Breaking: ಶ್ರೀಲಂಕಾ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ
ಕೊಲಂಬೋ, ಜುಲೈ 20: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ನಡೆಯ ಅಧ್ಯಕ್ಷ ಚುನಾವಣೆಯಲ್ಲಿ ರಾನಿಲ್ ವಿಕ್ರಮಸಿಂಘೆ ಅನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಗೋಟಬಯ ರಾಜಪಕ್ಸೆ ದ್ವೀಪರಾಷ್ಟ್ರವನ್ನು ತೊರೆದು ಸಿಂಗಾಪುರಕ್ಕೆ ಪಲಾಯನ ಮಾಡಿದರು. ಈ ಬೆಳವಣಿಗೆ ಹಿನ್ನೆಲೆ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶ್ರೀಲಂಕಾ ಸಂಸತ್ತಿನ ಒಟ್ಟು 223 ಮತಗಳಲ್ಲಿ ಇಬ್ಬರು ಸದಸ್ಯರು ಮತದಾನದಿಂದ ದೂರ ಉಳಿದರೆ, 4 ಮತಗಳನ್ನು ತಿರಸ್ಕರಿಸಲಾಯಿತು. ಬುಧವಾರ ನಡೆದ ಚುನಾವಣೆಯಲ್ಲಿ ಒಟ್ಟು 219 ಮತಗಳು ಚಲಾವಣೆ ಆಗಿದ್ದವು. ಈ ಒಟ್ಟು ಮತಗಳ ಪೈಕಿ ರಾನಿಲ್ ವಿಕ್ರಮ ಸಿಂಘೆ ಪರವಾಗಿ 134 ಮತಗಳು ಚಲಾವಣೆಯಾಗಿವೆ.
ಸಂಸತ್ ಉದ್ದೇಶಿಸಿ ರಾನಿಲ್ ವಿಕ್ರಮ ಸಿಂಘೆ ಭಾಷಣ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾನಿಲ್ ವಿಕ್ರಮಸಿಂಘೆ, ಸಂಸತ್ತಿನ ಆವರಣದ ಸಭಾಂಗಣದ ಹೊರಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡುವಂತೆ ಸ್ಪೀಕರ್ಗೆ ಮನವಿ ಮಾಡಿದರು. ನಾಳೆಯಿಂದ ಎಲ್ಲ ಪಕ್ಷಗಳ ಜೊತೆ ಚರ್ಚೆ ಆರಂಭಿಸಲು ತಾವು ಸಿದ್ಧ ಎಂದು ಹೇಳಿದರು.
ದ್ವೀಪರಾಷ್ಟ್ರದಿಂದ ಮಾಜಿ ಅಧ್ಯಕ್ಷ ರಾಜಪಕ್ಸೆ ಜೂಟ್: ಇಡೀ ರಾಷ್ಟ್ರವೇ ಆರ್ಥಿಕ ಬಿಕ್ಕಟ್ಟು, ಇಂಧನ ಕೊರತೆ, ಸರ್ಕಾರದ ನಿರ್ವಹಣೆ ವೈಫಲ್ಯದ ಸುಳಿಗೆ ಸಿಲುಕಿದ ಸಂದರ್ಭದಲ್ಲಿ ಜನರು ಕೆರಳಿ ರಸ್ತೆಗೆ ಇಳಿದರು. ಒಂದು ಹಂತದಲ್ಲಿ ಜನರು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಧಿಕ್ಕಾರ ಘೋಷಣೆಗಳನ್ನು ಕೂಗುತ್ತಿರುವುದರ ಮಧ್ಯೆ ಸರ್ಕಾರದ ಚುಕ್ಕಾಣಿಯನ್ನು ಬಿಟ್ಟು ಓಡಿ ಹೋಗುವ ನಿರ್ಧಾರಕ್ಕೆ ರಾಜಪಕ್ಸೆ ಬಂದರು.
ಕಳೆದ ಜುಲೈ 14ರಂದು ರಾಜಪಕ್ಸೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮಾಲ್ಡೀವ್ಸ್ ಕಡೆಗೆ ಪಲಾಯನ ಮಾಡಿದರು. ಅಲ್ಲಿನ ಶ್ರೀಲಂಕಾ ಪ್ರಜೆಗಳು ಪ್ರತಿಭಟನೆ ಮಾಡುತ್ತಿರುವುದನ್ನು ಅರಿತುಕೊಂಡು ಸಿಂಗಾಪುರಕ್ಕೆ ಹಾರಿದ್ದರು.
Recommended Video