ಕೊರೊನಾ ಆಯ್ತು ಈಗ ಮನುಷ್ಯರ ಮಾಂಸ, ಮೆದುಳು ತಿನ್ನುವ ಹುಳುಗಳ ಕಾಟ..!
ಕೊರೊನಾ ಕಂಟಕದಿಂದ ಇನ್ನೂ ಪಾರಾಗುವ ಮೊದಲೇ ವಿಜ್ಞಾನಿಗಳು ಮತ್ತೊಂದು ಭಯಾನಕ ಸುದ್ದಿ ಹೊರ ಹಾಕಿದ್ದಾರೆ. ಡೆಡ್ಲಿ ಕೊರೊನಾ ಆರ್ಭಟ ಮುಗಿದರೂ ಮನುಷ್ಯನಿಗೆ ಇನ್ನೂ ಹಲವಾರು ವಿಪತ್ತು ಎದರಾಗಲಿದೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಕೃತಿ ಮೇಲಿನ ದೌರ್ಜನ್ಯವೇ ಮಾನವನ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಿದೆ.
ಅಂದಹಾಗೆ ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮನುಷ್ಯರ ಮಾಂಸ ಭಕ್ಷಕ ಬ್ಯಾಕ್ಟೀರಿಯಾ (Buruli Ulcer) ಹಾಗೂ ಮೆದುಳು ತಿನ್ನುವ ಅಮೀಬಾ (Naegleria fowleri) ಕಾಟ ಹೆಚ್ಚಾಗಲಿದೆಯಂತೆ. ಈ ಎರಡೂ ರೋಗಗಳು ಕೊರೊನಾ ಸೋಂಕಿಗಿಂತ ಭಯಾನಕ.
ಮನುಷ್ಯರ ಮಾಂಸದ ಭಕ್ಷಕ ಬ್ಯಾಕ್ಟೀರಿಯಾ, ಸೊಳ್ಳೆಗಳ ಮೂಲಕವೂ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಹಾಗೇ ಮನುಷ್ಯರ ಮೆದುಳನ್ನ ತಿನ್ನುವ ಅಮೀಬಾ 'ನಾಗ್ಲೆರಿಯಾ ಫೌಲೆರಿ' ನೀರಿನ ಮೂಲಕ ಅತ್ಯಂತ ವೇಗವಾಗಿ ದಾಳಿ ಮಾಡುತ್ತದೆ. ವಾತಾರಣ ಬದಲಾವಣೆ ಎರಡೂ ರೋಗಗಳು ಹರಡಲು ಸಹಕಾರಿಯಾಗಿದೆ.

ಔಷಧಗಳೇ ಲಭ್ಯವಿಲ್ಲ
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಎಂದರೆ, ಈ ಸೋಂಕಿಗೆ ಸರಿಯಾದ ಔಷಧಗಳೇ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದಂತೆ, ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. ಕೇವಲ ಒಂದು ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಆದರೆ ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿಗಳು.

ಜ್ವರ, ವಾಂತಿ, ತಲೆನೋವು
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕಾರ್ಯ ಚಟುವಟಿಕೆ ಆರಂಭಿಸುತ್ತದೆ. ಹೀಗೆ ಸೂಕ್ಷ್ಮಾಣು ಜೀವಿ ತನ್ನ ಕೆಲಸ ಆರಂಭಿಸಿದ ಒಂದೆರಡು ದಿನಗಳಲ್ಲಿ ತೀವ್ರ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ, ಭಾರಿ ಪ್ರಮಾಣದಲ್ಲಿ ವಾಂತಿಯಾಗುವಂತೆ ಮಾಡುತ್ತದೆ. ಮನುಷ್ಯನ ರೋಗನಿರೋಧಕ ಶಕ್ತಿಯು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, ಕಡೆಗೆ 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ 'ನಾಗ್ಲೆರಿಯಾ ಫೌಲೆರಿ' ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.

ಬುರುಲಿ ಅಲ್ಸರ್ ಹರಡುವ ಬ್ಯಾಕ್ಟೀರಿಯ
ಕೊರೊನಾ ಕಾಟದಿಂದ ಮುಕ್ತರಾದರೆ ಸಾಕು ಎನ್ನುವಾಗಲೇ ಹೊಸ ಯುದ್ಧ ಆರಂಭವಾಗಿದೆ. ಬುರುಲಿ ಅಲ್ಸರ್ ಹರಡುವ ಬ್ಯಾಕ್ಟೀರಿಯ ಸಾಮಾನ್ಯವಾಗಿ 'ಒಪೊಸಮ್' ಎಂಬ ಉಭಯವಾಸಿಗಳ ಮಲದಲ್ಲಿ ಕಂಡುಬರುತ್ತದೆ. ಆದರೆ ಬ್ಯಾಕ್ಟೀರಿಯ ಮನುಷ್ಯರ ಚರ್ಮಕ್ಕೆ ಅಂಟಿದ್ದು ಹೇಗೆ ಅಂತಾ ಸಂಶೋಧನೆ ಆರಂಭವಾದಾಗ ಸೊಳ್ಳೆಗಳ ಜಾಡು ಸಿಕ್ಕಿದೆ. ಸೊಳ್ಳೆಗಳ ಮೂಲಕ ಮನುಷ್ಯರಿಗೆ ಬ್ಯಾಕ್ಟೀರಿಯ ಹರಡಿರಬಹುದು ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆಗಳು ಮುಂದುವರಿದಿವೆ. ಮತ್ತೊಂದ್ಕಡೆ 'ಒಪೊಸಮ್' ಪ್ರಾಣಿ ಕಂಡುಬರುವ ದೇಶಗಳು ಅಲರ್ಟ್ ಆಗಿರುವಂತೆ ಆಸ್ಟ್ರೇಲಿಯಾದಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಗಾಯ ಸಣ್ಣ ಚೆಂಡಿನ ಆಕಾರಕ್ಕೆ ತಿರುಗುತ್ತದೆ
'ಬುರುಲಿ ಅಲ್ಸರ್' ಪ್ರಾಥಮಿಕ ಅಥವಾ ದ್ವಿತೀಯ ಹಂತ ತಲುಪಿರುವಾಗಲೇ ಚಿಕಿತ್ಸೆ ಅಗತ್ಯ. ಇದನ್ನು ಮೀರಿ ಹೋದರೆ ಗಾಯ ಸಣ್ಣ ಚೆಂಡಿನ ಆಕಾರಕ್ಕೆ ತಿರುಗುತ್ತದೆ. ಆ ನಂತರ ಸರ್ಜರಿ ಮಾಡಬೇಕಾಗಿ ಬರಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವರು 'ಬುರುಲಿ ಅಲ್ಸರ್' ಸೋಂಕಿನಿಂದ ಗುಣಮುಖರಾಗಿದ್ದು, ವ್ಯಾಪಕವಾಗಿ ಬ್ಯಾಕ್ಟೀರಿಯ ಹರಡುತ್ತಿರುವುದು ಜನರಲ್ಲಿ ಭಯಮೂಡುವಂತೆ ಮಾಡಿದೆ. ಈಗಾಗಲೇ ಸ್ಥಳೀಯ ಆಡಳಿತ, ಆಸ್ಟ್ರೇಲಿಯಾದ ಸರ್ಕಾರ ಬ್ಯಾಕ್ಟೀರಿಯ ಹರಡದಂತೆ ತಡೆಯಲು ಅಗತ್ಯವಿರುವ ಕ್ರಮ ಕೈಗೊಂಡಿದೆ. ಆದರೂ ಬ್ಯಾಕ್ಟೀರಿಯ ನಿಯಂತ್ರಣ ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜೀವಕೋಶಗಳ ನಾಶಮಾಡುತ್ತದೆ
ಬ್ಯಾಕ್ಟೀರಿಯ ಚರ್ಮದ ಮೂಲಕ ದೇಹದೊಳಗೆ ಎಂಟ್ರಿಯಾದ ತಕ್ಷಣ ಜೀವಕೋಶಗಳನ್ನ ನಾಶಮಾಡುತ್ತದೆ. ವಿಷಯುಕ್ತ ಪದಾರ್ಥಗಳನ್ನು ಹರಡುವ ಮೂಲಕ ಆ ಜಾಗ ಕೊಳೆಯುವಂತೆ ಮಾಡುತ್ತದೆ. ಹೀಗೆ ದಿನದಿಂದ ದಿನಕ್ಕೆ ಗಾಯ ಹರಡುತ್ತಾ ಹೋಗುತ್ತದೆ. ಇನ್ನು ದೇಹದ ರೋಗ ನಿರೋಧಕ ಶಕ್ತಿಯೂ ಕೆಲಸ ಮಾಡದಂತೆ ಈ ಖತರ್ನಾಕ್ ಬ್ಯಾಕ್ಟೀರಿಯ ಪ್ರಭಾವ ಬೀರುತ್ತದೆ. ಹೀಗಾಗಿಯೇ ವಿಜ್ಞಾನಿಗಳು ಹೆಚ್ಚು ಚಿಂತಾಕ್ರಾಂತರಾಗಿ, 'ಬುರುಲಿ ಅಲ್ಸರ್' ನಿಯಂತ್ರಿಸಲು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈವರೆಗೂ 'ಬುರುಲಿ ಅಲ್ಸರ್' ನಿಯಂತ್ರಣಕ್ಕೆ ಅಧಿಕೃತ ಔಷಧ ಸಿಕ್ಕಿಲ್ಲವಾದರೂ, ಈಗಿರುವ ಔಷಧಗಳಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications