ರಾಜೀನಾಮೆ ವದಂತಿ: ಸ್ಪಷ್ಟನೆ ನೀಡಿದ ರಾಜಸ್ಥಾನ ಸಿಎಂ ಗೆಹ್ಲೋಟ್
ಜೈಪುರ, ಏಪ್ರಿಲ್ 24: ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ರಾಜೀನಾಮೆಯ ವದಂತಿಯ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟನೆಯನ್ನು ನೀಡಿದ್ದಾರೆ. "ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ"ಎಂದು ಹೇಳಿದ್ದಾರೆ.
ರಾಜ್ಯದ ಮತ್ತೋರ್ವ ಪ್ರಭಾವೀ ಮುಖಂಡ ಸಚಿನ್ ಪೈಲಟ್ ಅವರು ಎಐಸಿಸಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾದ ನಂತರ, ಗೆಹ್ಲೋಟ್ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಹರಿದಾಡಲಾರಂಭಿಸಿತ್ತು.
15 ಸಚಿವರು ಪ್ರಮಾಣ ವಚನ ಸ್ವೀಕಾರ: 2023ರ ಚುನಾವಣೆಗೆ ಕಾಂಗ್ರೆಸ್ ಸಜ್ಜು
ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುನ್ನ ರಾಜಸ್ಥಾನ ಕಾಂಗ್ರೆಸ್ನಲ್ಲಿ ಬದಲಾವಣೆ ಸಾಧ್ಯ ಎಂಬ ಊಹಾಪೋಹಗಳ ಮಧ್ಯೆ ನನ್ನ ರಾಜೀನಾಮೆ ಪತ್ರ ಸೋನಿಯಾ ಗಾಂಧಿಯವರ ಬಳಿ ಶಾಶ್ವತವಾಗಿ ಇದೆ ಎಂದು ಗೆಹ್ಲೋಟ್ ಹೇಳಿದ್ದಾರೆ.
"ನನ್ನ ರಾಜೀನಾಮೆ ಪತ್ರ ಶಾಶ್ವತವಾಗಿ ಸೋನಿಯಾ ಗಾಂಧಿಯವರ ಬಳಿ ಇದೆ, ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಬದಲಾಯಿಸಲು ನಿರ್ಧರಿಸಿದಾಗ, ಯಾರಿಗೂ ಸುಳಿವು ಸಿಗುವುದಿಲ್ಲ. ಅದರ ಬಗ್ಗೆ ಯಾವುದೇ ಚರ್ಚೆ ಮಾಡಲಾಗುವುದಿಲ್ಲ"ಎಂದು ಅಶೋಕ್ ಗೆಹ್ಲೋಟ್ ಸ್ಪಷ್ಟ ಪಡಿಸಿದ್ದಾರೆ.
"ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ನಿಮ್ಮೆಲ್ಲರಲ್ಲಿ ನನ್ನ ಮನವಿ ಏನೆಂದರೆ, ಆಡಳಿತದ ಮೇಲೆ ಪರಿಣಾಮ ಬೀರುವ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ"ಎಂದು ಮನವಿಯನ್ನು ಸಿಎಂ ಗೆಹ್ಲೋಟ್ ಮಾಡಿದ್ದಾರೆ.
"ಕಳೆದ 2-3 ದಿನಗಳಿಂದ ರಾಜಸ್ಥಾನದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ, ಇದು ಸರಿಯಲ್ಲ"ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳೆದ ಗುರುವಾರ (ಏ 21), ಸಚಿನ್ ಪೈಲಟ್, ಹೈಕಮಾಂಡ್ ನಾಯಕರನ್ನು ಅವರನ್ನು ಭೇಟಿಯಾಗಿದ್ದರು.