ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದ ಬಿಜೆಪಿ!
ಜೈಪುರ, ಆಗಸ್ಟ್ 13 : ರಾಜಸ್ಥಾನ ವಿಧಾನಸಭೆ ಅಧಿವೇಶನ ಶುಕ್ರವಾರ ಆರಂಭವಾಗಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಅಧಿವೇಶನ ಅಗ್ನಿ ಪರೀಕ್ಷೆಯಾಗಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.
ಒಂದು ತಿಂಗಳಿನಿಂದ ರಾಜಸ್ಥಾನ ಕಾಂಗ್ರೆಸ್ನಲ್ಲಿನ ಬಿಕ್ಕಟ್ಟು ಶಮನವಾಗಿದೆ. ಸರಣಿ ಸಭೆಗಳು, ಆರೋಪ-ಪ್ರತ್ಯಾರೋಪ, ಹೈಕೋರ್ಟ್, ಸುಪ್ರೀಂಕೋರ್ಟ್ ಎಲ್ಲಾ ಕಡೆ ಸದ್ದು ಮಾಡಿದ್ದ ಬಿಕ್ಕಟ್ಟು ಬಗೆಹರಿಸಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವ ಬಾವುಟ ಹಾರಿಸಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್, 18 ಶಾಸಕರು ಜೈಪುರಕ್ಕೆ ವಾಪಸ್ ಆಗಿದ್ದಾರೆ. ಪಕ್ಷದಲ್ಲಿಯೇ ಇರುತ್ತೇವೆ ಎಂದು ಅವರು ಘೋಷಣೆ ಮಾಡಿದ್ದಾರೆ.
ಶುಕ್ರವಾರ ರಾಜಸ್ಥಾನ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿದೆ. ಇದರಿಂದಾಗಿ ಅಶೋಕ್ ಗೆಹ್ಲೋಟ್ ಅವರು ಸದನದಲ್ಲಿ ಬಹುಮತ ಸಾಬೀತು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಬಿಜೆಪಿ ಶಾಸಕರ ಸಭೆ
ಗುರುವಾರ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಶುಕ್ರವಾರ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.

72 ಸದಸ್ಯ ಬಲವಿದೆ
ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಪಕ್ಷವಾಗಿದೆ. ವಿಧಾನಸಭೆಯಲ್ಲಿ ಪಕ್ಷ 72 ಸದಸ್ಯ ಬಲವನ್ನು ಹೊಂದಿದೆ. ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ಗೆ 30 ಶಾಸಕರ ಬಲ ಅಗತ್ಯವಿದೆ.

ಗೆಹ್ಲೋಟ್ ಸರ್ಕಾರಕ್ಕೆ ಬಹುಮತ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಬಹುಮತವಿದೆ. ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರ ಹೊರ ಹೋಗಿದ್ದಾಗಲೇ ಸರ್ಕಾರಕ್ಕೆ 102 ಸದಸ್ಯಬಲವಿತ್ತು. ಈಗ ಸಚಿನ್ ಪೈಲೆಟ್ ಮತ್ತು ಅವರ ಬೆಂಬಲಿಗರು ವಾಪಸ್ ಬಂದಿದ್ದು, ಸರ್ಕಾರವನ್ನು ಬೆಂಬಲಿಸುವ ಶಾಸಕರ ಸಂಖ್ಯೆ ಇನ್ನೂ ಹೆಚ್ಚಾಗಿದೆ.

200 ಸದಸ್ಯ ಬಲದ ವಿಧಾನಸಭೆ
ರಾಜಸ್ಥಾನ ವಿಧಾನಸಭೆಯ ಒಟ್ಟು ಸದಸ್ಯ ಬಲ 200. ಸರ್ಕಾರ ಬಹುಮತ ಸಾಬೀತು ಮಾಡಲು 101 ಶಾಸಕರ ಬಲಬೇಕು. ಕಾಂಗ್ರೆಸ್ 107 ಶಾಸಕರ ಬಲ ಹೊಂದಿದೆ. ಬಿಎಸ್ಪಿಯ 6 ಶಾಸಕರು ಸರ್ಕಾರದ ಜೊತೆ ಇದ್ದಾರೆ. ಒಬ್ಬರು ಪಕ್ಷೇತರ ಶಾಸಕರು ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೂ ಗೆಹ್ಲೋಟ್ ಸರ್ಕಾರ ಬಹುಮತ ಗಳಿಸುವುದರಲ್ಲಿ ಅನುಮಾನವಿಲ್ಲ.












Click it and Unblock the Notifications