ಅಶೋಕ್ ಗೆಹ್ಲೋಟ್ ಸಹೋದರನ ಕಂಪನಿ ಮೇಲೆ ಇಡಿ ದಾಳಿ
ಜೈಪುರ, ಜುಲೈ 22 : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರನ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾಜಸ್ಥಾನದಲ್ಲಿನ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ನಡೆದಿರುವ ದಾಳಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ರಸಗೊಬ್ಬರಗಳ ರಫ್ತು ವಿಚಾರದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಬುಧವಾರ ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಇಡಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೈನ್ ಗೆಹ್ಲೋಟ್ ನಡೆಸುತ್ತಿರುವ ಕಂಪನಿ 2007 ರಿಂದ 2009ರ ತನಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಬ್ಸಿಡಿ ದರದ ರಸಗೊಬ್ಬರಗಳನ್ನು ರಫ್ತು ಮಾಡಿದ್ದಾರೆ ಎಂಬುದು ಆರೋಪ.

2017ರ ನವೆಂಬರ್ನಲ್ಲಿ ಬಿಜೆಪಿ ಮೊದಲು ಈ ಕುರಿತು ಪ್ರಸ್ತಾಪ ಮಾಡಿತ್ತು. ಸಬ್ಸಿಡಿಯುಕ್ತ ಪೊಟ್ಯಾಷ್ ರಫ್ತು ಮಾಡಲು ನಿಷೇಧ ಹೇರಲಾಗಿದೆ. ಆದರೂ ಸಹ ಅಗ್ರಸೈನ್ ಗೆಹ್ಲೋಟ್ ನಡೆಸುವ ಕಂಪನಿ ರಫ್ತು ಮಾಡಿದೆ ಎಂಬುದು ಆರೋಪವಾಗಿದ್ದು, ಇಡಿ ಈ ಕುರಿತು ತನಿಖೆ ಕೈಗೊಂಡಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಸಚಿನ್ ಪೈಲೆಟ್ ಗೆಹ್ಲೋಟ್ ವಿರುದ್ಧ ಅಸಮಾಧಾನಗೊಂಡು ಬಂಡಾಯ ಎದ್ದಿದ್ದಾರೆ. ಇಂತಹ ಸಮಯದಲ್ಲಿಯೇ ಇಡಿ ದಾಳಿ ನಡೆದಿದೆ.
ಬಿಕ್ಕಟ್ಟು ಉಂಟಾಗಿರುವ ರಾಜಸ್ಥಾನದಲ್ಲಿ ಬಿಜೆಪಿ 76 ಶಾಸಕರ ಬಲವನ್ನು ಹೊಂದಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಇನ್ನೂ 25ಕ್ಕೂ ಅಧಿಕ ಶಾಸಕರ ಅಗತ್ಯವಿದೆ. ಸಚಿನ್ ಪೈಲೆಟ್ ಜೊತೆಗೆ 21 ಶಾಸಕರು ಇದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ಅನ್ನು ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ.












Click it and Unblock the Notifications