ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!
ಕೊರೊನಾ ವೈರಸ್ ಸಂಕಷ್ಟದಿಂದ ಪಾರಾದರೂ ಚೀನಾಗೆ ಮತ್ತೊಂದು ಮಹಾ ಕಂಟಕ ಎದುರಾಗಿದೆ. ಚೀನಾ ನಾಗರಿಕರು ಹೊಟ್ಟೆಗೆ ಅನ್ನವಿಲ್ಲದೆ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಪದೇ ಪದೆ ಎದುರಾಗುತ್ತಿರುವ ಪ್ರಕೃತಿ ವಿಕೋಪ ಚೀನಾದಲ್ಲಿ ಬೆಳೆದಿದ್ದ ಆಹಾರವನ್ನು ಭಾಗಶಃ ನಾಶಮಾಡಿದೆ. ಕೋಟ್ಯಂತರ ಚೀನಿಯರಿಗೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎನ್ನುವಂತಾಗಿದೆ.
ಆದರೆ ಜನರ ಗಮನ ಬೇರೆಡೆಗೆ ಸೆಳೆಯಲು ಚೀನಾದ ಕಮ್ಯೂನಿಸ್ಟ್ ನಾಯಕ ಹಾಗೂ ಕುತಂತ್ರಿ ಡ್ರ್ಯಾಗನ್ ದೇಶದ ಅಧ್ಯಕ್ಷ ಜಿನ್ಪಿಂಗ್ ಅಕ್ಕಪಕ್ಕದ ದೇಶಗಳ ಜೊತೆ ಗಡಿ ಕ್ಯಾತೆ ತೆಗೆಯುತ್ತಿದ್ದಾರಂತೆ. ತೈವಾನ್ನ ಪತ್ರಿಕೆ ಈ ಬಗ್ಗೆ ತನಿಖಾ ವರದಿ ಪ್ರಕಟಿಸಿದೆ. ತೈವಾನ್ ಪತ್ರಿಕೆ ವರದಿಯಲ್ಲಿ ಚೀನಾ ಎದುರಿಸುತ್ತಿರುವ ಸಮಸ್ಯೆಗಳ ಇಂಚಿಂಚು ಮಾಹಿತಿ ಬಯಲಿಗೆಳೆಯಲಾಗಿದೆ.
ಸಂಕಷ್ಟದ ಸ್ಥಿತಿ ಬಗ್ಗೆ ಅರಿವಾದರೆ ಚೀನಾ ಜನ ಸರ್ವಾಧಿಕಾರಿ ಜಿನ್ಪಿಂಗ್ ವಿರುದ್ಧ ಧಂಗೆ ಏಳಬಹುದು ಎಂಬ ಕಾರಣಕ್ಕೆ, ಜಿನ್ಪಿಂಗ್ ನರಿ ಬುದ್ಧಿ ಉಪಯೋಗಿಸಿ ನೆರೆ ದೇಶಗಳ ನಿದ್ದೆಗೆಡಿಸುತ್ತಿದ್ದಾನೆ. ಈ ಮೂಲಕ ಚೀನಾ ಅದ್ಯಾಕೆ ದಿಢೀರ್ ಅಂತಾ ನೆರೆ ರಾಷ್ಟ್ರಗಳ ಜೊತೆ ಕಾಲು ಕೆರೆದು ಜಗಳಕ್ಕೆ ನಿಂತಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಮತ್ತೊಮ್ಮೆ ಚೀನಾದ ನರಿ ಬುದ್ಧಿ ಜಗತ್ತಿನ ಎದುರು ಬಟಾಬಯಲಾಗಿದೆ.

ಭಾರತದ ಜೊತೆ ಕಿರಿಕ್ ಏಕೆ..?
ಚೀನಾ ನಾಯಕರು ಎಷ್ಟು ಕುತಂತ್ರಿಗಳು ಎಂದರೆ ಅಲ್ಲಿನ ಜನರಲ್ಲಿ ಹಲವು ದಶಕಗಳಿಂದಲೂ ದ್ವೇಷದ ಭಾವನೆ ಬೆಳೆಸಿದ್ದಾರೆ. ಕಂಡ ಕಂಡವರ ಭೂಮಿ ಮೇಲೆ ಕಣ್ಣು ಹಾಕಿ, ಬೇರೆ ಬೇರೆ ದೇಶಗಳನ್ನು ಚೀನಾದ ಕಪಿಮುಷ್ಠಿಗೆ ತೆಗೆದುಕೊಂಡಿದ್ದ ಕಿರಾತಕ ಮಾವೋ ಜೆಡಾಂಗ್ ಕಾಲದಿಂದಲೂ ಪರಿಸ್ಥಿತಿ ಹೀಗೆ ಇದೆ. ಆದರೆ ಈಗ ಇದನ್ನು ತನ್ನ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಜಿನ್ಪಿಂಗ್. ಈಗಾಗಲೇ ಜಿನ್ಪಿಂಗ್ ಬಗ್ಗೆ ಸ್ವಪಕ್ಷೀಯರಲ್ಲೇ ಭಿನ್ನಾಭಿಪ್ರಾಯ, ಆಕ್ರೋಶ ಮೊಳಗಿದೆ. ಇದನ್ನೆಲ್ಲಾ ತಣ್ಣಗಾಗಿಸಲು ಜಿನ್ಪಿಂಗ್ ಎದುರು ಇರುವುದು ಒಂದೇ ಮಾರ್ಗ. ಅದೆಂದರೆ ಭಾರತದ ವಿರುದ್ಧ ಜಗಳ ತೆಗೆದರೆ ಸಾಕು, ಜನರ ಗಮನ ಯುದ್ಧ ಹಾಗೂ ಗಡಿ ಮೇಲೆ ಕೇಂದ್ರಿತವಾಗುತ್ತದೆ. ಆಗ ಆಹಾರದ ಅಭಾವ, ಆಂತರಿಕ ಸಮಸ್ಯೆ ಬಗ್ಗೆ ಜನ ಪ್ರಶ್ನೆ ಮಾಡುವುದಿಲ್ಲ ಎಂಬುದು ಜಿನ್ಪಿಂಗ್ ಹಾಕಿಕೊಂಡಿರುವ ಕ್ರಿಮಿನಲ್ ಕ್ಯಾಲ್ಕ್ಯುಲೇಷನ್.

ತೈವಾನ್ಗೂ ಟಾರ್ಚರ್ ಕೊಡುತ್ತಿದೆ ಚೀನಾ
ಚೀನಾಗೆ ಭಾರತ ಬಿಟ್ಟರೆ ಪರಮ ಶತ್ರುವಾಗಿರುವುದು ತೈವಾನ್ ಮಾತ್ರ. ಏಕೆಂದರೆ ಈ ಹಿಂದೆಯೇ ತೈವಾನ್ ನನ್ನ ಭೂಮಿಯಾಗಿತ್ತು, ಆದರೆ ನಾವೇ ಅದನ್ನ ಬಿಟ್ಟುಕೊಟ್ಟಿದ್ದೀವಿ ಅನ್ನೋದು ಸಾಮ್ರಾಜ್ಯಶಾಹಿ ಚೀನಾ ವಾದ. ಕೆಲ ತಿಂಗಳಿಂದ ತೈವಾನ್ ಮೇಲೆ ಮುಗಿಬಿದ್ದಿರುವ ಚೀನಾ ಕ್ಷಣಕ್ಷಣಕ್ಕೂ ಆ ದೇಶಕ್ಕೆ ಟಾರ್ಚರ್ ಕೊಡುತ್ತಿದೆ. ತೈವಾನ್ ಗಡಿ ಭಾಗಕ್ಕೆ ತನ್ನ ಯುದ್ಧ ವಿಮಾನಗಳನ್ನು ರವಾನೆ ಮಾಡಿ, ಪ್ರಚೋದಿಸುವ ಕೆಲಸ ಮಾಡುತ್ತಿದೆ. ತೈವಾನ್ ಕೂಡ ಚೀನಾದ ಪ್ರಚೋದನೆಗೆ ತಕ್ಕ ಉತ್ತರ ನೀಡುತ್ತಿದ್ದು ಪರಿಸ್ಥಿತಿ ಹದಗೆಡುತ್ತಿದೆ. ಚೀನಾಗೂ ಇದೇ ಬೇಕಾಗಿದ್ದು, ಯುದ್ಧ ಮಾಡಲು ಕುತಂತ್ರಿ ಚೀನಾ ಸಿದ್ಧವಾಗಿ ನಿಂತಿದೆ.

ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಸ್ಕೆಚ್..!
ಅಕ್ಕಪಕ್ಕದ ದೇಶಗಳ ಗಡಿಯ ಮೇಲೆ ಕಣ್ಣಿಟ್ಟಿದ್ದು ಆಯ್ತು, ದೂರದ ಆಫ್ರಿಕಾ ಮೇಲೂ ಚೀನಿ ಗ್ಯಾಂಗ್ ಸ್ಕೆಚ್ ಹಾಕಿದೆ. ಇದೇ ಕಾರಣಕ್ಕೆ ಆಫ್ರಿಕಾದ ಬಡ ರಾಷ್ಟ್ರಗಳಿಗೆ ಸಹಾಯ ಮಾಡುವ ನೆಪದಲ್ಲಿ ಚೀನಾ ತನ್ನ ದೇಶಕ್ಕೆ ಬೇಕಾದಷ್ಟು ಆಹಾರವನ್ನೂ ಅಲ್ಲಿ ಬೆಳೆಯುತ್ತಿದೆ. ಅದರಲ್ಲೂ ಆಫ್ರಿಕಾದ ಫಲವತ್ತಾದ ಭೂಮಿ ಹಾಗೂ ಅಲ್ಲಿನ ಕೃಷಿ ಕ್ಷೇತ್ರದ ಮೇಲೆ ಲಕ್ಷಾಂತರ ಕೋಟಿ ಹೂಡಿಕೆ ಮಾಡಿದೆ. ಹೀಗೆ ಮಾಡಿದರೆ ಆಫ್ರಿಕಾದ ಬಡಪಾಯಿ ದೇಶಗಳಿಂದ ಆಹಾರ ಪದಾರ್ಥವನ್ನು ಕಡಿಮೆ ಬೆಲೆಗೆ ದರೋಡೆ ಮಾಡುವುದು ಸುಲಭ ಎಂಬುದು ಚೀನಾದ ಸ್ಕೆಚ್. ಹೀಗೆ ತನ್ನ ಸ್ವಾರ್ಥಕ್ಕೆ ಆಫ್ರಿಕನ್ನರ ಹಿತ ಬಲಿಕೊಡುತ್ತಿದೆ ಚೀನಿ ಗ್ಯಾಂಗ್.

ಮಾವೋ ಕೂಡ ಹೀಗೆ ಮಾಡಿದ್ದ..!
ಮಾವೋ ಜಗತ್ತಿನ ಪಾಲಿಗೆ ಕ್ರೂರ ಸರ್ವಾಧಿಕಾರಿ. ಭಾರತದ ಕಾಶ್ಮೀರ, ಟಿಬೆಟ್, ಉಯಿಘರ್ ಮುಸ್ಲೀಮರ ಪ್ರದೇಶ, ಮಂಗೋಲಿಯಾ ಜನರಿಗೆ ಸೇರಿದ ಜಾಗ ಹೀಗೆ ಅವನ ಗ್ಯಾಂಗ್ ಲೂಟಿ ಮಾಡಿದ್ದು ಹತ್ತಾರು ಲಕ್ಷ ಕಿಲೋಮೀಟರ್ ವಿಸ್ತಿರ್ಣದ ಭೂಮಿಯನ್ನು. ಇನ್ನೊಂದುಕಡೆ 1962ರಲ್ಲಿ ಭಾರತದ ಮೇಲೆ ಮಾವೋನ ಸೇನೆ ಯುದ್ಧ ಸಾರಿದ್ದು ಏಕೆ ಎಂಬ ಯಕ್ಷಪ್ರಶ್ನೆಗೂ ಈ ವರದಿಯಲ್ಲೇ ಉತ್ತರವಿದೆ. ಅಂದಹಾಗೆ 1959ರಲ್ಲೂ ಚೀನಾ ಭೀಕರ ಬರಗಾಲಕ್ಕೆ ತುತ್ತಾಗಿತ್ತು. 2 ವರ್ಷಗಳ ಕಾಲ ಬರಗಾಲ ಆವರಿಸಿತ್ತು. ಆಗಲೂ ಜನರ ಗಮನ ಬೇರೆಡೆಗೆ ಸೆಳೆಯಲು ಚೀನಾ ತನ್ನ ಅಕ್ಕಪಕ್ಕದ ದೇಶಗಳ ಜೊತೆಗೆ ಯುದ್ಧ ಸಾರಿತ್ತು. ಅದರಲ್ಲಿ ನಮ್ಮ ದೇಶವೂ ಸೇರಿತ್ತು. ಈಗ ಮತ್ತೊಮ್ಮೆ ಚೀನಾದಲ್ಲಿ ಆಹಾರಕ್ಕೆ ಹಾಹಾಕಾರ ಎದುರಾಗಿದ್ದು, ನೆರೆ ದೇಶಗಳ ಜೊತೆ ಮತ್ತೆ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ.

2 ಹೊತ್ತು ಊಟ ಮಾಡಲು ಸಲಹೆ..!
ಕೆಲದಿನಗಳ ಹಿಂದೆ ಚೀನಾ ಅಧ್ಯಕ್ಷ ಜಿನ್ಪಿಂಗ್ ತನ್ನ ದೇಶದ ಜನರಿಗೆ ಊಟದ ಬಗ್ಗೆ ಪಾಠ ಮಾಡಿದ್ದರು. ಜನರು ಆಹಾರ ಪದ್ಧತಿ ಮೇಲೆ ನಿಗಾ ಇಡುವಂತೆ ಹಾಗೂ ಆಹಾರ ಹಾಳು ಮಾಡದಂತೆ ಸಲಹೆ ನೀಡಿದ್ದರು. ಆದ್ರೆ ಇದ್ದಕ್ಕಿದ್ದಂತೆ ಜಿನ್ಪಿಂಗ್ಗೆ ಇಷ್ಟು ಒಳ್ಳೇ ಬುದ್ಧಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಜಗತ್ತನ್ನು ಕಾಡುತ್ತಿದೆ. ಈಗ ಆ ಬಿಲಿಯನ್ ಜನರ ಪ್ರಶ್ನೆಗೆ ತೈವಾನ್ ಪತ್ರಿಕೆ ಉತ್ತರ ನೀಡುವ ಕೆಲಸ ಮಾಡಿದೆ. ಚೀನಾ ಬರಗೆಟ್ಟು ನಿಂತಿದ್ದು ಮಾನ ಉಳಿಸಿಕೊಳ್ಳಲು ತನ್ನ ಜನರಿಗೆ ಡಯಟ್ ಪಾಠ ಮಾಡುತ್ತಿದೆ. ಈ ಮೂಲಕ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಚೀನಾ ಪ್ರಪಂಚದ ಎದುರು ನಟಿಸುತ್ತಿದೆ.












Click it and Unblock the Notifications