ಚೆಂದದ ಭಾಷಣ ಮಾಡುತ್ತಾರೆ, ಆದರೆ ಮುಸ್ಲಿಮರಿಗೆ ಟಿಕೆಟ್ ಮಾತ್ರ ನೀಡುವುದಿಲ್ಲ: ಗೆಹ್ಲೋಟ್
ಜೈಪುರ, ಡಿಸೆಂಬರ್ 26: ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ. ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಪ್ರಧಾನಿ ಮೋದಿ ಚೆಂದದ ಭಾಷಣ ಮಾಡುತ್ತಾರೆ. ಆದರೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಮಾತ್ರ ನೀಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಜೈಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳನ್ನು ಬಲವಂತವಾಗಿ ಅನುಮೋದನೆ ಮಾಡಿದ ಬಳಿಕ ರೈತರೊಂದಿಗೆ ಮೋದಿ ಸರ್ಕಾರದಂತೆ ಯಾರೂ ಸಂವೇದನೆ ಇಲ್ಲದಂತೆ ವರ್ತಿಸಬಾರದು ಎಂದರು.
ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಸಂಚಿನಲ್ಲಿ ಬಿಜೆಪಿಯ ಜಫರ್ ಇಸ್ಲಾಂ ಅವರು ಭಾಗಿಯಾಗಿದ್ದರು. ಆದರೆ ಮುಸ್ಲಿಮರ ವಿಚಾರದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

'ಉತ್ತರ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಸೀಟುಗಳಿವೆ. ಬಿಹಾರದಲ್ಲಿ ಸುಮಾರು 250 ಸೀಟುಗಳಿವೆ. ಬಿಜೆಪಿಯು ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಆದರೆ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮೋದಿ ಅವರು ಎಂತಹ ಸುಂದರ ಭಾಷಣ ಮಾಡಿದರು. ಅವರು ಹೇಳುವುದಕ್ಕೂ ಮತ್ತು ಮಾಡುವುದಕ್ಕೂ ಎಷ್ಟು ದೊಡ್ಡ ವ್ಯತ್ಯಾಸವಿದೆ. ಬಿಜೆಪಿಯು ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ. ಆದರೆ ಸರ್ಕಾರಗಳನ್ನು ಉರುಳಿಸಲು ಮುಸ್ಲಿಮರನ್ನು ಬಳಸಿಕೊಳ್ಳುತ್ತದೆ' ಎಂದು ಟೀಕಿಸಿದರು.
'ನಮ್ಮ ಕಾಲದಲ್ಲಿ ಮುಖ್ಯಮಂತ್ರಿ ಹೋಟೆಲ್ಗೆ ಹೋದರು ಎಂಬ ಕಾರಣಕ್ಕೆ ರಾಜೀನಾಮೆ ಸಲ್ಲಿಸುವಂತಾಗಿತ್ತು. ಕಾನೂನು ಸಚಿವರು ರಾಜೀನಾಮೆ ಕೊಡುವಂತಾಗಿತ್ತು, ರೈಲ್ವೆ ಸಚಿವರು ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಅವರು ಮಾಧ್ಯಮದ ಕಣ್ಣಿನಲ್ಲಿ ಏಳು ಕೊಲೆಗಳನ್ನು ಮಾಡಿದರೂ ಒಪ್ಪಿಕೊಳ್ಳುವಂತಿದೆ' ಎಂದರು.












Click it and Unblock the Notifications