Ukraine War: 307 ಯುದ್ಧ ಖೈದಿಗಳ ಹಸ್ತಾಂತರ, ರಷ್ಯಾ & ಉಕ್ರೇನ್ ಶಾಂತಿ ಚರ್ಚೆಗೆ ದೊಡ್ಡ ತಿರುವು!
ರಷ್ಯಾ & ಉಕ್ರೇನ್ ನಡುವೆ ಆದಷ್ಟು ಬೇಗ ಕದನ ವಿರಾಮ ಘೋಷಣೆ ಮಾಡಬೇಕು ಎಂಬ ಅಮೆರಿಕದ ಪ್ರಯತ್ನಕ್ಕೆ ನಿಧಾನವಾಗಿ ಇದೀಗ ಗೆಲುವು ಸಿಗುತ್ತಿದ್ದು, ರಷ್ಯಾ & ಉಕ್ರೇನ್ ಮಧ್ಯೆ ಸದ್ಯಕ್ಕೆ ಮಹತ್ವದ ಬೆಳವಣಿಗೆ ನಡೆದಿದೆ. ಅದರಲ್ಲೂ ಪರಸ್ಪರ ಯುದ್ಧ ಖೈದಿಗಳ ಹಸ್ತಾಂತರ ಮಾಡಿಕೊಳ್ಳಲು ಎರಡೂ ದೇಶಗಳು ಮುಂದಾಗಿವೆ. ಈ ಮೂಲಕ ಕದನ ವಿರಾಮ ಘೋಷಣೆ ಮಾಡುವ ಮುನ್ಸೂಚನೆ ಸಿಕ್ಕಿದೆ. ಎರಡೂ ದೇಶಗಳ ಪ್ರಜೆಗಳಿಗೆ ಇದು ಸಾಕಷ್ಟು ನೆಮ್ಮದಿಯನ್ನ ಕೂಡ ನೀಡಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಕೂತು ಮಾತುಕತೆ ಮಾಡಿ ಯುದ್ಧ ನಿಲ್ಲಿಸುತ್ತೇವೆ ಅಂತಾ ಉಕ್ರೇನ್ ಅಧ್ಯಕ್ಷ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಂಧಾನ ಸಭೆಗೆ ಬರದೇ ಹೋದರೂ, ರಷ್ಯಾ & ಉಕ್ರೇನ್ ಈ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದವು. ಟರ್ಕಿ ದೇಶದ ಪ್ರಮುಖ ನಗರ ಇಸ್ತಾಂಬುಲ್ ಈ ಸಂಧಾನ ಸಭೆಗೆ ವೇದಿಕೆ ಒದಗಿಸಿದ್ದು, ಇದೀಗ ಶಾಂತಿ ಮಾತುಕತೆ ಭಾಗವಾಗಿ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ವೇಗ ಪಡೆದಿದೆ.

307 ಖೈದಿಗಳ ವಿನಿಮಯ ಪ್ರಕ್ರಿಯೆ
ಮೇ 24ರ ಶನಿವಾರ ಕೂಡ ರಷ್ಯಾ & ಉಕ್ರೇನ್ ನಡುವೆ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ಮುಂದುವರಿದಿದ್ದು, ತಲಾ 307 ಖೈದಿಗಳ ವಿನಿಮಯ ಪ್ರಕ್ರಿಯೆ ಯಶಸ್ವಿಯಾಗಿದೆ. ಶುಕ್ರವಾರ ಕೂಡ ಇದೇ ರೀತಿಯಾಗಿ ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆ ನಡೆದಿತ್ತು. ಶುಕ್ರವಾರದಂದು ಒಟ್ಟು 390 ಜನರ ಹಸ್ತಾಂತರ ನಡೆದಿದ್ದು, ಇದೀಗ ಮತ್ತೊಂದು ಸುತ್ತಿನಲ್ಲಿ ಹಸ್ತಾಂತರವನ್ನ ಮಾಡಲಾಗಿದೆ. ಈ ಬಗ್ಗೆ ರಷ್ಯಾದ ರಕ್ಷಣಾ ಸಚಿವಾಲಯ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಮಾಹಿತಿ ನೀಡಿದ್ದಾರೆ.
ಯುದ್ಧ ನಿಲ್ಲಿಸುತ್ತಾ ರಷ್ಯಾ ಸೇನೆ?
ಕಳೆದ 1 ತಿಂಗಳಿಂದ ನಿರಂತರವಾಗಿ ರಷ್ಯಾ ಸೇನೆ ಡೆಡ್ಲಿ ದಾಳಿ ನಡೆಸುತ್ತಿದ್ದು, ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದು ನಲುಗಿ ಹೋಗಿದ್ದಾರೆ. ಅದೇ ರೀತಿ ಉಕ್ರೇನ್ ಶಕ್ತಿ ಘಟಕಗಳ ಮೇಲೆ ಕೂಡ ಭೀಕರ ದಾಳಿ ನಡೆಸಲಾಗಿದೆ. ಈ ಮೂಲಕ ಭಾರಿ ಎಡವಟ್ಟುಗಳೇ ನಡೆದು ಹೋಗಿದ್ದು, ಹಲವರ ಜೀವ ಬಲಿಯಾಗಿದ್ದರೆ ಹತ್ತಾರು ಜನರಿಗೆ ಸಾವು & ಬದುಕಿನ ಹೋರಾಟ ಶುರುವಾಗಿದೆ. ಇನ್ನೊಂದ್ಕಡೆ ಅಮೆರಿಕ ನೇತೃತ್ವದಲ್ಲಿ ಮಾತುಕತೆ ಕೂಡ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications