ಆನೆ ಹಿಂಡು ದಾಳಿ ಮಾಡಿದಾಗ ಆತ ಏನು ಮಾಡಿದ?
ಬ್ಯಾಂಕಾಕ್, ಅಕ್ಟೋಬರ್ 24 : ಕಾಡೆಂದರೆ ಅದು ದೈವಿಕ ಪ್ರಶಾಂತತೆ. ಪ್ರಕೃತಿ ಮಾತೆಯ ಮಡಿಲಲ್ಲಿ ಮಾನವ ಹಸ್ತಕ್ಷೇಪವನ್ನು ಕಾಡುಪ್ರಾಣಿಗಳು ಎಂದೂ ಸಹಿಸುವುದಿಲ್ಲ. ಮಾನವ ಕೂಡ ಕಾಡಿನ ಪ್ರಶಾಂತತೆ ಕದಡಲು ಪ್ರಯತ್ನಪಡಬಾರದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಯಾವಾಗಲೂ ಶಾಂತವಾಗಿಯೇ ಇರುವ ಆನೆಗಳು ತಾವಾಗಿಯೇ ಎಂದೂ ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಆದರೆ, ಹಸಿರನ್ನು ತಿಂದು ಆರಾಮವಾಗಿ ಅಲೆದಾಡುವ ಆನೆಗಳ ಏಕಾಂತಕ್ಕೆ ಧಕ್ಕೆ ಬಂದರೆ ಯಾರನ್ನೂ ಬಿಡುವುದಿಲ್ಲ. ಕಾಡಿನಲ್ಲಿ ಅಡ್ಡಾಡುವ ಶಾಂತಿ ಕದಡುವ ವಾಹನಗಳ ಮೇಲೆ ಆನೆ ದಾಳಿ ಮಾಡಿರುವ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದಿವೆ.
ಥೈಲ್ಯಾಂಡ್ನ ಖೋ ಯೈ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ಟೋಬರ್ 18ರಂದು ಆಗಿದ್ದು ಇದೇ. ರಸ್ತೆಯೆಂದ ಮೇಲೆ ವಾಹನಗಳ ಅಡ್ಡಾಟ ಇದ್ದೇ ಇರುತ್ತದೆ. ಭರ್ರನೆ ಅಡ್ಡಾಡುವ ಬೈಕುಗಳ ಶಬ್ಧ ಆನೆಗಳಿಗೆ ಕಿರಿಕಿರಿ ಮಾಡುತ್ತಲೇ ಇದ್ದವು. ತುಸು ಸಮಯ ಆನೆಗಳು ಕೂಡ ಇದನ್ನು ಸಹಿಸಿಕೊಂಡಿದ್ದವು. [ಮೈಸೂರು ರೌಡಿ ಆನೆಗಳ ಪುಂಡಾಟಿಕೆ, ಪ್ರತ್ಯಕ್ಷ ವರದಿ]

ಆದರೆ, ಮೋಪೆಡ್ ಸವಾರನೊಬ್ಬ ಬಂದ ನೋಡಿ, ಆನೆಗಳ ತಾಳ್ಮೆ ಮೇರೆಮೀರಿದೆ. ರೊಚ್ಚಿಗೆದ್ದ ಆನೆಗಳು ಹಿಂಡುಹಿಂಡಾಗಿ ಘೀಳಿಡುತ್ತ ವಾಹನ ಸವಾರನ ಮೇಲೆ ದಾಳಿ ಮಾಡಿವೆ. ಒಟ್ಟೊಟ್ಟಿಗೆ ವಾಹನ ಸವಾರನ ಮೇಲೆ ದಾಳಿ ಮಾಡಿದಾಗ ಆತನ ಸ್ಥಿತಿ ಹೇಗಾಗಿರಬೇಡ?
ಮೋಪೆಡ್ ಸವಾರನಿಗೆ ಅದೇನನ್ನಿಸಿತೋ ಏನೋ, 'ದಯವಿಟ್ಟು ನನ್ನನ್ನು ಕ್ಷಮಿಸಿಬಿಡಪ್ಪಾ' ಅಂತ ಸಾಕ್ಷಾತ್ ಗಜಪಡೆಯ ಮುಂದೆ ಕೈಮುಗಿದು ನಿಂತುಬಿಟ್ಟಿದ್ದಾನೆ. ಬೇರೆ ಪ್ರಾಣಿಯಾಗಿದ್ದರೆ ಅದೇನು ಮಾಡುತ್ತಿದ್ದವೋ? ಗಣಪತಿಯ ವಂಶದವರಾದ ಗಜಪಡೆ ಆತ ಕೈಮುಗಿದು ನಿಂತಿದ್ದನ್ನು ನೋಡಿ, ಅವುಗಳಿಗೆ ಕರುಣೆಬಂದಿತೋ ಏನೋ ಹಾಗೆಯೇ ವಾಪಸ್ ಹೊರಟಿವೆ!
ತಮ್ಮ ತಂಟೆಗೆ ಬಂದರೆ ಏನು ಮಾಡುತ್ತೇವೆ ಎಂದು ಮನುಜರಿಗೆ ಆನೆಗಳು ಪಾಠ ಕಲಿಸಿವೆ. ಕಲಿಯುವುದು ಬಿಡುವುದು 'ಪ್ರಜ್ಞಾವಂತ'ರಾದ ನಮಗೆ ಬಿಟ್ಟಿದ್ದು. ಈ ಘಟನೆಯ ನಂತರ ಆ ರಸ್ತೆಗಳಲ್ಲಿ ವಾಹನ ಓಡಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. [ಈ ಬಾರಿಯ ದಸರಾ ಜಂಬೂಸವಾರಿ ವೈಭವ]












Click it and Unblock the Notifications