ವಿಎಚ್ ಪಿ ಇಂದ ಭಗ್ನ ದೇವಾಲಯಗಳ ಪುನರ್ ನಿರ್ಮಾಣ
ನವದೆಹಲಿ, ಏ.28: ನೇಪಾಳದ ಭೀಕರ ಭೂಕಂಪಕ್ಕೆ ಪರಿಹಾರ ರೂಪದಲ್ಲಿ ವಿಶ್ವದೆಲ್ಲೆಡೆಯಿಂದ ನೆರವು ಸಿಗುತ್ತಿದೆ. ದೇಗುಲಗಳ ನಗರಿಯಲ್ಲಿ ಪ್ರಕೃತಿಯ ವಿಕೋಪಕ್ಕೆ ನಲುಗಿ ಹೋಗಿದೆ. ಹಿಮಾಲಯದ ತಪ್ಪಲಿನ ಊರಿನಲ್ಲಿ ಜೀವ ಭೀತಿ ಎದುರಾಗಿದೆ.
ಅದರೆ, ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ದೇಗುಲಗಳ ನಗರಿಯ ಶಾಂತಮಯ ವಾತಾವರಣವನ್ನು ಪುನರ್ ಸೃಷ್ಟಿಸುವ ಜವಾಬ್ದಾರಿಯನ್ನು ವಿಶ್ವಹಿಂದೂ ಪರಿಷತ್ ವಹಿಸಿಕೊಂಡಿದೆ. [ಆಪರೇಷನ್ ಮೈತ್ರಿ ಕಾರ್ಯಾಚರಣೆ ಚಿತ್ರಗಳು]
ಸುಮಾರು 18-20 ಲಕ್ಷ ಜನಸಂಖ್ಯೆಯ ಕಠ್ಮಂಡು ನಗರದಲ್ಲಿ ಶೇ80ರಷ್ಟು ಮನೆಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಮನೆಗಳಿಗಿಂತ ಹತ್ತುಪಟ್ಟು ದೇಗುಲಗಳನ್ನು ಹೊಂದಿರುವ ನಗರ ಎನಿಸಿದ್ದ ಕಠ್ಮಂಡುವಿನಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಿರುವ ವಿಶ್ವ ಹಿಂದೂ ಪರಿಷತ್ ಭೂಕಂಪ ಪೀಡಿತ ಪ್ರದೇಶಗಳಲ್ಲಿನ ದೇಗುಲಗಳು, ಪ್ರಾರ್ಥನಾ ಮಂದಿರಗಳು, ಮನೆ, ಶಾಲೆ, ಸ್ಮಾರಕಗಳನ್ನು ಪುನರ್ ನಿರ್ಮಿಸಲು ಮುಂದಾಗಿದೆ.[ಮನೆ ಮುರುಕ ಭೂಕಂಪ ಮನ ಮಿಡಿಯುವ ಚಿತ್ರಗಳು]
ಗೃಹ ನಿರ್ಮಾಣ ಕಾರ್ಯವಲ್ಲದೆ ಅನಾಥ, ನಿರ್ಗತಿಕ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿದ್ದು, ಉಚಿತವಾಗಿ ಶಿಕ್ಷಣ ನೀಡುವುದಾಗಿ ವಿಎಚ್ ಪಿ ಘೋಷಿಸಿದೆ. ಸುಮಾರು 150ಕ್ಕೂ ಅಧಿಕ ವಸತಿ ಶಾಲೆಗಳು ಹಾಗೂ 50ಕ್ಕೂ ಅಧಿಕ ನಿರ್ಗತಿಕರ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. [ಭೂಕಂಪ ಸಂತ್ರಸ್ತರಿಗೆ ಕರ್ನಾಟಕ ನೆರವಿನ ಸುನಾಮಿ]
ಭಾರತದಲ್ಲಿ ಈ ಹಿಂದೆ ಸುನಾಮಿ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಇದೇ ರೀತಿಯ ಅನಾಥ ಭಾವ ಕಾಡುತ್ತಿತ್ತು. ಆಗೆಲ್ಲ ಧೈರ್ಯ ತುಂಬಿ ಬದುಕು ಕಟ್ಟಿಕೊಡುವ ಕೆಲಸವನ್ನು ಹೆಮ್ಮೆಯಿಂದ ಮಾಡಲಾಗಿದೆ ಎಂದು ವಿಎಚ್ ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಇದು ಕೇವಲ ಹಿಂದೂಗಳ ಧಾರ್ಮಿಕ ಕೇಂದ್ರ ಕಟ್ಟುವ ಕೆಲಸವಲ್ಲ. ಸಮಾಜ ಕಟ್ಟುವ ಕಾರ್ಯ ಇದಕ್ಕೆ ಕಾರ್ಪೊರೇಟ್ ಸಂಸ್ಥೆಗಳು, ಜನ ಸಾಮಾನ್ಯರು ತಮ್ಮ ಕೈಲಾದ ನೆರವು ನೀಡಬೇಕಾಗುತ್ತದೆ. ನೇಪಾಳಕ್ಕಿರುವ ವಿಶ್ವ ಮಾನ್ಯತೆಯನ್ನು ಪುನಃ ತಂದುಕೊಡುವ ಕೆಲಸ ಮಾಡಬೇಕಿದೆ ಎಂದು ಪ್ರವೀಣ್ ತೊಗಾಡಿಯಾ ಮನವಿ ಮಾಡಿದರು. [ಎವರೆಸ್ಟ್: ಬೆಂಗಳೂರಿನ ಪ್ರವೀಣ್ ಸೇರಿದ 200 ಸಾಹಸಿಗಳ ರಕ್ಷಣೆ]
ನೇಪಾಳದಲ್ಲಿ ಮನೆ ಮನ ಕಟ್ಟುವ ಕೆಲಸವನ್ನು ಅನೇಕ ರಾಷ್ಟ್ರಗಳು ಕೂಡಾ ಕೈಗೊಂಡಿವೆ. ಅಮರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಣ ಸಹಾಯವಲ್ಲದೆ, ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.ಆದರೆ, ನೆರೆರಾಷ್ಟ್ರ ಭಾರತ ಕೈಗೊಂಡಿರುವ ರಕ್ಷಣಾ ಕಾರ್ಯ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. (ಪಿಟಿಐ)












Click it and Unblock the Notifications