ಕೊನೆಗೂ ಶುರುವಾಯ್ತು ಮಾತುಕತೆ: ಈಗಲಾದರೂ ನಿಲ್ಲುತ್ತಾ ಹಿಂಸೆ?
ಜಿದ್ಧಾ: ಸುಡಾನ್ ದೇಶದಲ್ಲಿ 20ಕ್ಕೂ ಹೆಚ್ಚು ದಿನದಿಂದ ನಡೆಯುತ್ತಿರುವ ಹಿಂಸೆ ಕೊನೆಗೂ ಮುಕ್ತಾಯಗೊಳ್ಳುವ ಸೂಚನೆ ಸಿಕ್ಕಿದೆ. ಹಿಂಸೆಗೆ ಅಂತ್ಯ ಹಾಡಲೇಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆ ಸಂಧಾನಕ್ಕೆ ಸುಡಾನ್ ಸೇನೆ & ಅರೆಸೇನಾ ಪಡೆ ಮುಖ್ಯಸ್ಥರನ್ನ ಸೌದಿ & ಅಮೆರಿಕ ಆಹ್ವಾನಿಸಿತ್ತು. ನೆರೆ ದೇಶಗಳು ಇದೇ ಸಲಹೆ ನೀಡಿದ್ದ ಹಿನ್ನೆಲೆ ಸೌದಿ ಅರೇಬಿಯಾದ ಜಿದ್ದಾದಲ್ಲಿ ಮಾತುಕತೆ ಶುರುವಾಗಿದೆ.
ಮೊದಲೇ ಹೇಳಿದಂತೆ ಅಮೆರಿಕ, ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ. ಈ ಮೂಲಕ ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಸುಡಾನ್ನ ಎರಡೂ ಪಡೆಗಳ ಮುಖ್ಯಸ್ಥರು ಮುಖಾಮುಖಿ ಆಗಿದ್ದಾರೆ. ಸೌದಿ & ಅಮೆರಿಕ ಈ ವಿಚಾರದಲ್ಲಿ ಬಹುತೇಕ ಜಯ ಸಾಧಿಸಿವೆ. ಸಂಧಾನದ ಮಾತನ್ನು ಸುಡಾನ್ ಸೇನೆ & ಅರೆಸೇನಾ ಪಡೆ ಕೇಳಿವೆ ಎನ್ನಲಾಗುತ್ತಿದೆ. ಈಗಲಾದರೂ ಯುದ್ಧ ನಿಲ್ಲುತ್ತಾ? ಎಂಬ ಚಿಂತೆಯಲ್ಲಿ ಸುಡಾನ್ ಜನರಿದ್ದಾರೆ. ಆದರೆ ಅದರ ರಿಸಲ್ಟ್ ಸಿಗಲು ಇನ್ನಷ್ಟು ಸಮಯ ಕಾಯಬೇಕಿದೆ.

ಸುಡನ್ನಲ್ಲಿ 550 ಮಂದಿ ಸಾವು
ಸುಡಾನ್ ಹಿಂಸಾಚಾರದ ಕೇಂದ್ರಗಳಾದ ಖರ್ಟೋಮ್ ಮತ್ತು ಒಮ್ಡುರ್ಮಾನ್ ನಗರದಲ್ಲಿ ಅಮಾಯಕರ ರಕ್ಷಣೆಗೆ ದಾರಿ ಮಾಡಿಕೊಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಆರೋಗ್ಯ ಸೌಲಭ್ಯ ಸೇರಿದಂತೆ ನಾಗರಿಕ ಮೂಲಸೌಕರ್ಯ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸುಡಾನ್ ಹಿಂಸಾಚಾರ ಶುರುವಾಗಿ ಸುಮಾರು 3 ವಾರ ಕಳೆದಿದ್ದು, ಇದೀಗ 4ನೇ ವಾರಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೂ 550ಕ್ಕೂ ಹೆಚ್ಚು ಮಂದಿ ಮೃತಪಟ್ಟರೆ, 5000ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.
ಪ್ರತಿ 1 ಗಂಟೆಗೆ 7 ಮಕ್ಕಳ ಸಾವು
ಪ್ರಕಾರ ಸುಡಾನ್ ಹಿಂಸಾಚಾರ ಶುರುವಾದ ನಂತ್ರ ಅತಿಹೆಚ್ಚು ಜೀವ ಕಳೆದುಕೊಂಡಿದ್ದು ಮಕ್ಕಳು. ಪ್ರತಿ ಗಂಟೆಗೆ 7 ಮಕ್ಕಳು ಮೃತಪಡುತ್ತಿದ್ದಾರೆ ಎಂಬ ಭಯಾನಕ ಅಂಶ ಬಯಲಾಗಿದೆ. ಯುನಿಸೆಫ್ನ ಮಕ್ಕಳ ವಿಭಾಗದ ವಕ್ತಾರ ಜೇಮ್ಸ್ ಎಲ್ಡರ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾದರೆ ನೀವೆ ಲೆಕ್ಕಹಾಕಿ ಸುಡಾನ್ ಹಿಂಸಾಚಾರ ಯಾವ ರೀತಿ ಭಯಾನಕ ಸ್ವರೂಪ ಪಡೆದಿರಬಹುದು ಎಂಬುದನ್ನ. ಯುದ್ಧ, ಹಿಂಸೆ, ದಂಗೆಯ ತವರು ಎಂದೇ ಕುಖ್ಯಾತಿ ಪಡೆದಿರುವ ಸುಡಾನ್ ನೆಲ ಈಗಲೂ ಧಗಧಗಿಸುತ್ತಿದೆ.
ಲಕ್ಷ ಲಕ್ಷ ಪ್ರಜೆಗಳು ಎಸ್ಕೇಪ್!
ಸೇನಾ ನಾಯಕರ ಪ್ರತಿಷ್ಠೆಗೆ ಇಡೀ ಸುಡಾನ್ ನರಕವಾಗಿ ಬದಲಾಗಿದೆ. ಪರಿಸ್ಥಿತಿ ಹೀಗಿರುವಾಗ ಜೀವ ಉಳಿಸಿಕೊಂಡು, ಜೀವನ ನಡೆಸಿದರೆ ಸಾಕು ಎಂಬ ಸ್ಥಿತಿ ಸುಡಾನ್ ಜನರದ್ದು. 1 ಲಕ್ಷಕ್ಕೂ ಹೆಚ್ಚು ಸುಡಾನ್ ಪ್ರಜೆಗಳು ದೇಶ ತೊರೆದು ನೆರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಜನ ಇದೇ ರೀತಿ ದೇಶವನ್ನ ಬಿಟ್ಟು, ಸುಡಾನ್ ಅಕ್ಕಪಕ್ಕದಲ್ಲಿರುವ ದೇಶಗಳಿಗೆ ಓಡಿ ಹೋಗುವ ತಯಾರಿಯಲ್ಲಿದ್ದಾರೆ. ಸುಡಾನ್ ನಿರಾಶ್ರಿತರು ಒಳ ಬಂದರೆ ಗಡಿಭಾಗದ ರಾಷ್ಟ್ರಗಳು ಅವರಿಗೆ ಅನುಮತಿ ನೀಡಬೇಕು ಎಂದು ವಿಶ್ವಸಂಸ್ಥೆ ಕೋರಿದೆ. ಇದೇ ಸಮಯದಲ್ಲಿ ಶಾಂತಿ ಮಾತುಕತೆ ಕೂಡ ಆರಂಭವಾಗಿದೆ.
ಆಸ್ಪತ್ರೆಗಳ ಬಳಿ ರೋಗಿಗಳ ನರಳಾಟ
ಸುಡಾನ್ ರಾಜಧಾನಿ ಖಾರ್ಟೂಮ್ & ಡಾರ್ಫರ್ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಜನ ಆಸ್ಪತ್ರೆ ಎದುರು ಪರದಾಡುತ್ತಿದ್ದಾರೆ. ಸುಡಾನ್ ಸ್ಥಿತಿ ನೋಡುತ್ತಿದ್ದರೆ ಅಕ್ಷರಶಃ ನರಕ ಕಣ್ಣಮುಂದೆ ಬರುತ್ತದೆ. ಅದರಲ್ಲೂ ಸುಡಾನ್ ರಾಜಧಾನಿ ಖರ್ಟೋಮ್ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ. 60ರಷ್ಟು ಆಸ್ಪತ್ರೆಗಳು ಮುಚ್ಚಿವೆ. ರೋಗಿಗಳು ಏನು ಮಾಡಬೇಕು? ಉಳಿದಿರುವ ಶೇ. 16ರಷ್ಟು ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡ ಸಿಗದೆ ಹಲವರು ಮೃತಪಡುತ್ತಿದ್ದು, ಇದು ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ನಲ್ಲಿ ಶಾಂತಿ ಮಾತುಕತೆ ಏನೋ ಆರಂಭವಾಗಿದೆ, ಈಗಲಾದರೂ ಹಿಂಸಾಚಾರ ನಿಲ್ಲಬಹುದು ಎಂಬ ನಂಬಿಕೆಯಲ್ಲಿ ಸುಡಾನ್ ಜನರಿದ್ದಾರೆ. ಆದರೆ ಇದೆಲ್ಲಾ ವರ್ಕೌಟ್ ಆಗುತ್ತಾ. ಇಲ್ಲ ಸುಡಾನ್ ಸೇನೆಯ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್ ಬುಹ್ರಾನ್ ಹಾಗೂ ಅರೆಸೇನಾ ಪಡೆಯ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊನ ಪ್ರತಿಷ್ಠೆಗೆ ಇನ್ನಷ್ಟು ಅಮಾಯಕರು ಬಲಿಯಾಗುತ್ತಾರೋ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications