ಕಾಶ್ಮೀರಿಗಳ ಬೆಂಬಲಕ್ಕೆ ಯಾವ ಹಂತಕ್ಕೆ ಹೋಗಲು ಸಹ ಸಿದ್ಧ: ಪಾಕ್ ಸೇನೆ
ಇಸ್ಲಾಮಾಬಾದ್ (ಪಾಕಿಸ್ತಾನ), ಆಗಸ್ಟ್ 6: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಭಾರತ ಸರಕಾರದ ತೀರ್ಮಾನವನ್ನು ಪಾಕಿಸ್ತಾನ ಸೇನೆ ಮಂಗಳವಾರ ತಿರಸ್ಕರಿಸಿದೆ. ಕಾಶ್ಮೀರಿ ಜನರ ಹೋರಾಟದ ಬೆಂಬಲಕ್ಕಾಗಿ 'ಯಾವುದೇ ಹಂತಕ್ಕೆ ಹೋಗಲು' ಸಹ ಸಿದ್ಧ ಎಂದು ಪಾಕಿಸ್ತಾನ ಸೇನೆ ಹೇಳಿದೆ.
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿನ ಇರುವ ಜನರಲ್ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಪ್ಸ್ ಕಮ್ಯಾಂಡರ್ ಗಳ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ, ಈ ಘೋಷಣೆ ಮಾಡಿದ್ದಾರೆ. ಕಾಶ್ಮೀರದಲ್ಲಿನ ಈಗಿನ ಸನ್ನಿವೇಶದ ಬಗ್ಗೆ ಚರ್ಚೆ ಮಾಡುವ ಸಲುವಾಗಿಯೇ ಈ ಸಭೆ ಕರೆಯಲಾಗಿತ್ತು.
ಕಾಶ್ಮೀರ ವಿಚಾರವಾಗಿ ಭಾರತದ ನಿರ್ಧಾರವನ್ನು ತಿರಸ್ಕರಿಸುವ ಪಾಕ್ ಸರಕಾರದ ತೀರ್ಮಾನವನ್ನು ಪೂರ್ಣವಾಗಿ ಬೆಂಬಲಿಸಲಾಯಿತು. ದಶಕಗಳ ಹಿಂದೆಯೇ ಪರಿಚ್ಛೇದ 370 ಅಥವಾ 35A ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಅಸ್ತಿತ್ವವನ್ನು ಕಾನೂನುಬದ್ಧಗೊಳಿಸಲು ಭಾರತ ಪ್ರಯತ್ನಿಸುತ್ತಿರುವುದನ್ನು ಪಾಕಿಸ್ತಾನ ಎಂದಿಗೂ ಗುರುತಿಸಲಿಲ್ಲ. ಇದೀಗ ಭಾರತವು ತಾನಾಗಿಯೇ ಅದನ್ನು ತೆಗೆದುಹಾಕಿದೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅಸೀಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರಿ ಜನರ ಹೋರಾಟದ ಅಂತ್ಯದ ತನಕ ಪಾಕಿಸ್ತಾನ ಸೈನ್ಯ ಜತೆಯಾಗಿ ನಿಲ್ಲುತ್ತದೆ. ಈ ಸಂಬಂಧವಾಗಿ ನಮ್ಮ ಜವಾಬ್ದಾರಿ ನಿರ್ವಹಣೆಗೆ ಯಾವುದೇ ಹಂತ ಮುಟ್ಟಲು ಸಿದ್ಧರಾಗಿದ್ದೇವೆ ಎಂದು ಬಾಜ್ವಾ ಹೇಳಿರುವುದಾಗಿ ಗಫೂರ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಅರೀಫ್ ಅಲ್ವಿ ಮಂಗಳವಾರ ಸಂಸತ್ ನ ವಿಶೇಷ ಅಧಿವೇಶನ ಕರೆದಿದ್ದರು. ಪಾಕ್ ಆಕ್ರಮಿತ ಕಾಶ್ಮೀರ ಭೂ ಭಾಗದ ಮೇಲೆ ಭಾರತೀಯ ಸೇನೆಯ ದಾಳಿ ಬಗ್ಗೆ ಚರ್ಚಿಸಲು ಈ ಅಧಿವೇಶನ ಕರೆದಿದ್ದರು. ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದೆ.












Click it and Unblock the Notifications