ಶಾಲೆಗೆ ಹೋಗಲು ಪ್ಯಾಲೆಸ್ತೀನ್ ವಿದ್ಯಾರ್ಥಿಗಳ ಪರದಾಟ: ದಾರಿಗೆ ಮುಳ್ಳುತಂತಿ ಬೇಲಿ ಹಾಕಿದ ಇಸ್ರೇಲ್ ಪಡೆ
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಸಣ್ಣ ಹಳ್ಳಿಯೊಂದರಲ್ಲಿ ಪ್ಯಾಲೇಸ್ಟಿನಿಯನ್ ಮಕ್ಕಳು ಶಾಲೆಗೆ ಹೋಗದಂತೆ ಮುಳ್ಳುತಂತಿ ಬೇಲಿ ಅಳವಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಹತ್ತಾರು ವಿದ್ಯಾರ್ಥಿಗಳು ಈ ವಾರ ಶಾಲೆಗೆ ಹಾಜರಾಗಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹೆಬ್ರಾನ್ ನಗರದ ಸಮೀಪವಿರುವ ಉಮ್ ಅಲ್-ಖೈರ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣದ ನಡುವೆಯೇ, ಸೋಮವಾರ ಮೊದಲ ಬಾರಿಗೆ ಮಕ್ಕಳಿಗೆ ಶಾಲೆಗೆ ಹೋಗುವ ದಾರಿಯಲ್ಲಿ ಮುಳ್ಳುತಂತಿ ಬೇಲಿ ಅಡ್ಡಲಾಗಿರುವುದು ಕಂಡುಬಂದಿದೆ. ಹತ್ತಿರದ ಕಾರ್ಮೆಲ್ ನೆಲೆಗೆ ಸೇರಿದ ಇಸ್ರೇಲಿಗಳು ಈ ಬೇಲಿಯನ್ನು ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸ್ಥಳೀಯರಲ್ಲಿ ಆತಂಕ
ಗ್ರಾಮದ ಹೊರವಲಯದಿಂದ ಬರುವ ಮಕ್ಕಳು ಕಣಿವೆಯ ಮೂಲಕ ಹಾದುಹೋಗುವ ಸುರಕ್ಷಿತ ಹಾದಿಯನ್ನು ಈ ಬೇಲಿ ತಡೆದಿದೆ. ಒಂದು ವೇಳೆ ಈ ಹಾದಿ ತಪ್ಪಿದರೆ ಮಕ್ಕಳು ಮುಖ್ಯ ರಸ್ತೆಯ ಮೂಲಕ ಬರಬೇಕಾಗುತ್ತದೆ. ಆದರೆ ಆ ರಸ್ತೆಯು ನೆಲೆಗಳಿಗೆ ತೀರಾ ಹತ್ತಿರವಿರುವುದರಿಂದ ಮಕ್ಕಳಿಗೆ ಅಪಾಯಕಾರಿ ಎಂದು ಉಮ್ ಅಲ್-ಖೈರ್ ಗ್ರಾಮ ಸಮಿತಿಯ ಮುಖ್ಯಸ್ಥ ಖಲೀಲ್ ಹಥಾಲೀನ್ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಮೊದಲಿನಿಂದಲೂ ಬಳಸುತ್ತಿದ್ದ ಹಾದಿಯನ್ನೇ ನಾವು ಬಳಸುತ್ತೇವೆ. ಈ ಮುಳ್ಳುತಂತಿ ಬೇಲಿಯು ಸ್ಥಳೀಯರ ಭೂಮಿಯನ್ನು ಕಸಿದು ತಮ್ಮ ನೆಲೆಗಳನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಮಾನವ ಹಕ್ಕುಗಳ ಸಂಘಟನೆಯಿಂದ ಖಂಡನೆ
ಇಸ್ರೇಲಿ ಮಾನವ ಹಕ್ಕುಗಳ ಸಂಘಟನೆಯಾದ 'ಬಿಸೆಲೆಮ್' ಈ ಕೃತ್ಯವನ್ನು ಖಂಡಿಸಿದೆ. ಪಶ್ಚಿಮ ದಂಡೆಯಲ್ಲಿ ಪ್ಯಾಲೇಸ್ಟಿನಿಯನ್ನರನ್ನು ಭಯಭೀತಗೊಳಿಸಿ ಅವರ ಭೂಮಿಯಿಂದ ಹೊರಹಾಕಲು ವ್ಯವಸ್ಥಿತ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಂಘಟನೆ ದೂರಿದೆ.
ಪ್ಯಾಲೇಸ್ಟಿನಿಯನ್ ಕಾರ್ಯಕರ್ತರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ, ಶಾಲಾ ಮಕ್ಕಳು ಹೊಸದಾಗಿ ನಿರ್ಮಿಸಲಾದ ಮುಳ್ಳುತಂತಿ ಬೇಲಿಯ ಬಳಿ ಕುಳಿತು ಅಸಹಾಯಕರಾಗಿ ನಿಂತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋವನ್ನು ರಾಯಿಟರ್ಸ್ ಸಂಸ್ಥೆ ದೃಢಪಡಿಸಿದೆ. ದಾರಿ ಬಿಡುವಂತೆ ಮಕ್ಕಳು ವಿನಂತಿಸುತ್ತಿದ್ದರೂ, ಇಸ್ರೇಲಿ ಸೈನಿಕರು ಅಶ್ರುವಾಯು ಪ್ರಯೋಗಿಸಿರುವುದಾಗಿ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸೈನಿಕರು ಸಿಡಿಸಿದ ಅಶ್ರುವಾಯು ಪರಿಣಾಮವಾಗಿ ಹಲವು ಮಕ್ಕಳು ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಗ್ಯಾಸ್ನ ಹೊಗೆಯಿಂದಾಗಿ ಮಕ್ಕಳು ಉಸಿರುಗಟ್ಟಿ ಸಾವು-ಬದುಕಿನ ನಡುವೆ ಹೋರಾಡುವಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೂಡ ಸ್ಥಳದಲ್ಲಿ ಹೊಗೆ ಏಳುತ್ತಿರುವುದು ಕಂಡುಬಂದಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಶಾಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ಇಸ್ರೇಲ್ ಹೊಡೆದುರುಳಿಸಿದಾಗ, ಅವುಗಳ ಅವಶೇಷಗಳು ಪಶ್ಚಿಮ ದಂಡೆಯ ಹಲವು ಭಾಗಗಳಲ್ಲಿ ಬಿದ್ದಿದ್ದವು. ಇದರಿಂದಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಈಗ ಪರಿಸ್ಥಿತಿ ತಿಳಿಯಾದ ನಂತರ ಶಾಲೆಗೆ ಮರಳುತ್ತಿದ್ದ ಮಕ್ಕಳಿಗೆ ಈ ರೀತಿ ಬೇಲಿ ಮತ್ತು ಅಶ್ರುವಾಯುವಿನ ಅಡ್ಡಿ ಎದುರಾಗಿದೆ.












Click it and Unblock the Notifications