ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಬಸ್: 6 ಮಂದಿ ಸಜೀವ ದಹನ
ಜೈಪುರ, ಜನವರಿ 17: ಬಸ್ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡ ಪರಿಣಾಮ 6 ಮಂದಿ ಸಜೀವ ದಹನವಾಗಿದ್ದು ಹಲವರು ಗಂಭೀರ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ 36 ಮಂದಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಾಸಗಿ ಬಸ್ ವೊಂದು ಮಂಡೋರ್ ನಿಂದ ಬ್ಯಾವರ್ ಗೆ ಹೋಗುತ್ತಿದ್ದು, ಈ ವೇಳೆ ಮಹೇಶ್ ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಬಸ್ ನ ಮೇಲ್ಭಾಗಕ್ಕೆ ಎಲೆಕ್ಟ್ರಿಕ್ ಕೇಬಲ್ ವೈಯರ್ ತಗುಲಿದೆ. ಇದು ಚಾಲಕನ ಗಮನಕ್ಕೆ ಬಂದಿಲ್ಲ.
ಈ ನಡುವೆ ಘಟನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕೂಡಲೇ ಬಸ್ ಗೆ ಕೇಬಲ್ ವೈಯರ್ ನಿಂದ ವಿದ್ಯುತ್ ಪ್ರಸರಣವಾಗಿದ್ದು, ಬೆಂಕಿ ಹೊತ್ತುಕೊಂಡಿದೆ. ಬಸ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಜನರು ಹೊರಗೆ ಬರಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ 6 ಮಂದಿ ಹೊರಬರಲು ಸಾಧ್ಯವಾಗದೇ ಸಜೀವ ದಹನವಾಗಿದ್ದಾರೆ.