ಸೇನಾ ವಾಹನ ಉರುಳಿಬಿದ್ದು ಬೆಂಕಿ ಅವಘಡ: ಮೂವರು ಯೋಧರ ಸಜೀವ ದಹನ
ಜೈಪುರ, ಮಾರ್ಚ್ 25: ಭಾರತೀಯ ಸೇನೆಯ ವಾಹನ ಮಗುಚಿಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ. ಇನ್ನು ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ಗಂಗಾನಗರ ಜಿಲ್ಲೆಯ ರಜಿಯಾಸರ್ - ಛಾಟರಗಡ ರಸ್ತೆಯ ಗೋಪಾಲ್ಸರದಲ್ಲಿ ಗುರುವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಜಿಪ್ಸಿಯು ಉರುಳಿಬಿದ್ದು, ಬೆಂಕಿ ಹೊತ್ತಿಕೊಂಡಿದೆ. ಗಾಯಗೊಂಡ ಐವರು ಸೈನಿಕರು ವಾಹನದಿಂದ ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಾಹನದ ಒಳಗೆ ಸಿಲುಕಿಕೊಂಡ ಐವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಸ್ಟೇಷನ್ ಹೌಸ್ ಅಧಿಕಾರಿ ವಿಕ್ರಮ್ ತಿವಾರಿ ತಿಳಿಸಿದ್ದಾರೆ.

ಬತಿಂಡಾ ಮೂಲದ ಸೇನಾ ಘಟಕದ ಎಂಟು ಸೈನಿಕರು ಸೂರತ್ಗಡದಿಂದ ರಾತ್ರಿ ಪ್ರಯಾಣಿಸುತ್ತಿದ್ದರು. ರಾತ್ರಿ 1.30ರ ಸುಮಾರಿಗೆ ಇಂದಿರಾ ಗಾಂಧಿ ಕಾಲುವೆಯ ಸಮೀಪ ಜಿಪ್ಸಿ ವಾಹನ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಮರಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದಿದೆ. ಕೂಡಲೇ ಬೆಂಕಿ ಆವರಿಸಿದೆ. ಅದರಿಂದ ತಪ್ಪಿಸಿಕೊಳ್ಳಲು ಸೈನಿಕರಿಗೆ ಸಮಯವೂ ಸಿಗಲಿಲ್ಲ. ಮೂವರು ಯೋಧರು ಸಜೀವ ದಹನವಾಗಿದ್ದಾರೆ.












Click it and Unblock the Notifications