ಸುಡಾನ್ ಸೇನಾ ಸಂಘರ್ಷದಲ್ಲಿ ರಷ್ಯಾ ಕೈವಾಡ?
ವಾಷಿಂಗ್ಟನ್: ಸುಡಾನ್ ಸುಡುಗಾಡಿನ ರೂಪ ತಳೆದಿದೆ. ಕಂಡ ಕಂಡ ಜಾಗದಲ್ಲಿ ಹೆಣಗಳ ರಾಶಿಯೇ ಕಾಣುತ್ತಿದೆ. ಈ ಗಲಾಟೆಯಲ್ಲಿ ಸಾವಿರಾರು ಭಾರತೀಯರು ಕೂಡ ಸಿಲುಕಿದ್ದಾರೆ. ಆದರೆ ಈ ಹೊತ್ತಲ್ಲೇ ಸುಡಾನ್ (Sudan) ಒಳಗೆ ಬೆಂಕಿ ಹತ್ತಿಕೊಳ್ಳಲು ರಷ್ಯಾ (Russia) ಕಾರಣ ಎಂಬ ಆರೋಪ ಕೇಳಿಬಂದಿದೆ. ಅಮೆರಿಕದ ರಹಸ್ಯ ದಾಖಲೆ ಸೋರಿಕೆಯಲ್ಲಿ ಈ ವಿಚಾರ ಬಯಲಾಗಿದೆ.
ಹೌದು, ಸೇನಾ ಸಂಘರ್ಷದಲ್ಲಿ ಅಕ್ಷರಶಃ ಸುಡುಗಾಡಿನಂತೆ ಭಾಸವಾಗುತ್ತಿರುವ ಸುಡಾನ್ ದೇಶದಲ್ಲಿ ಭಾರತೀಯರು ಸಿಲುಕಿ ಪರದಾಡುತ್ತಿದ್ದಾರೆ. ತಮ್ಮನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಭಾರತೀಯರು ಮನವಿ ಮಾಡುತ್ತಿದ್ದಾರೆ. ಇನ್ನೊಂದು ಕಡೆ 500ಕ್ಕೂ ಹೆಚ್ಚು ಜನ ಸುಡಾನ್ ಸೇನಾ ಸಂಘರ್ಷದಲ್ಲಿ ಜೀವ ಕಳೆದುಕೊಂಡಿದ್ದಾರೆ. 3500ಕ್ಕೂ ಹೆಚ್ಚು ಜನರು ಈ ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ. ಕಂಡ ಕಂಡಲ್ಲಿ ಬಾಂಬ್, ಬುಲೆಟ್ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಇನ್ನೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ರಷ್ಯಾ ಕೈವಾಡ ಹೇಗೆ ಸಾಧ್ಯ?
ಅಂದಹಾಗೆ ಸುಡಾನ್ ಮತ್ತು ರಷ್ಯಾ ನಡುವೆ ಉತ್ತಮ ಸಂಬಂಧ ಇದ್ದು, ಎರಡೂ ರಾಷ್ಟ್ರಗಳು ವ್ಯಾವಹಾರಿಕವಾಗಿ ಸಾಕಷ್ಟು ಒಪ್ಪಂದ ಮಾಡಿಕೊಂಡಿವೆ. ಆದರೆ ಸುಡಾನ್ ಸೇನಾಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇರುವ ರಷ್ಯಾದ ಖಾಸಗಿ ಸೈನಿಕ ಪಡೆ ಅಥವಾ ವ್ಯಾಗ್ನರ್ ಗುಂಪು ಈ ಘರ್ಷಣೆಗೆ ಕಾರಣ ಎಂಬ ಆರೋಪವನ್ನು ಅಮೆರಿಕದ ರಹಸ್ಯ ದಾಖಲೆಗಳಲ್ಲಿ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್ ಎಚ್ಚರಿಕೆ ಸಂದೇಶ ನೀಡಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಭೀಕರ ಯುದ್ಧದ ಸಂದರ್ಭದಲ್ಲೇ ಈ ಮಾಹಿತಿ ಹೊರಬಿದ್ದಿರುವುದು ಸಂಚಲನ ಸೃಷ್ಟಿಸಿದೆ.
ಆಫ್ರಿಕಾದಲ್ಲೂ ರಷ್ಯಾ ಮೇಲುಗೈ
ಯುರೋಪ್ ಭಾಗದಲ್ಲಿ ತನ್ನ ಶಕ್ತಿ ಏನೆಂದು ತೋರಿಸಿರುವ ರಷ್ಯಾ ಇದೀಗ ಆಫ್ರಿಕಾ ದೇಶಗಳಲ್ಲೂ ತನ್ನ ಹಿಡಿತ ಬಿಗಿ ಮಾಡಿದೆ. ಇದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆಮ್ಮದಿ ಕೆಡಿಸಿದೆ. ಹೀಗಾಗಿ ರಷ್ಯಾ ಹಿಡಿತ ತಪ್ಪಿಸಲು ಅಮೆರಿಕ ಮತ್ತು ಅದರ ಸ್ನೇಹಿತ ರಾಷ್ಟ್ರಗಳು ಒಗ್ಗೂಡಿವೆ. ಸುಡಾನ್ ಸಂಘರ್ಷದ ವಿಚಾರದಲ್ಲೂ ಇಂತಹದ್ದೇ ಅಸ್ತ್ರ ಬಳಸಿದ್ದರೂ ಅಚ್ಚರಿ ಪಡಬೇಕಿಲ್ಲ. ಆದರೆ ಈ ಆರೋಪವನ್ನು ವ್ಯಾಗ್ನರ್ ಗುಂಪು ಅಲ್ಲಗಳೆದಿದೆ.

ಸುಡಾನ್ ನೆಲದಲ್ಲಿ ಮಾತೆತ್ತಿದರೆ ಹಿಂಸೆ!
ಈಗ ಸುಡಾನ್ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.
ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಈ ಹಿಂಸಾಚಾರದಲ್ಲಿ ರಷ್ಯಾದ ವ್ಯಾಗ್ನರ್ ಗುಂಪುಗಳ ಕೈವಾಡ ಇರುವ ಆರೋಪ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ಮತ್ತೊಮ್ಮೆ ಸುಡಾನ್ ವಿನಾಶದ ಅಂಚಿಗೆ ತಲುಪುತ್ತಿರುವ ಭಯ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ತರಿಸುತ್ತಿದೆ. ಇಡೀ ಆಫ್ರಿಕಾದಲ್ಲೇ ಸುಡಾನ್ ಕಂಡಷ್ಟು ದಂಗೆಯನ್ನ ಬೇರೆ ಯಾವುದೇ ಆಫ್ರಿಕಾ ದೇಶ ಕಂಡಿಲ್ಲ ಎಂಬುದು ಗಮನಾರ್ಹ. ಇದರ ಜೊತೆಗೆ ವಿದೇಶಿ ಸೇನೆ ಮತ್ತು ಗುಂಪುಗಳ ಕೈವಾಡದ ಬಗ್ಗೆ ಕೇಳಿಬರುತ್ತಿರುವ ಆರೋಪ ಕೂಡ ಪರಿಸ್ಥಿತಿಯನ್ನ ಮತ್ತಷ್ಟು ಕಗ್ಗಂಟಾಗಿಸುತ್ತಿದೆ.












Click it and Unblock the Notifications