ಲೋಕಸಭೆ ಚುನಾವಣೆ ನಂತರವೇ ಭಾರತದ ಜತೆ ಶಾಂತಿ ಮಾತುಕತೆ: ಇಮ್ರಾನ್ ಖಾನ್
ರಿಯಾದ್ (ಯುಎಇ), ಅಕ್ಟೋಬರ್ 23: ಭಾರತದಲ್ಲಿ ಮುಂದಿನ ಲೋಕಸಭೆ ಚುನಾವಣೆ ಆದ ನಂತರ ಶಾಂತಿ ಮಾತುಕತೆ ನಡೆಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
"ಚುನಾವಣೆ ಗೆದ್ದು, ಅಧಿಕಾರಕ್ಕೆ ಬಂದ ತಕ್ಷಣ ನಾನು ಮಾಡಿದ ಮೊದಲ ಕೆಲಸ ಏನೆಂದರೆ, ಭಾರತದ ಕಡೆಗೆ ಶಾಂತಿಯ ಹಾಗೂ ಸ್ನೇಹದ ಹಸ್ತ ಚಾಚಿದ್ದು" ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನವು ವಿತ್ತೀಯ ಕೊರತೆ ಅನುಭವಿಸುತ್ತಿದ್ದು, ಅದರಿಂದ ಹೊರಬರಲು ಹಣಕಾಸಿನ ವ್ಯವಸ್ಥೆಗಾಗಿ ಸಮಾವೇಶಕ್ಕೆ ತೆರಳಿದ್ದಾರೆ.
"ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿಯುವ ತನಕ ನಾವು ಕಾಯುತ್ತೇವೆ. ಆ ನಂತರ ಶಾಂತಿ ಮಾತುಕತೆಯನ್ನು ಮುಂದುವರಿಸುತ್ತೇವೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಭಾರತದಲ್ಲಿ ಮುಂದಿನ ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯುವ ಸಾಧ್ಯತೆ ಇದೆ.

ಇಮ್ರಾನ್ ಖಾನ್ ಶಾಂತಿ ಮಾತುಕತೆ ಬಗ್ಗೆ ಪ್ರಸ್ತಾವ ಮಾಡುತ್ತಿರುವ ಹಿಂದೆ ಇರುವ ಉದ್ದೇಶದ ಬಗ್ಗೆ ವಿಶ್ಲೇಷಣೆ ಮಾಡುವುದಾದರೆ, ಹಣದ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ತುರ್ತಾಗಿ ಮಿತ್ರ ದೇಶಗಳಿಂದ ಹಣಕಾಸಿನ ನೆರವು ಬೇಕು ಎಂಬುದು ಗೊತ್ತಾಗುತ್ತದೆ. ಇನ್ನು ಅದರ ಮಿತ್ರದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ಹೆಸರು ಪ್ರಮುಖವಾಗಿದೆ.
ಪಾಕ್ ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಮಿತ್ರದೇಶಗಳಾದ ಚೀನಾ ಮತ್ತು ಸೌದಿ ಅರೇಬಿಯಾದಿಂದ ಸಾಲ ಕೇಳುತ್ತಲೇ ಇದ್ದಾರೆ. ಭ್ರಷ್ಟ ಅಧಿಕಾರಿಗಳು ಲೂಟಿ ಮಾಡಿದ ಹಣವನ್ನು ವಾಪಸ್ ವಸೂಲಿ ಮಾಡುವುದಾಗಿ ಮಾತು ನೀಡಿರುವ ಇಮ್ರಾನ್ ಖಾನ್, ಹಣ ಉಳಿತಾಯ ಮಾಡುವ ಸಲುವಾಗಿ ವಿವಿಧ ಕ್ರಮಗಳನ್ನು ಸಹ ಕೈಗೊಂಡಿದ್ದಾರೆ.
ಆದರೂ ದೊಡ್ಡ ಮಟ್ಟದಲ್ಲಿ ಯಾವುದೇ ಸಹಾಯ ಆಗುತ್ತಿಲ್ಲ. ಇನ್ನು ಆರ್ಥಿಕ ತಜ್ಞರು ಪರಿಸ್ಥಿತಿಯ 'ತುರ್ತು' ಎಷ್ಟು ಎಂಬುದನ್ನು ವಿವರಿಸಿ, ಶೀಘ್ರ ಕ್ರಮಕ್ಕೆ ಸಲಹೆ ನೀಡುತ್ತಿದ್ದಾರೆ.












Click it and Unblock the Notifications