Sri Lanka food crisis: ಶ್ರೀಲಂಕಾ ಬಿಕ್ಕಟ್ಟು: ಅಕ್ಕಿ ಕೆಜಿಗೆ 220 ರೂ, ಹಾಲಿನ ಪುಡಿಗೆ 1900 ರೂ!
ಕೊಲೊಂಬೋ, ಏಪ್ರಿಲ್ 3: ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕರೆನ್ಸಿ ಶ್ರೀಲಂಕಾದಲ್ಲಿ ಅಗತ್ಯ ಸರಕುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ಆರ್ಥಿಕ ಕುಸಿತದ ಸಮಯದಲ್ಲಿ, ದ್ವೀಪ ರಾಷ್ಟ್ರದ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೆಚ್ಚಾಗಿ, ಅನೇಕರು ಬರಿಗೈಯಲ್ಲಿ ಹಿಂದಕ್ಕೆ ಬರುವಂತಾಗಿದೆ. ಒಂದೋ ಅಂಗಡಿಯಲ್ಲಿ ಸರಕು ಮುಗಿದಿದೆ, ಅಥವಾ ಅವರ ಬಳಿ ಅಷ್ಟು ಹಣವಿಲ್ಲ ಎಂಬ ಕಾರಣಕ್ಕಾಗಿ ಹಿಂದಕ್ಕೆ ಬರುವಂತಾಗುತ್ತಿದೆ.
ಇಂಡಿಯಾ ಟುಡೇ ರಾಜಧಾನಿ ಕೊಲಂಬೊದಲ್ಲಿನ ಸೂಪರ್ಮಾರ್ಕೆಟ್ಗೆ ಭೇಟಿ ನೀಡಿ ಶ್ರೀಲಂಕಾದವರು ತಮ್ಮ ದೈನಂದಿನ ದಿನಸಿಗಾಗಿ ಎಷ್ಟು ಖರ್ಚು ಮಾಡಬೇಕಾಗಿದೆ ಎಂದು ಪರಿಶೀಲಿಸಿ ವರದಿ ಪ್ರಕಟ ಮಾಡಿದೆ. ಈ ವರದಿಯ ಪ್ರಕಾರ ಶ್ರೀಲಂಕಾದಲ್ಲಿ ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ. ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ.
Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ
ಒಂದು ಕಿಲೋಗ್ರಾಂ ಸಕ್ಕರೆ 240 ರೂ ಆಗಿದ್ದರೆ, ತೆಂಗಿನ ಎಣ್ಣೆ ಲೀಟರ್ಗೆ 850 ರೂ.ಗೆ ಭಾರೀ ಏರಿಕೆ ಕಂಡಿದೆ. ಒಂದು ಮೊಟ್ಟೆಯ ಬೆಲೆ ತಿಳಿದಿರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುವುದು ಖಂಡಿತ. ಶ್ರೀಲಂಕಾದಲ್ಲಿ ಒಂದು ಮೊಟ್ಟೆಯ ಬೆಲೆಯು 30 ರೂ ಆಗಿದೆ. 1 ಕೆಜಿ ಹಾಲಿನ ಪುಡಿಯ ಪ್ಯಾಕ್ನ ಬೆಲೆಯು 1900 ರೂಪಾಯಿ ಆಗಿದೆ.
ಫೆಬ್ರವರಿಯಲ್ಲಿ ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು ಈಗಾಗಲೇ ಶೇಕಡಾ 17.5 ಕ್ಕೆ ತಲುಪಿದೆ. ಆಹಾರ ಹಣದುಬ್ಬರವು ಶೇಕಡಾ 25 ಕ್ಕಿಂತ ಹೆಚ್ಚಿದೆ. ಇದರಿಂದಾಗಿ ಶ್ರೀಲಂಕಾದಲ್ಲಿ ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಹೆಚ್ಚು ಹೆಚ್ಚಳವಾಗಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ.
ಭುಗಿಲೆದ್ದ ಪ್ರತಿಭಟನೆ
ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ. ರಾಜಧಾನಿ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ರಾಜಪಕ್ಸೆ ಆಡಳಿತವನ್ನು ಪ್ರತಿಭಟನಾಕಾರರು ದೂಷಿಸಿದ್ದಾರೆ. ವ್ಯಾಪಕವಾದ ಅಶಾಂತಿಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿ, ಗೋಟಾಬಯ ರಾಜಪಕ್ಸೆ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ದೇಶದಲ್ಲಿ ಜನರ ಪ್ರತಿಭಟನೆ ನಿಯಂತ್ರಣಕ್ಕೆ ತರಲು ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಲಾಗಿದೆ. ಭಾನುವಾರದಿಂದ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಈ ಮೂಲಕ ಜನರಿಗೆ ಪ್ರತಿಭಟನೆಯ ಮಾಹಿತಿ ತಲುಪದಂತೆ ಎಚ್ಚರವಹಿಸಲಾಗಿದೆ.
Sri Lanka Crisis; ವಿಮಾನ ಸಂಚಾರ ಕಡಿಮೆ ಮಾಡಿದ ಏರ್ ಇಂಡಿಯಾ
ಶನಿವಾರ ಮತ್ತು ಭಾನುವಾರ ಶ್ರೀಲಂಕಾದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ಜೊತೆಗೆ ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಂದ್ ಮಾಡಲಾಗಿತ್ತು, 15 ಗಂಟೆಗಳ ನಂತರ ಪುನರ್ ಸ್ಥಾಪಿಸಲಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.