ಈ ಉಗ್ರನನ್ನು ಶ್ರೀಲಂಕಾ ಕಡೆಗಣಿಸಿದ್ದೇ 253 ಜೀವಗಳ ಸಾವಿಗೆ ಕಾರಣವಾಯ್ತು
ಕೊಲಂಬೋ, ಏಪ್ರಿಲ್ 27: ಶ್ರೀಲಂಕಾದಲ್ಲಿ ಕಳೆದ ವಾರ ಭೀಕರ ಸರಣಿ ಬಾಂಬ್ ದಾಳಿ ನಡೆಸಿದ ಸಂಚುಕೋರ ದಾಳಿಗೂ ಕೆಲವೇ ಗಂಟೆಗಳ ಮುನ್ನ ವಿಡಿಯೋ ಒಂದನ್ನು ಹರಿಬಿಟ್ಟಿದ್ದ. ಸುಮಾರು 40 ವರ್ಷದ ಈ ಸಂಚುಕೋರನ ಹೆಸರು ಜಹ್ರಾನ್ ಹಶೀಮ್. ಆತ್ಮಹತ್ಯಾ ದಾಳಿ ನಡೆಸಿ 253 ಜನರನ್ನು ಕೊಂದು ಸುಮಾರು 500 ಮಂದಿ ಗಾಯಗೊಳ್ಳಲು ಕಾರಣರಾದ ಎಂಟು ಉಗ್ರರಲ್ಲಿ ಈತನೂ ಒಬ್ಬ ಎನ್ನಲಾಗಿದೆ.
ನ್ಯಾಷನಲ್ ತೌಹೀದ್ ಜಮಾತ್ ಸಂಘಟನೆಯ ಮುಖ್ಯಸ್ಥನಾಗಿದ್ದ ಹಶೀಮ್, ವಿಡಿಯೋದಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿದ್ದ. 'ನಂಬಿಕೆಯು ಮನುಷ್ಯನನ್ನು ಮೂರು ಬಗೆಯ ಮುಸ್ಲಿಮರನ್ನಾಗಿ ವರ್ಗೀಕರಿಸಿದೆ. ಒಂದು ಮುಸ್ಲಿಂ, ಎರಡನೆಯದು ಮುಸ್ಲಿಮರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಮತ್ತು ಮೂರನೆಯದು ಯಾರು ಸಾಯಬೇಕಾಗಿರುವವರೋ ಅವರು. ಅನೇಕ ಜನರು ಇದನ್ನು ಹೇಳಲು ಹೆದರುತ್ತಾರೆ. ಇದನ್ನು ಬೊಟ್ಟು ಮಾಡಿದಾಗ ಕೆಲವರು ಭಯೋತ್ಪಾದನೆ ಎಂದು ಕರೆಯುತ್ತಾರೆ. ಇಸ್ಲಾಂನೊಂದಿಗೆ ಒಪ್ಪಂದ ಮಾಡಿಕೊಂಡಿರದ ಯಾರನ್ನೇ ಆದರೂ ಕೊಲ್ಲಬೇಕು' ಎಂದು ಆತ ಹೇಳಿದ್ದ.
ಹಶೀಮ್, ಕೊಲಂಬೋದಿಂದ 300 ಕಿ.ಮೀ. ದೂರದಲ್ಲಿರುವ ಬಟ್ಟಿಕಲೊವಾ ಜಿಲ್ಲೆಯ ಮುಸ್ಲಿಮರ ಪ್ರಾಬಲ್ಯದ ಕರಾವಳಿಯ ಪಟ್ಟಣದವನು. ಮೌಲ್ವಿ ಜಹ್ರಾನ್ ಹಶೀಮ್ ಅತಿ ಬೇಗನೆ ಬೆಳೆದು ಗುರುತಿಸಿಕೊಂಡವನು. ಆದರೆ ಆತನ ಸ್ಥಳೀಯ ಉಗ್ರವಾದದ ಚಟುವಟಿಕೆಗಳು, ಮೂಲಭೂತವಾದದ ಕೃತ್ಯಗಳು ಬಹುತೇಕ ಶ್ರೀಲಂಕಾ ಸರ್ಕಾರದ ಗಮನಕ್ಕೇ ಬಂದಿರಲಿಲ್ಲ.
ಇದಪ್ಪಾ ತಾಕತ್ತು! ದಾಳಿಯಾಗಿ ವಾರದೊಳಗೆ ಉಗ್ರರ ಚೆಂಡಾಡಿದ ಶ್ರೀಲಂಕಾ
ಆತನ ಪ್ರಚೋದನಾಕಾರಿ ಧರ್ಮೋಪದೇಶಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಬೆಂಬಲಿಗರನ್ನು ಸೆಳೆದುಕೊಂಡ ಇಸ್ಲಾಮಿಕ್ ಸ್ಟೇಟ್ನ ಪರವಾದ ಬಹಿರಂಗ ಬೆಂಬಲದ ಬಗ್ಗೆಯೂ ನಿರ್ಲಕ್ಷ್ಯ ವಹಿಸಿತ್ತು. ಆದರೆ, ಈ ಮೂಲಭೂತವಾದಿ ಚಟುವಟಿಕೆಗಳನ್ನು ಕಡೆಗಣಿಸಿದ್ದಕ್ಕೆ ಶ್ರೀಲಂಕಾ ಬಹುದೊಡ್ಡ ಬೆಲೆ ತೆರಬೇಕಾಯಿತು.
ಗಂಭೀರವಾಗಿ ಪರಿಗಣಿಸಿರಲಿಲ್ಲ
ಹಶೀಮ್ನ ಉಗ್ರವಾದದ ಬೆಂಬಲ ಮತ್ತು ಯುವಕರನ್ನು ಧರ್ಮದ ಹೆಸರಿನಲ್ಲಿ ಸೆಳೆದು ಬೇರೆಯವರನ್ನು ಸಾಯಿಸಲು ಪ್ರಚೋದನೆ ನೀಡುವ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ್ದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ.
'ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ'
2015ರಲ್ಲಿಯೇ ದೂರು
2015ರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ವಿಡಿಯೋಗಳನ್ನು ನೋಡಿ ಗುಪ್ತಚರ ಸಂಸ್ಥೆಗಳಿಗೆ ಜಹ್ರಾನ್ನ ದ್ವೇಷ ಭಾಷಣಗಳ ಬಗ್ಗೆ ನಾವು ದೂರು ನೀಡಿದ್ದೆವು ಎಂದು ಶ್ರೀಲಂಕಾ ಮುಸ್ಲಿಂ ಕೌನ್ಸಿಲ್ನ ಉಪಾಧ್ಯಕ್ಷ ಹಿಲ್ಮಿ ಅಹಮದ್ ತಿಳಿಸಿದ್ದಾರೆ.
ಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆ
ತಡವಾಗಿ ಎಚ್ಚೆತ್ತ ಅಧಿಕಾರಿಗಳು
ಕೊಲಂಬೋದಿಂದ 110 ಕಿ.ಮೀ. ದೂರದಲ್ಲಿರುವ ಮವಾನಲ್ಲಾದಲ್ಲಿರುವ ಬೌದ್ಧ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದಾಗಲೂ ಜಹ್ರಾನ್ ವಿರುದ್ಧ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. 2017ರಲ್ಲಿ ಬೌದ್ಧ ದೇವಾಲಯಗಳ ಮೇಲೆ ಸರಣಿ ದಾಳಿಗಳು ನಡೆದ ಬಳಿಕ ಅಧಿಕಾರಿಗಳು ಎಚ್ಚೆತ್ತರು. ಆದರೆ, ಆ ಸಮಯದಿಂದ ಆತ ಅಡಗುದಾಣವನ್ನು ಆಶ್ರಯಿಸಿದ. ಏಪ್ರಿಲ್ 21ರಂದು ಆತ್ಮಾಹುತಿ ದಾಳಿಗಳ ಮೂಲಕ ಮತ್ತೆ ಕಾಣಿಸಿಕೊಂಡ. ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಏಳು ಮಂದಿಯ ಜತೆಗೆ ನಿಂತುಕೊಂಡಿರುವ ಆತನ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವರೇ ಆತ್ಮಾಹುತಿ ಬಾಂಬರ್ಗಳು ಎಂದು ಶ್ರೀಲಂಕಾ ಸರ್ಕಾರ ಹೇಳಿದೆ.
ಹಶೀಮ್ನಿಂದ ದೂರವಿದ್ದರು
ಹಶೀಮ್ ಬೆಳೆದ ಕಟ್ಟಂಕುಡಿ ಪಟ್ಟಣದಲ್ಲಿರುವ ಆತನ ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಎನ್ಟಿಜೆಯ ಮಾಜಿ ಸದಸ್ಯರು ಆತನನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.
'ಆತ ಶ್ರೀಲಂಕಾ ಸರ್ಕಾರದ ವಿರುದ್ಧವಾಗಿದ್ದರಿಂದ ಕೆಲವು ದಿನಗಳ ಹಿಂದೆ ನಾವು ಆತನನ್ನು ಪಕ್ಷದಿಂದ ಹೊರಹಾಕಿದ್ದೆವು' ಎಂದು ಎನ್ಟಿಜೆಯ ಮುಖಂಡ ತೌಫೀಕ್ ಮೌಲ್ವಿ ಹೇಳಿದ್ದಾರೆ.
ಎಚ್ಚರಿಕೆಯ ಗಂಟೆ
ಜನರು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವವರು ಮುಸ್ಲಿಮರೇ ಅಲ್ಲ ಎಂದು ಅವರು ಹೇಳಿದ್ದಾರೆ. ಒಬ್ಬ ಉಗ್ರನ ಇತಿಹಾಸ ಶ್ರೀಲಂಕಾದಲ್ಲಿ ಅಂತ್ಯಗೊಂಡಿದೆ. ಆದರೆ, ಆತ ಸೃಷ್ಟಿಸಿದ ತಲ್ಲಣ, ಅದರಿಂದ ಉಂಟಾಗಿರುವ ಪರಿಣಾಮ ಅಷ್ಟಿಷ್ಟಲ್ಲ. ತನ್ನ ನಿರ್ಲಕ್ಷದಿಂದಾಗಿ 253 ಜೀವಗಳನ್ನು ಬಲಿಕೊಡುವಂತಾದ ಶ್ರೀಲಂಕಾದ ಘಟನೆ ಇತರೆ ದೇಶಗಳಿಗೆ ಎಚ್ಚರಿಕೆಯ ಗಂಟೆಯೂ ಹೌದು.