ಅಮೆರಿಕಾ ಗುಪ್ತಚರ ವರದಿಯಲ್ಲಿ ಪ್ರಧಾನಿ ಮೋದಿ ಬಗ್ಗೆ ಪ್ರಮುಖ ಉಲ್ಲೇಖ
ವಾಷಿಂಗ್ಟನ್, ಮಾರ್ಚ್ 9 (ಪಿಟಿಐ): ಭಾರತದ ಶತ್ರು ರಾಷ್ಟ್ರವೆಂದೇ ಬಿಂಬಿತವಾಗಿರುವ ಪಾಕಿಸ್ತಾನವು, ಭಾರತದ ವಿರುದ್ದ ಸುಖಾಸುಮ್ಮನೆ ತಂಟೆಗೆ ಬಂದರೆ, ಹಿಂದಿಗಿಂತಲೂ ಹೆಚ್ಚಿನ ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಅಮೆರಿಕಾದ ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (Office of Director of Intelligence) ಬಿಡುಗಡೆ ಮಾಡಿದ ವಾರ್ಷಿಕ ಗುಪ್ತಚರ ವರದಿಯಲ್ಲಿ ಈ ಅಂಶವು ಉಲ್ಲೇಖವಾಗಿದೆ.
Recommended Video

"ವಿವಾದಿತ ಗಡಿ ಪ್ರದೇಶದಲ್ಲಿ ಪರಮಾಣು ಶಕ್ತಿಯನ್ನು ಹೊಂದಿರುವ ಭಾರತ ಮತ್ತು ಚೀನಾ ನಡುವೆ ಸಶಸ್ತ್ರ ಮುಖಾಮುಖಿಯ ಅಪಾಯವಿದೆ. ಈ ವಿದ್ಯಮಾನವು ಅಮೆರಿಕಾದ ಭದ್ರತೆಗೂ ಧಕ್ಕೆ ತರುವ ಸಾಧ್ಯತೆಯಿದೆ. ಹಾಗಾಗಿ, ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಉತ್ತಮ" ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಕಾರ್ಯಾಚರಣೆ ಆರಂಭವಾದರೆ, ಇದರಿಂದ ಎದುರಾಗುವ ರಿಸ್ಕ್ ಕಡಿಮೆಯಿದ್ದರೂ, ಎರಡೂ ದೇಶಗಳು ಪರಮಾಣು ಶಕ್ತಿಯನ್ನು ಹೊಂದಿರುವುದು ಗಂಭೀರ ವಿಚಾರ ಎಂದೂ ವರದಿಯಲ್ಲಿ ಹೇಳಲಾಗಿದೆ.

ಭಾರತ ವಿರೋಧಿ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಸುದೀರ್ಘ ಇತಿಹಾಸ
"ಭಾರತ ವಿರೋಧಿ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಸುದೀರ್ಘ ಇತಿಹಾಸವನ್ನು ಪಾಕಿಸ್ತಾನ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ಪಾಕಿಸ್ತಾನಿ ಪ್ರಚೋದನೆಗಳಿಗೆ ಮಿಲಿಟರಿ ಕಾರ್ಯಾಚರಣೆಯನ್ನು ಹಿಂದೆಂದಿಗಿಂತಲೂ ಹೆಚ್ಚು ತಿರುಗೇಟು ನೀಡುವ ಸಾಧ್ಯತೆಯಿದೆ. ಹಿಂದಿನ ಸರ್ಕಾರಕ್ಕಿಂತ ಮೋದಿ ಸರ್ಕಾರ ಪಾಕ್ ವಿರುದ್ಧ ಸೇನಾಬಲವನ್ನು ಬಳಸಿಕೊಂಡು ತಿರುಗೇಟು ಕೊಡುವ ಸಾಧ್ಯತೆ ಹೆಚ್ಚು"ಎಂದು ಅಮೆರಿಕಾದ ಗುಪ್ತಚರ ಇಲಾಖೆ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ.

2020 ರಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ನಡುವಿನ ಮಾರಣಾಂತಿಕ ಘರ್ಷಣೆ
ಎರಡು ದೇಶಗಳ ನಡುವೆ ಸೇನಾ ಜಟಾಪಟಿಯಿಂದಾಗಿ ಕಾಶ್ಮೀರದಲ್ಲಿ ಹಿಂಸಾತ್ಮಾಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಈ ತಿರುಗೇಟು ಪಾಕಿಸ್ತಾನಕ್ಕೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಪಾಕಿಸ್ತಾನದ ಮೇಲೆ ಸಂಭಾವ್ಯ ದಾಳಿಯೂ ನಡೆಯಬಹುದು. 2020 ರಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ನಡುವಿನ ಮಾರಣಾಂತಿಕ ಘರ್ಷಣೆಯ ಹಿನ್ನೆಲೆಯಲ್ಲಿ ನವದೆಹಲಿ ಮತ್ತು ಬೀಜಿಂಗ್ ನಡುವಿನ ಸಂಬಂಧಗಳು ಹದಗೆಡುತ್ತವೆ ಎಂದು ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯ ವರದಿಯಲ್ಲಿ ಉಲ್ಲೇಖವಾಗಿದೆ.

ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಘರ್ಷಣೆ
ಭಾರತ ಮತ್ತು ಚೀನಾ ಗಡಿಯಲ್ಲಿ ಕಡಿಮೆ ಮಟ್ಟದ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ, ಇದು ತ್ವರಿತವಾಗಿ ಉಲ್ಭಣಗೊಳ್ಳುವ ಸಾಧ್ಯತೆಯಿದೆ. ಪೂರ್ವ ಲಡಾಖ್ ಗಡಿಯ ಪಾಂಗಾಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಬಿಕ್ಕಟ್ಟು ಹೆಚ್ಚಾಗಿತ್ತು. ಎರಡೂ ದೇಶವು ಅಪಾರ ಪ್ರಮಾಣದಲ್ಲಿ ಸೈನಿಕರು ಮತ್ತು ರವಾನಿಸುವ ಮೂಲಕ ಗಡಿಯ ಭದ್ರತೆ ಹೆಚ್ಚಿಸಿದ್ದರು. ಜೂನ್ 15, 2020 ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಘರ್ಷಣೆಯ ನಂತರ ಉದ್ವಿಗ್ನತೆ ಹೆಚ್ಚಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಾವು ಅಮೆರಿಕಾದ ಜೊತೆ ವಾಣಿಜ್ಯ ಸಂಬಂಧವನ್ನು ವೃದ್ದಿಸಿಕೊಳ್ಳಲು ಹೆಚ್ಚು ಉತ್ಸುಕ
"ಒಡಿಎನೈ ನೀಡಿದ ವರದಿಯಲ್ಲಿ ಚೀನಾವು ಅಮೆರಿಕಾದ ಜೊತೆ ವಾಣಿಜ್ಯ ಸಂಬಂಧವನ್ನು ವೃದ್ದಿಸಿಕೊಳ್ಳಲು ಹೆಚ್ಚು ಉತ್ಸುಕವಾಗಿದೆ. ಆದರೆ, ವಾಷಿಂಗ್ಟನಿನ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಕ್ರಮಗಳು ಚೀನಾದ ಏಳಿಗೆಯನ್ನು ತಡೆಯಲು ಮತ್ತು ಕಮ್ಯುನಿಸ್ಟ್ ಪಕ್ಷದ ಪ್ರಭಾವವನ್ನು ಕಮ್ಮಿ ಮಾಡುವ ರೀತಿಯಲ್ಲಿ ಅಮೆರಿಕಾವು ಚೀನಾವನ್ನು ನೋಡುತ್ತಿದೆ ಎಂದು ಚೀನಾ ಭಾವಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಗುಪ್ತಚರ ಇಲಾಖೆಯ ವರದಿಯಲ್ಲಿ ಚೀನಾ-ತೈವಾನ್ ಬಗ್ಗೆಯೂ ಉಲ್ಲೇಖವಾಗಿದೆ"ಎಂದು ಉಲ್ಲೇಖವಾಗಿದೆ.












Click it and Unblock the Notifications