆ 199 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ.












Click it and Unblock the Notifications