ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾದ ಸರಕಾರಿ ಮಾಧ್ಯಮ
Recommended Video

ಭಾರತವು ಭಯೋತ್ಪಾದನಾ ವಿರೋಧಿ ನೀತಿಯನ್ನು ಮತ್ತೆ ರೂಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಪುಲ್ವಾಮಾ ದಾಳಿಗೆ ಪಾಕಿಸ್ತಾನ ಹೊಣೆ ಎನ್ನಬಾರದು. ಅದೇ ರೀತಿ ಜೈಶ್ ಇ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಲ್ಲಿ ಘೋಷಿಸಲು ಅಡ್ಡಿಯಾಗಿರುವುದಕ್ಕೆ ಚೀನಾ ಜವಾಬ್ದಾರಿ ಎಂದು ಆಧಾರ ಇಲ್ಲದೆ ಆರೋಪಿಸಬಾರದು ಎಂದು ಚೀನಾದ ಸರಕಾರಿ ಮಾಧ್ಯಮ ಹೇಳಿದೆ.
ಅಜರ್ ವಿರುದ್ಧ "ಗಟ್ಟಿ ಸಾಕ್ಷ್ಯ" ಒದಗಿಸಲು ಭಾರತ ವಿಫಲವಾಗಿದೆ. ಅದ್ದರಿಂದ ಅತನನ್ನು ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸುವುದಕ್ಕೆ ಚೀನಾಗೆ ಸಮ್ಮತಿ ಇಲ್ಲ. ಭಾರತವು ಮಸೂದ್ ಅಜರ್ ವಿಚಾರವಾಗಿ ರಾಜತಾಂತ್ರಿಕ ನಡೆ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಸಲಹೆ ಕೂಡ ನೀಡಲಾಗಿದೆ.
ಕಳೆದ ವಾರವಷ್ಟೇ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿಗೆ ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಚೀನಾದ ನ್ಯಾಷನಲಿಸ್ಟಿಕ್ ಗ್ಲೋಬಲ್ ಟೈಮ್ಸ್ ನಲ್ಲಿ ಈ ಲೇಖನದ ತುಣುಕು ಪ್ರಕಟವಾಗಿದೆ. ಇನ್ನು ಸಿಪಿಎಂನ ಮುಖವಾಣಿ ಪೀಪಲ್ಸ್ ಡೈಲಿಯು ಭಾರತದ ಆರೋಪವನ್ನು ತಳ್ಳಿಹಾಕಿದೆ.

ಯಾವುದೇ ಗಟ್ಟಿಯಾದ ಸಾಕ್ಷ್ಯವಿಲ್ಲದೆ ಭಾರತವು ಆರೋಪ ಮಾಡುತ್ತಲೇ ಇದೆ. ಜೈಶ್ ಇ ಮೊಹ್ಮದ್ ಸೇರಿ ಇತರ ಉಗ್ರ ಸಂಘಟನೆಗಳ ಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ ಹಾಗೂ ಇದಕ್ಕೆ ಚೀನಾ ಬೆಂಬಲ ನೀಡುತ್ತಿದೆ ಎಂದು ಆರೋಪ ಮಾಡುತ್ತಿದೆ ಎಂದು ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.
ಹೀಗೆ ಪಾಕಿಸ್ತಾನ, ಚೀನವನ್ನು ದೂಷಿಸುವ ಬದಲು ಭಯೋತ್ಪಾದನಾ ನಿಗ್ರಹ ನೀತಿಯ ಬಗ್ಗೆ ಭಾರತ ಒಮ್ಮೆ ಪರಿಶೀಲನೆ ಮಾಡಿಕೊಳ್ಳಬೇಕು. ಭಾರತದ ಆಡಳಿತದಲ್ಲಿರುವ ಕಾಶ್ಮೀರವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಚಿಂತಿಸಬೇಕು ಎನ್ನಲಾಗಿದೆ.
ಮಸೂದ್ ಅಜರ್ ನಿಷೇಧಕ್ಕೆ ಚೀನಾ ಬೆಂಬಲ ನೀಡಬೇಕು ಅಂದರೆ ಭಾರತದಿಂದ ಪ್ರಬಲ ಸಾಕ್ಷ್ಯಾಧಾರ ಒದಗಿಸಬೇಕು. ಈ ವಿಷಯದಲ್ಲಿ ಚೀನಾ ಬಹಳ ಎಚ್ಚರಿಕೆಯಿಂದ ಇದೆ. ಏಕೆಂದರೆ, ಅಜರ್ ನನ್ನು ನಿಷೇಧಿಸುವುದರಿಂದ ಪಾಕಿಸ್ತಾನದ ಮೇಲೆ ಭಾರತವು ಸೇನಾ ಒತ್ತಡ ಹೆಚ್ಚಿಸುತ್ತದೆ. ಇದರಿಂದ ಎರಡು ದೇಶಗಳ ಮಧ್ಯೆ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.











Click it and Unblock the Notifications