ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಶಾಕ್ ನೀಡಲಿರುವ ಜಾತಿ ರಾಜಕೀಯ!
ಜೈಪುರ, ನವೆಂಬರ್ 20: ರಾಜಸ್ಥಾನದ ಉಳಿದೆಲ್ಲ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆ ಬಹಳ ಮಹತ್ವದ್ದೆನ್ನಿಸಿದೆ. ಚುನಾವಣೆ ಸನಿಹದಲ್ಲಿರುವಾಗ ಪ್ರಮುಖ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಈ ಎರಡು ಪಕ್ಷಗಳಿಂದ ಟಿಕೆಟ್ ವಂಚಿತರಾಗಿರುವ ಕೆಲವು ಅಭ್ಯರ್ಥಿಗಳು ಸ್ವತಂತ್ರ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತದೆ. ಸ್ವತಂತ್ರ್ ಅಭ್ಯರ್ಥಿಳಾಗಿ ಸ್ಪರ್ಧಿಸಲಿರುವ ನಾಯಕರು ಜಾತಿ ರಾಜಕಾರಣವನ್ನೇ ಅಸ್ತ್ರವನ್ನಾಗಿ ಬಳಸಲಿದ್ದಾರೆ.
ಟಿಕೆಟ್ ಸಿಕ್ಕಿಲ್ಲ ಎಂಬ ಅನುಕಂಪವೊಂದೆಡೆ, ಜಾತಿ ನಾಯಕ ಎಂಬ ಅಭಿಮಾನ ಇನ್ನೊಂದೆಡೆ ಸೇರಿ ಸ್ವತಂತ್ರ್ ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮತವನ್ನು ಒಡೆಯುವುದು ಖಂಡಿತ ಎನ್ನಿಸಿದೆ. ಅಷ್ಟೇ ಅಲ್ಲ, ಇಲ್ಲಿನ ಸಣ್ಣ ಸಣ್ಣ ಸ್ಥಳೀಯ ಪಕ್ಷಗಳೂ ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ತಲೆನೋವಾಗಲಿವೆ.

ಅತೀ ಹೆಚ್ಚು ಡ್ಯಾಮೇಜ್ ಯಾರಿಂದ?
ಒಂದು ಕಾಲದಲ್ಲಿ ಬಿಜೆಪಿಯಲ್ಲಿದ್ದ ಹನುಮಾನ್ ಬೆನಿವಾಲ್ 2013 ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ನಾಗೋರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ ಎಂಬ ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಅವರು ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ತನ್ನ ಪಕ್ಷದಿಂದ 65 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅವರು ಈ ವರ್ಷ ಚುನಾವಣೆಗೆ ಕಣಕ್ಕಿಳಿಸಿದ್ದಾರೆ. ಜಾರಿ ರಾಜಕೀಯ ಕೆಲಸ ಮಾಡುತ್ತದೆ ಎಂಬುದನ್ನು ಬಲ್ಲ ಅವರು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಸಾಕಷ್ಟು ಅಳೆದು, ತೂಗಿ ನಿರ್ಧಾರ ಕೈಗೊಂಡಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಮೇಲೆ ಬ್ರಹ್ಮಾಸ್ತ್ರ ಹೂಡಿದ ಬೆನಿವಾಲ್!
ಜಾಟ್ ಸಮುದಾಯಕ್ಕೆ ಸೇರಿದ ಬೆನಿವಾಲ್ ಬಿಜೆಪಿ ಮತಗಳನ್ನು ಕಬಳಿಸಲು ಜಾಟ್ ಸಮುದಾಯದ ಅಭ್ಯರ್ಥಿಗಳನ್ನು ಕೆಲವೆಡೆ ಕಣಕ್ಕಿಳಿಸಿದ್ದಾರೆ. ಮತ್ತು ಕಾಂಗ್ರೆಸ್ ಮತಗಳನ್ನು ಸೆಳೆಯಲು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅದೂ ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಯಾವ್ಯಾವ ಜಾತಿಯನ್ನು ಕಡೆಗಣಿಸುತ್ತಿದೆ ಎಂಬುದನ್ನು ಗಮನಿಸಿ, ಆ ಜಾತಿಯ ಜನರನ್ನು ಸೆಳೆಯಲು ಏನೆಲ್ಲ ಪ್ರಯತ್ನ ಮಾಡಬೇಕೋ ಅದನ್ನು ಬೆನಿವಾಲ್ ಮಾಡುತ್ತಿದ್ದಾರೆ.

ಬಿಜೆಪಿ ತೊರೆದಿದ್ದ ಬೆನಿವಾಲ್
2008 ರವರೆಗೂ ಬಿಜೆಪಿಯಲ್ಲೇ ಇದ್ದ ಬೆನಿವಾಲ್ ನಂತರ ಹಾಲಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರೊಂದಿಗೆ ಮನಸ್ತಾಪವುಂಟಾಗಿ ಬಿಜೆಪಿ ತೊರೆದಿದ್ದರು. 2013 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬೆನಿವಾಲ್ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ಅವಅರು ಮಾಡಿದ ಹಲವು rally ಗಳು ಅವರನ್ನು ಜಾಟ್ ಸಮುದಾಯದ ಪ್ರಮುಖ ನಾಯಕರನ್ನಾಗಿ ರೂಪಿಸಿತು. ಸದ್ಯಕ್ಕೆ ರಾಜಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ಸಿಗೆ ತಲೆನೋವಾಗುವ ಮಟ್ಟಿಗೆ ಬೆನಿವಾಲ್ ಬೆಳೆದು ನಿಂತಿದ್ದಾರೆ.

ಬಂಡಾಯಗಾರರಿಗೆ ಅವಕಾಶ: ಇದು ಬೆನಿವಾಲ್ ತಂತ್ರ
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಟಿಕೆಟ್ ದೊರಕದೆ ಇರುವ ಬಂಡಾಯಗಾರರನ್ನು ಸೆಳೆಯುವಲ್ಲಿಯೂ ಬೆನಿವಾಲ್ ಯಶಸ್ವಿಯಾಗಿದ್ದಾರೆ. ಅಂಥವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿ ಟಿಕೆಟ್ ನೀಡಿದ್ದಾರೆ. ವಸುಂಧರಾ ರಾಜೆ ಮತ್ತು ಕಾಂಗ್ರೆಸ್ಸಿನ ಅಶೋಕ್ ಗೆಹ್ಲೋಟ್ ಇಬ್ಬರನ್ನೂ ಈ ರಾಜ್ಯದಿಂದ ಕಿತ್ತೆಸೆಯುವುದೇ ತಮ್ಮ ಆದ್ಯ ಗುರಿ ಎನ್ನುತ್ತಿರುವ ಬೆನಿವಾಲ್ ತಮ್ಮ ಗುರಿ ಸಾಧಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

ಯಾವಾಗ ಚುನಾವಣೆ
ಎಂದು ಚುನಾವಣೆ? ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.












Click it and Unblock the Notifications