World War: ವಿಶ್ವದ ಶಾಂತಿಗೆ ಸೇತುವೆ ಕಟ್ಟಲಿದೆಯಾ ನಮ್ಮ ಭಾರತ?
ಅಲ್ಲಿ ಯುದ್ಧ ಶುರುವಾಗಿ ಒಂದೂವರೆ ವರ್ಷ ಕಳೆದೋಗಿದೆ. ಪರಿಸ್ಥಿತಿ ಈಗ ಸರಿಯಾಗುತ್ತೆ ನಾಳೆ ಸರಿ ಹೋಗುತ್ತೆ ಅಂತಾ ಕಾದಿದ್ದೇ ಬಂತು. ಆದರೆ ಯಾವುದೂ ಹಿಡಿತಕ್ಕೆ ಸಿಗುತ್ತಿಲ್ಲ. ಬೀದಿ ಬೀದಿಯಲ್ಲಿ ಹೆಣ ಬೀಳುತ್ತಿದೆ, ಮನೆಯೊಳಗೆ ಮಲಗಿದ್ದವರು ಕೂಡ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂದಹಾಗೆ ನಾವು ಹೇಳುತ್ತಿರುವುದು ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ. ಆದರೆ ಈ ಯುದ್ಧ ನಿಲ್ಲಿಸಲು ಭಾರತವೇ ಬೆಸ್ಟ್ ಅನ್ನುತ್ತಿದೆ ಜಗತ್ತು.
ಹೌದು, ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಭಾರತವೇ ಸರಿಯಾದ ಮಾರ್ಗವೆಂಬ ನಿರ್ಧಾರಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಬಂದಂತೆ ಕಾಣುತ್ತಿದೆ. ಇಂತಹ ಒಂದು ಸಲಹೆ ಇದೀಗ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಮಾಡಿದೆ. ಏಕೆಂದರೆ ಭಾರತ ಈ ಎರಡೂ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದೆ. ಅತ್ತ ರಷ್ಯಾ ಯುದ್ಧ ಘೋಷಣೆ ಮಾಡಿದಾಗ ಭಾರತ ದುಡುಕಿನ ನಿರ್ಧಾರ ಕೈಗೊಳ್ಳಲಿಲ್ಲ. ಹಾಗೇ ಉಕ್ರೇನ್ ಕೂಡ ರಷ್ಯಾ ವಿರುದ್ಧ ನಿಲ್ಲಿ ಎಂದಾಗ ಭಾರತ ತಪ್ಪು ಮಾಡಲಿಲ್ಲ. ಅತ್ತ ರಷ್ಯಾ ಜೊತೆಗೂ ಸಂಬಂಧ ಉಳಿಸಿಕೊಂಡು, ಇತ್ತ ಉಕ್ರೇನ್ ಜೊತೆಗೂ ಸಂಬಂಧ ಬೆಳೆಸಿಕೊಂಡು ಬಂದಿದೆ. ಇದೀಗ ಇಬ್ಬರ ಯುದ್ಧ ನಿಲ್ಲಿಸಲು ಭಾರತವೇ ಬೆಸ್ಟ್, ಭಾರತವೇ ಬೇಕು ಅಂತಿದೆ ಜಗತ್ತು.

ಭಾರತದಿಂದ ಜಗತ್ತಿನಲ್ಲಿ ಶಾಂತಿ ಸಾಧ್ಯ?
ಅಂದಹಾಗೆ ಕೆಲ ತಿಂಗಳ ಹಿಂದೆ ನಡೆದಿದ್ದ G-7 ರಾಷ್ಟ್ರಗಳ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಜೊತೆಗೆ ಮಾತನಾಡಿದ್ದರು. ಈ ವೇಳೆ ಯುದ್ಧದಿಂದ ಹಾನಿಗೆ ಒಳಗಾಗಿರುವ ಉಕ್ರೇನ್ಗೆ ಸಹಾಯದ ಭರವಸೆ ನೀಡಿದ್ದರು. ಇದೇ ಸಭೆ ಜಗತ್ತಿನ ಮೂಲೆ ಮೂಲೆಯಲ್ಲೂ ಸುದ್ದಿಯಾಗಿತ್ತು. ಏಕೆಂದರೆ ರಷ್ಯಾ ಜೊತೆಗೆ ಹಲವು ದಶಕದಿಂದ ಸ್ನೇಹ ಹೊಂದಿರುವ ಭಾರತ, ಅದೇ ರಷ್ಯಾ ದೇಶದ ಶತ್ರು ಜೊತೆಗೂ ಸಭೆ ನಡೆಸುತ್ತಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಭಾರತ ಸಭೆ ನಡೆಸಿದ್ದು ಮಾನವೀಯ ಮೌಲ್ಯದ ದೃಷ್ಟಿಯಲ್ಲಿ. ಈಗ ಆ ಸಭೆಯ ಆಧಾರದಲ್ಲೇ ಭಾರತದ ಕುರಿತು ಜಗತ್ತು ಹೆಮ್ಮೆ ವ್ಯಕ್ತಪಡಿಸುತ್ತಿದೆ.
ಸಂಧಾನ ನಡೆಸುತ್ತಾರಾ ಪ್ರಧಾನಿ ಮೋದಿ?
ಇತ್ತೀಚೆಗೆ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ತಾವು ಶಾಂತಿ ಮಾತುಕತೆ ಬೇಡ ಎಂದಿಲ್ಲ ಎಂಬ ಸಂದೇಶ ನೀಡಿದ್ದರು. ಈ ಮೂಲಕ ಉಕ್ರೇನ್ ಜೊತೆಗೆ ನಾವು ಸಂಧಾನಕ್ಕೆ ಸಿದ್ಧ ಎನ್ನುವ ಸಂದೇಶ ಕಳುಹಿಸಿದ್ದರು. ಇದೇ ಆಧಾರದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಒಪ್ಪಂದವು ನಡೆಯಲಿ ಅನ್ನೋದೆ ಜಗತ್ತಿನ ಪ್ರತಿಯೊಂದು ದೇಶದ ಆಶಯ. ಪರಿಸ್ಥಿತಿ ಹೀಗಿದ್ದಾಗ ಸಭೆ ನಡೆಸಿ, ಇಬ್ಬರ ನಡುವೆ ಸಂಧಾನ ಮಾಡಲು ನಾಯಕತ್ವ ಯಾರು ವಹಿಸಬೇಕು? ಎಂಬ ಚಿಂತೆ ಶುರುವಾಗಿದೆ. ಈ ಚರ್ಚೆ ನಡುವೆ ಭಾರತವನ್ನೇ ಜಗತ್ತು ಉದಾಹರಣೆಯಾಗಿ ನೀಡಿ, ಭಾರತವೇ ನಾಯಕತ್ವ ವಹಿಸಲಿ ಅಂತಿದೆ.

ಭಾರತ ಏಕೆ ಮುಂದಾಳತ್ವ ವಹಿಸಬೇಕು?
ಜಗತ್ತು ಈಗ ಎರಡು ಭಾಗವಾಗಿ ಹೋಗಿದೆ. ಒಂದು ಭಾಗ ರಷ್ಯಾ ಜೊತೆಗೆ ಸೇರಿದೆ, ಇದೇ ವೇಳೆ ಇನ್ನೊಂದು ಭಾಗ ಅಮೆರಿಕದ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಆದರೆ ಭಾರತ ಮಾತ್ರ ಹೀಗೆ ಮಾಡಿಲ್ಲ. ಭಾರತ ಯುದ್ಧವನ್ನು ವಿರೋಧಿಸುವ ಜೊತೆಗೆ ಮಾನವೀಯತೆ ಸಂದೇಶ ಸಾರುತ್ತಿದೆ. ಹಾಗೇ ಯುದ್ಧ ಬೇಡವೇ ಬೇಡ ಎನ್ನುತ್ತಿದೆ. ಈ ವಿಚಾರದಲ್ಲಿ ಅತ್ತ ಉಕ್ರೇನ್ಗೂ ಬೆಂಬಲ ನೀಡದೆ ಇತ್ತ ರಷ್ಯಾಗೂ ಬೆಂಬಲ ನೀಡದೆ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಹೀಗಾಗಿ ಭಾರತದ ನಾಯಕತ್ವದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಯುದ್ಧ ನಿಲ್ಲಿಸುತ್ತಾರಾ ವ್ಲಾದಿಮಿರ್ ಪುಟಿನ್?
ರಷ್ಯಾ ಕೆಂಡವಾಗಿದ್ದು, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಭೀಕರಗೊಳಿಸುತ್ತಿದೆ. ಹೀಗಾಗಿ ಉಕ್ರೇನ್ ಕೂಡ ಬೆಚ್ಚಿಬಿದ್ದಿದೆ. ಏನು ಮಾಡಬೇಕು ಎಂಬ ಪರಿಸ್ಥಿತಿಯಲ್ಲಿದೆ ಉಕ್ರೇನ್. ಇದೇ ವೇಳೆ ಪುಟಿನ್ ಶಾಂತಿ ಮಾತುಕತೆ ಬಗ್ಗೆ ಹೇಳಿಕೆ ನೀಡಿದ್ದು ಯುದ್ಧಕ್ಕೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪುಟಿನ್ ಯುದ್ಧ ನಿಲ್ಲಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಯುದ್ಧ ನಿಲ್ಲಿಸಲು ಸಿದ್ಧ ಎಂಬ ಮುನ್ಸೂಚನೆ ನೀಡಿದ್ದಾರೆ. ಆದ್ರೆ ಇದೇ ವೇಳೆ ಶರತ್ತು ಹಾಕಿರುವ ರಷ್ಯಾ ಅಧ್ಯಕ್ಷ ಪುಟಿನ್, ಬದಲಾದ ಸನ್ನಿವೇಶವನ್ನ ಉಕ್ರೇನ್ನ ಸೇನೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಪುಟಿನ್ ಮಾತುಗಳನ್ನ ಕೇಳಿದರೆ, ಅಕಸ್ಮಾತ್ ಭಾರತ ಮುಂದಾಳತ್ವ ವಹಿಸಿದರೆ ಪರಿಸ್ಥಿತಿ ಸರಿಹೋಗುವ ಸಾಧ್ಯತೆ ಇದೆ.

526ನೇ ದಿನಕ್ಕೆ ಕಾಲಿಟ್ಟ ಯುದ್ಧ
ಕೆಲ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 526ನೇ ದಿನಕ್ಕೆ ಕಾಲಿಟ್ಟಿರುವ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆಯೇ ಕಂಡಿಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 526 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಅದಕ್ಕೂ ಮೊದಲು ಭಾರತ ಹೀರೋ ರೀತಿ ಎಂಟ್ರಿ ಕೊಡಬೇಕೆಂದು ಜಗತ್ತಿನ ಹಲವು ದೇಶಗಳು ಬಯಸುತ್ತಿವೆ.
ಸಂಧಾನದ ವಿಚಾರದಲ್ಲಿ ಭಾರತ ನಿಲುವು ಏನು?
ಹೀಗೆ ಅಂತೂ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಉಕ್ರೇನ್ ಮುಂದೆ ಬಂದು ಮಾತುಕತೆ ನಡೆಸಲಿ ಎಂಬುದೇ ರಷ್ಯಾ ಆಶಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ರಷ್ಯಾ & ಉಕ್ರೇನ್ ರಣಭೀಕರ ಕಾಳಗ ಇನ್ನಷ್ಟು ಭೀಕರವಾಗುವುದು ಪಕ್ಕಾ. ಹೀಗಾಗಿ ಈಗಲೇ ಯುದ್ಧಕ್ಕೆ ಬ್ರೇಕ್ ಹಾಕಲು ಜಗತ್ತು ಪ್ರಯತ್ನ ಮುಂದುವರಿಸಿದೆ. ಇದೇ ಹೊತ್ತಲ್ಲಿ ಭಾರತವೇ ನಾಯಕತ್ವ ವಹಿಸಲಿ ಎಂಬ ಕೂಗು ಕೂಡ ಎದ್ದಿದೆ. ಆದರೆ ಈ ಬಗ್ಗೆ ಭಾರತ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಭಾರತದ ನಡೆ ಕೂಡ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ ಮಾನವೀಯತೆ ಗೆಲ್ಲಬೇಕು ಎಂಬುದೇ ಭಾರತದ ನಿಲುವು. ತನ್ನ ಈ ನಿಲುವಿಗೆ ಭಾರತ ಕಳೆದ 70 ವರ್ಷಗಳಿಂದಲೂ ಬದ್ಧವಾಗಿಯೇ ನಿಂತಿದೆ. ಇದೇ ಕಾರಣಕ್ಕಾಗಿ ಇಡೀ ಜಗತ್ತು ಭಾರತವನ್ನು ಪ್ರೀತಿಸುತ್ತಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮಧ್ಯ ಪ್ರವೇಶ ಮಾಡಿ, ಭಾರತದ ನಾಯಕತ್ವದಲ್ಲಿ ಯುದ್ಧ ನಿಲ್ಲಿಸಿದರೆ ಹೊಸ ಇತಿಹಾಸ ಕೂಡ ಸೃಷ್ಟಿಯಾಗಲಿದೆ. ಹೀಗೆ ಇಡೀ ಜಗತ್ತು ರಷ್ಯಾ & ಉಕ್ರೇನ್ ಸಂಧಾನಕ್ಕೆ ಕಾದು ಕುಳಿತಿದೆ. ಶೀಘ್ರದಲ್ಲೇ ಈ ಬಗ್ಗೆ ಸಿಹಿಸುದ್ದಿ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications