ಅಧಿಕಾರಿಯ ಪ್ರಾಣ ಉಳಿಸಲು ಸಾವಿನ ನಾಟಕ ಕಟ್ಟಿದ ರಷ್ಯನ್ನರು
ಮಾಸ್ಕೋ, ಸೆ. 13: ಉಕ್ರೇನ್ ಪಡೆಗಳಿಂದ ಹತ್ಯೆಯಾದರೆಂದು ಹೇಳಲಾದ ವ್ಯಕ್ತಿಯೊಬ್ಬ ಒಂದು ತಿಂಗಳ ನಂತರ ಟಿವಿಯಲ್ಲಿ ಕಾಣಿಸಿಕೊಂಡು ತಾನಿನ್ನೂ ಬದುಕಿರುವುದಾಗಿ ಹೇಳಿದರೆ ಹೇಗಾಗಬೇಡ...! ವಿಟಾಲಿ ಗುರಾ ಎಂಬ ಉಕ್ರೇನ್ ಅಧಿಕಾರಿಯೊಬ್ಬನ ಕಥೆಯೂ ಹೀಗೇ ಆಗಿದೆ.
ವಿಟಾಲಿ ಗುರಾ ಉಕ್ರೇನ್ನ ಖೇರ್ಸಾನ್ ಪ್ರದೇಶದ ನೊವಾಯ ಕಾಖೋವಕಾ ಪಟ್ಟಣದ ಉಪ ಮುಖ್ಯಸ್ಥ. ಉಕ್ರೇನ್ ಸೇನಾ ಪಡೆಗಳ ದಾಳಿಯಲ್ಲಿ ವಿಟಾಲಿ ಗುರಾ ಸಾವನ್ನಪ್ಪಿದರೆಂದು ರಷ್ಯಾ ಮಿಲಿಟರಿ ಕಡೆಯಿಂದ ಸುದ್ದಿ ಬಿತ್ತರಗೊಂಡಿತ್ತು. ಆಗಸ್ಟ್ 6ರಂದು ವಿಟಾಲಿ ಗುರಾ ಮೇಲೆ ಗುಂಡಿನ ದಾಳಿಯಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರೆಂದು ಸುದ್ದಿಯಾಗಿತ್ತು.
ಆದರೆ, ನಿನ್ನೆ ಸೋಮವಾರ ವಿಟಾಲಿ ಗೋರಾ ರಷ್ಯಾದ ಚಾನಲ್ ಒನ್ ಸುದ್ದಿವಾಹಿನಿಯಲ್ಲಿ ಪ್ರತ್ಯಕ್ಷರಾಗಿ ಮಾತನಾಡಿ ಅಚ್ಚರಿ ಮೂಡಿಸಿದರು. ರಷ್ಯಾದ ಭದ್ರತಾ ಸಂಸ್ಥೆ ಎಫ್ಎಸ್ಬಿ ತನ್ನ ಪ್ರಾಣ ಉಳಿಸಿತು ಎಂದು ಆತ ಹೇಳಿಕೊಂಡಿದ್ದಾರೆ.

ಉಕ್ರೇನ್ನ ಹಲವು ಭಾಗಗಳು ರಷ್ಯಾದ ವಶದಲ್ಲಿವೆ. ಅಂಥ ಪ್ರದೇಶಗಳಲ್ಲಿ ನೊವಾಯ ಕಾಖೋವಕಾ ಕೂಡ ಒಂದು. ರಷ್ಯಾ ಸುಪರ್ದಿಯಲ್ಲಿರುವ ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಗಳನ್ನು ಕೊಲ್ಲುವ ಘಟನೆಗಳು ಹೆಚ್ಚಿವೆ. ಇದು ಉಕ್ರೇನ್ ಸೇನಾ ಪಡೆಗಳ ಕೆಲಸ ಎಂಬುದು ರಷ್ಯಾದ ಆರೋಪ.
"ಆಗಸ್ಟ್ ತಿಂಗಳ ಆರಂಭದಲ್ಲಿ ಕಾನೂನು ಪಾಲನೆ ಸಂಸ್ಥೆಗಳು ನನ್ನ ಬಳಿ ಬಂದು ಹತ್ಯೆಗೆ ಪ್ರಯತ್ನವಾಗುತ್ತಿದೆ ಎಂದರು. ಅದನ್ನು ಋಜುವಾತು ಮಾಡುವ ದಾಖಲೆಗಳನ್ನೂ ನೀಡಿದರು," ಎಂದು ವಿಟಾಲಿ ಗುರಾ ಚಾನಲ್ ಒನ್ನಲ್ಲಿ ಹೇಳಿದ್ದಾರೆ.
ವಿಟಾಲಿ ಗುರಾ ಸದ್ಯ ಫೆಡರಲ್ ಸೆಕ್ಯೂರಿಟಿ ಸರ್ವಿಸ್ನ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳವೊಂದರಲ್ಲಿ ಅಡಗಿದ್ದಾರೆನ್ನಲಾಗಿದೆ. ತಾನು ಮತ್ತೆ ಉದ್ಯೋಗಕ್ಕೆ ಮರಳುವುದಾಗಿ ಅವರು ವಾಹಿನಿಯಲ್ಲಿ ಹೇಳಿದ್ದಾರೆ. "ನಾನು ವಾಪಸ್ ಬರುತ್ತೇನೆ ಎಂದು ಎಲ್ಲರಿಗೂ ಹೇಳಲು ಇಚ್ಛಿಸುತ್ತೇನೆ. ನನಗೆ ಯಾವ ಭಯವೂ ಇಲ್ಲ, ನನ್ನ ಕೆಲಸ ಮುಂದುವರಿಸುತ್ತೇನೆ" ಎಂದು ಗುರಾ ತಿಳಿಸಿದ್ದಾರೆ.

ಹಿಂದೆಯೂ ನಡೆದಿತ್ತು ಸಾವಿನ ನಾಟಕ
ವಿಟಾಲಿ ಗುರಾ ಸಾವಿನ ನಾಟಕಕ್ಕೆ ಒಂದು ತಿಂಗಳ ಮುಂಚೆ, ಅಂದರೆ ಜುಲೈನಲ್ಲಿ ನೊವಾಯ ಕಾಖೋವ್ಕಾದ ಪೊಲೀಸ್ ಉಪಮುಖ್ಯಸ್ಥ ಸೆರ್ಗೇ ಟೋಮ್ಕಾ ಅವರನ್ನೂ ಇದೇ ರೀತಿ ಸಾವಿನ ನಾಟಕ ಸೃಷ್ಟಿಸಿ ರಷ್ಯನ್ನರು ಬಚಾವ್ ಮಾಡಿದ್ದರು.
ನೊವಾಯ ಕಾಖೋವ್ಕಾ ಪಟ್ಟಣದ ಪ್ರಮುಖ ಅಧಿಕಾರಿಗಳು ಸಾಮಾನ್ಯವಾಗಿ ಹೋಗುವ ಹೋಟೆಲ್ವೊಂದರಲ್ಲಿ ಜೂನ್ ತಿಂಗಳಲ್ಲಿ ಗ್ರೆನೇಡ್ ಬಾಂಬ್ ಸ್ಫೋಟವಾಗಿತ್ತು. ಆ ಘಟನೆಯಲ್ಲಿ ಯಾರಿಗೂ ಸಾವು ಅಥವಾ ಗಾಯವಾಗಲಿಲ್ಲ. ಆದರೆ, ಬಾಂಬ್ ಎಸೆದವನನ್ನು ರಷ್ಯನ್ ಪಡೆಗಳು ಹಿಡಿಯುವಲ್ಲಿ ಸಫಲವಾಗಿದ್ದವು. ಆತ ರಷ್ಯಾಗೆ ಮಾಹಿತಿದಾರನಾಗಿ ಕೆಲಸ ಮಾಡಲು ಒಪ್ಪಿದ್ದನೆನ್ನಲಾಗಿದೆ. ಆತನನ್ನು ಬಳಸಿಕೊಂಡು ರಷ್ಯಾದ ಭದ್ರತಾ ಸಂಸ್ಥೆಗಳು ಉಕ್ರೇನ್ ಸೇನಾ ಪಡೆಗಳ ಕಾರ್ಯಾಚರಣೆಗಳನ್ನು ವಿಫಲಗೊಳಿಸುವ ಪ್ರಯತ್ನ ಮಾಡುತ್ತಿವೆ.
ಇಲ್ಯಾ ಬೋಂಡಾರ್ಚುಕ್ ಮಾಸ್ಟರ್ ಮೈಂಡ್
ನೊವಾಯ ಕಾಖೋವ್ಕಾ ಪಟ್ಟಣದಲ್ಲಿ ಗ್ರೆನೇಡ್ ಬಾಂಬ್ ದಾಳಿ ಮಾಡಿದ ವ್ಯಕ್ತಿ ಇಲ್ಯಾ ಬೋಂಡಾರ್ಚುಕ್ ಎಂಬ ಅಧಿಕಾರಿಯ ಮೂಲಕ ಉಕ್ರೇನ್ ಸೆಕ್ಯೂರಿಟಿ ಸರ್ವಿಸ್ ಜೊತೆ ಸಂವಹನ ನಡೆಸುತ್ತಿದ್ದ. ನೊವಾಯ ಕಾಖೋವ್ಕಾ ಪಟ್ಟಣದ ಅಧಿಕಾರಿಗಳನ್ನು ಕೊಲ್ಲಲು ಬೋಂಡಾರ್ಚುಕ್ ಹಣದ ಆಮಿಷ ಒಡ್ಡಿದ್ದು ತಿಳಿದುಬಂದಿತು. ಈತ ಟಾರ್ಗೆಟ್ ಮಾಡಿದ ವ್ಯಕ್ತಿಗಳ ಮೇಲೆ ರಷ್ಯಾದ ಎಫ್ಎಸ್ಬಿ ಕಣ್ಗಾವಲು ಇರಿಸಿತು.
ಎರಡು ಹತ್ಯೆಗಳು ಯಶಸ್ವಿಯಾದ ಸುದ್ದಿ ಬಂದ ಬಳಿಕ ಬೋಂಡಾರ್ಚುಕ್ ಹತ್ಯಾ ಪಡೆಯ ಗುಂಪಿನಲ್ಲಿರುವ ತನ್ನ ಏಜೆಂಟ್ಗೆ ಡಾಟಾ ಒದಗಿಸಲು ಮುಂದಾಗುತ್ತಾನೆ.
ಆಗ ಹತ್ಯಾ ಪಡೆಯ ಎಲ್ಲಾ ಸದಸ್ಯರನ್ನೂ ರಷ್ಯನ್ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ, ಇಲ್ಯಾ ಬೋಂಡಾರ್ಚುಕ್ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ. ದೂರದಿಂದಲೇ ಹಂತಕರನ್ನು ನೇಮಿಸುವ ಕೆಲಸ ಮಾಡುವ ಬೋಂಡಾರ್ಚುಕ್ ಉಕ್ರೇನ್ ನಿಯಂತ್ರಿತ ಪ್ರದೇಶಗಳಿಂದ ಕಾರ್ಯಾಚರಿಸುವುದನ್ನು ಮುಂದುವರಿಸಿದ್ದಾರೆ ಎಂದು ಚಾನಲ್ ಒನ್ ಸುದ್ದಿ ವಾಹಿನಿ ವರದಿ ಮಾಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications