Ukraine War: ಭಾರತ ಮೂಲದ ಯುವಕರಿಗೆ ಯುದ್ಧಕ್ಕೆ ನೋ ಎಂಟ್ರಿ!
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಭಾರತ ಮೂಲದ ಯುವಕರು ಸಿಲುಕಿ ಪರಾಡುತ್ತಿದ್ದಾರೆ, ಆ ಮೂಲಕ ನಿಯಮಗಳನ್ನ ಮೀರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ ಇದೀಗ ರಷ್ಯಾ ಮಹತ್ವದ ನಿರ್ಧಾರ ಪ್ರಕಟಿಸಿದೆ. ಅರೆರೆ, ಹಾಗಾದ್ರೆ ರಷ್ಯಾ ಪ್ರಕಟಿಸಿರುವ ಆ ಮಹತ್ವದ ನಿರ್ಧಾರ ಏನು? ಭಾರತೀಯ ಯುವಕರನ್ನು ಮತ್ತೆ ನೇಮಕ ಮಾಡಿಕೊಳ್ಳುವುದಿಲ್ವಾ? ಬನ್ನಿ ತಿಳಿಯೋಣ.
ಅಂದಹಾಗೆ ಉಕ್ರೇನ್ನಲ್ಲಿ ರಷ್ಯಾ ಸೇನೆ ಭೀಕರ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಯುದ್ಧ ಶುರುವಾದ ನಂತರ ರಷ್ಯಾ ಸೇನೆಗೆ ಸೈನಿಕರ ಸಂಖ್ಯೆ ಕಡಿಮೆ ಆಗಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗ ಭಾರತ ಮೂಲದ ಯುವಕರು ಸೇರಿದಂತೆ ಬೇರೆ ಬೇರೆ ದೇಶಗಳ ಯುವಕರನ್ನ ಸೇನೆಗೆ ನೇಮಕ ಮಾಡಿ ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ಆಕ್ರೋಶ ಮೂಡಿಸಿದೆ. ಈ ಬೆನ್ನಲ್ಲೇ ಮಹತ್ವದ ಮಾಹಿತಿ ಇದೀಗ ಹೊರಬಿದ್ದಿದೆ. ಈ ಕುರಿತು ಖುದ್ದು ರಷ್ಯಾ ರಾಯಭಾರ ಕಚೇರಿ ಮಹತ್ವದ ಮಾಹಿತಿ ನೀಡಿದೆ.

ಯುದ್ಧದಲ್ಲಿ ಭಾರತೀಯ ಯುವಕರಿಗೆ...
ರಷ್ಯಾ & ಉಕ್ರೇನ್ ನಡುವೆ ಭೀಕರ ರಣಕಾಳಗ ನಡೆಯುತ್ತಿದ್ದು, ಭಾರಿ ಆತಂಕ ಮನೆಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದು ದುರದೃಷ್ಟಕರ ಎಂದಿದೆ ರಷ್ಯಾ ರಾಯಭಾರ ಕಚೇರಿ. ಅಲ್ಲದೆ ಭಾರತ ಮೂಲದ ಪ್ರಜೆಗಳನ್ನು ಮುಂದೆ ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಕೂಡ ತಿಳಿಸಲಾಗಿದೆ. ಆ ಮೂಲಕ ಇದೇ ಏಪ್ರಿಲ್ ತಿಂಗಳಿಂದಲೇ ರಷ್ಯಾ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿ ನಿಲ್ಲಿಸಿದ್ದೇವೆ ಎಂಬ ವಿಚಾರವನ್ನು ಕೂಡ, ರಷ್ಯಾ ರಾಯಭಾರ ಕಚೇರಿ ಇದೀಗ ತಿಳಿಸಿದೆ.
ಪ್ರಧಾನಿ ಮೋದಿ ಮನವಿ ಮಾಡಿದ್ದರು
ಅಷ್ಟಕ್ಕೂ ಈಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಲೋಕಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, 69 ಭಾರತ ಮೂಲದ ಯುವಕರು ಉಕ್ರೇನ್ನ ಯುದ್ಧ ಭೂಮಿ ಬಿಟ್ಟು, ರಷ್ಯಾ ಸೇನೆ ತೊರೆದು ಬರುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ದಿನಗಳ ಹಿಂದೆ ರಷ್ಯಾ ಪ್ರವಾಸ ಕೈಗೊಂಡ ಸಮಯದಲ್ಲಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎದುರು ಈ ವಿಚಾರ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಭಾರತ ಮೂಲದ ಯುವಕರನ್ನ ರಷ್ಯಾ ಸೇನೆಗೆ ನೇಮಿಸಿಕೊಂಡು ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸದಂತೆ ಮನವಿ ಮಾಡಿದ್ರು. ಅದಕ್ಕೆ ಈಗ ರಷ್ಯಾ ಪ್ರತಿಸ್ಪಂದಿಸುತ್ತಿದೆ ಎನ್ನಲಾಗಿದೆ.












Click it and Unblock the Notifications