ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ
ಇಸ್ಲಾಮಾಬಾದ್, ಜೂನ್ 22: ಚೀನಾದ ಸಾಲ ಮತ್ತು ಶೂಲ ತಂತ್ರಕ್ಕೆ ಪಾಕಿಸ್ತಾನ ಸಿಲುಕಿದ್ದು, ಅದರಿಂದ ಹೊರಬರಲು ಭಾರೀ ಬೆಲೆ ತೆರಬೇಕಾಗಬಹುದು. ಭಾರತದಿಂದ ಆಕ್ರಮಿಸಿಕೊಂಡಿರುವ ಕಾಶ್ಮೀರ ಭಾಗಕ್ಕೆ ಸೇರಿದ ಗಿಲ್ಗಿಟ್-ಬಾಲ್ಟಿಸ್ತಾನ (Gilgit Baltistan Region) ಪ್ರಾಂತ್ಯವನ್ನು ಚೀನಾ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಬೆಟ್ಟದಷ್ಟು ಸಾಲವನ್ನು ತೀರಿಸಲು ಈ ಪ್ರಾಂತ್ಯವನ್ನು ಪಾಕಿಸ್ತಾನ ಲೀಸ್ ಮೇಲೆ ಚೀನಾಗೆ ಕೊಡುವುದು ಅನಿವಾರ್ಯವಾಗಲಿದೆ ಎಂದು ಪಾಕಿಸ್ತಾನದ ಹೋರಾಟಗಾರ್ತಿ ಮುಮ್ತಾಜ್ ನಗ್ರಿ ಹೇಳಿದ್ದಾರೆ.
ಪಾಕಿಸ್ತಾನದ ಕಾರಾಕೋರಂ ರಾಷ್ಟ್ರೀಯ ಚಳವಳಿಯ ಮುಖ್ಯಸ್ಥೆಯಾಗಿರುವ ಮುಮ್ತಾಜ್ ನಗ್ರಿ ಗಿಲ್ಗಿಟ್ ಬಾಲ್ಟಿಸ್ತಾನದ ಜನರಿಗೆ ಪ್ರತಿರೋಧಕ್ಕಾಗಿ ಕರೆ ನೀಡಿದ್ಧಾರೆ. ಇವರ ಪ್ರಕಾರ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯವು ಮುಂದಿನ ದಿನಗಳಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದ್ದು, ಚೀನಾ ಅಮೆರಿಕದಂಥ ವಿಶ್ವ ಶಕ್ತಿಗಳಿಗೆ ಭವಿಷ್ಯದಲ್ಲಿ ರಣರಂಗ ಆಗುವ ಅಪಾಯ ಇದೆ.
"ಪಾಕಿಸ್ತಾನದ ಐಎಸ್ಐಗೆ ಯಾರೂ ಭಯ ಪಡಬೇಡಿ. ಜೈಲಿಗೆ ಹೋಗಲು ಸಿದ್ಧವಾಗಿ" ಎಂದು ಕಾರಾಕೋರಂ ನ್ಯಾಷನಲ್ ಮೂವ್ಮೆಂಟ್ನ ಮುಮ್ತಾಜ್ ನಗ್ರಿ ಕರೆ ನೀಡಿದ್ದಾರೆ.

ಏನಿದು ಕಾರಾಕೋರಂ ನ್ಯಾಷನಲ್ ಮೂವ್ಮೆಂಟ್
ಕಾರಾಕೋರಂ ಎಂಬುದು ಭಾರತ, ಪಾಕಿಸ್ತಾನ ಮತ್ತು ಚೀನಾದ ಗಡಿಭಾಗದಲ್ಲಿ ವ್ಯಾಪಿಸಿರುವ ಪರ್ವತ ಶ್ರೇಣಿಯಾಗಿದೆ. ಇದು ಅಫ್ಘಾನಿಸ್ತಾನ್ ಮತ್ತು ತಜಿಕಿಸ್ತಾನದವರೆಗೂ ವ್ಯಾಪಿಸಿದೆ. ಇತ್ತ ಲಡಾಖ್ ಮತ್ತು ಅಕ್ಸಾಯ್ ಚಿನ್ ಪ್ರದೇಶದವರೆಗೂ ಈ ಪರ್ವತ ಶ್ರೇಣಿ ಬರುತ್ತದೆ.
ಈ ಪರ್ವತಶ್ರೇಣಿಯ ಬಹುಭಾಗ ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲೇ ಇದೆ. ಈ ಪರ್ವತ ಶ್ರೇಣಿಯ ಸುತ್ತ ಬರುವ ಪ್ರದೇಶಗಳಲ್ಲಿ ಶಿಯಾ ಮುಸ್ಲಿಮ್ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಗಿಲ್ಗಿಟ್, ಕುರಂ ಏಜೆನ್ಸಿ, ಪಂಜಾಬ್, ನಾರ್ತ್ ವೆಸ್ಟ್ ಫ್ರಾಂಟಿಯರ್ ಮೊದಲಾದ ಸ್ಥಳಗಳನ್ನು ಸೇರಿಸಿ ಕಾರಾಕೋರಂ ಪ್ರಾಂತ್ಯವಾಗಿ ಮಾಡಬೇಕು ಎಂಬ ಬೇಡಿಕೆ ಇದೆ. ಅದಕ್ಕಾಗಿ ಹೋರಾಟವೂ ನಡೆಯುತ್ತಿದೆ.

ಗಿಲ್ಗಿಟ್-ಬಾಲ್ಟಿಸ್ತಾನ್ ಅನಾಥ ಕೂಸು
ಸ್ವತಂತ್ರ ಕಾಶ್ಮೀರ ಸ್ಥಾಪಿಸುವುದಾಗಿ ಹೇಳಿ ಭಾರತದಿಂದ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನ ಕಸಿದುಕೊಂಡಿದೆ. ಈ ಪಾಕ್ ಆಕ್ರಮಿತ ಪ್ರದೇಶದ ಒಂದು ಭಾಗವೇ ಗಿಲ್ಗಿಟ್ ಬಾಲ್ಟಿಸ್ತಾನ್. ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರ ದೇಶವಾಗಲು ಹೋರಾಡಿ ಹೈರಾಣಾಗಿದೆ. ಅಲ್ಲಿಯ ಹೋರಾಟಗಳು ದಿನೇ ದಿನೇ ಕ್ಷೀಣಿಸುತ್ತಿವೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಅದರಲ್ಲೂ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಅಭಿವೃದ್ಧಿಯೇ ಮರೀಚಿಕೆಯಾಗಿದೆ. ಬಡತನ ಇಲ್ಲಿ ಕಿತ್ತು ತಿನ್ನುತ್ತಿದೆ. ಜನಸಂಖ್ಯೆ ಕುಸಿಯುತ್ತಿದೆ. ಆಹಾರ ಕೊರತೆ ಇದೆ. ಆರೋಗ್ಯವಂತರು ತಮ್ಮ ಕುಟುಂಬ ಸಮೇತ ಪಾಕಿಸ್ತಾನದ ಬೇರೆಡೆಗೆ ವಲಸೆ ಹೋಗುತ್ತಿದ್ಧಾರೆ. ಪಾಕಿಸ್ತಾನದಲ್ಲಿ ಶೇ. 9ರಷ್ಟು ಆತ್ಮಹತ್ಯೆಗಳು ಜಿಬಿ ಪ್ರಾಂತ್ಯದಲ್ಲೇ ವರದಿಯಾಗುತ್ತಿವೆ.
ಇಡೀ ಪಾಕಿಸ್ತಾನಕ್ಕೆ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಮಾಡುವ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ದಿನಕ್ಕೆ ಎರಡು ಗಂಟೆ ವಿದ್ಯುತ್ ಕೂಡ ಇರುವುದಿಲ್ಲ ಎಂದರೆ ಅಚ್ಚರಿ ಎನಿಸಬಹುದು. ಅಂದರೆ ಅಡುಗೆ ಮಾಡಿ ಬಡಿಸಿದವರು ಉಪವಾಸ ಇರುವಂತಾಯಿತು. ಅಪ್ರತಿಮ ನೈಸರ್ಗಿಕ ಸಂಪನ್ಮೂಲ ಇದ್ದರೂ ಅದು ಸ್ಥಳೀಯರ ಉಪಯೋಗಕ್ಕೆ ಸಿಗುತ್ತಿಲ್ಲ. ಹೀಗಾಗಿ, ಜಿಬಿ ಎಂಬುದು ಅನಾಥ ಕೂಸಾಗಿ ಹೋಗಿದೆ.

ಚೀನಾಗೆ ಮುಖ್ಯ ಈ ಜಿಬಿ
ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಭಾವ ಮತ್ತು ಆಧಿಕಾರ ವಿಸ್ತರಿಸಲು ಚೀನಾಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಬಹಳ ಮುಖ್ಯವಾಗಿದೆ. ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (ಸಿಪೆಕ್) ಯೋಜನೆಯ ವ್ಯಾಪ್ತಿಯಲ್ಲಿ ಕಾರಾಕೋರಂ ಬರುತ್ತದೆ. ಹೀಗಾಗಿ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಆ ಮೂಲಕ ದಕ್ಷಿಣ ಏಷ್ಯನ್ ದೇಶಗಳ ಮೇಲೆ ಅಧಿಕಾರ ಸ್ಥಾಪಿಸುವ ಚಿತಾವಣಿ ಚೀನಾದ್ದಾಗಿದೆ.
ಹೀಗಾಗಿ, ಪಾಕಿಸ್ತಾನಕ್ಕೆ ಸಾಲ ಕೊಟ್ಟೂ ಕೊಟ್ಟೂ ಕೊಬ್ಬಿಸಿ ಈಗ ಅದು ಸಾಲ ಹಿಂದಿರುಗಿಸಲಾಗದ ಮಟ್ಟಕ್ಕೆ ತಂದು ನಿಲ್ಲಿಸಿದೆ. ಭಾರತ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಂತೆ ಪಾಕಿಸ್ತಾನ ಜಿಬಿಯನ್ನು ಚೀನಾಗೆ ಧಾರೆ ಎರೆದುಕೊಡಬಹುದು.

ಅಮೆರಿಕದ ಕೆಂಗಣ್ಣು
ಒಂದು ವೇಳೆ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಪಾಕಿಸ್ತಾನ ಚೀನಾಗೆ ಕೊಟ್ಟರೆ ಅದು ಅಮೆರಿಕಕ್ಕೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗುತ್ತದೆ. ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆದು ಅಧಿಕಾರ ಬಿಟ್ಟುಕೊಟ್ಟು ಕೈಸುಟ್ಟುಕೊಂಡಂತಿರುವ ಅಮೆರಿಕಕ್ಕೆ ದಕ್ಷಿಣ ಏಷ್ಯಾ ಪ್ರದೇಶದ ಮೇಲಿನ ಮನಸು ಹೋಗಿಲ್ಲ. ಇಲ್ಲಿ ಚೀನಾ ಹಿಡಿದ ಸಾಧಿಸಿದರೆ ಅಮೆರಿಕ ಅಸಹಾಯಕವಾಗಬೇಕಾಗುತ್ತದೆ. ಹೀಗಾಗಿ, ಪಾಕಿಸ್ತಾನಕ್ಕೆ ಚಾಟಿ ಬೀಸಲು ಅಮೆರಿಕ ಅಣಿಯಾಗಿದೆ.
ಪಾಕಿಸ್ತಾನಕ್ಕೆ ಐಎಂಎಫ್ನಿಂದ 3 ಬಿಲಿಯನ್ ಯುಎಸ್ ಡಾಲರ್ (ಸುಮಾರು 23 ಸಾವಿರ ಕೋಟಿ ರೂ) ಹಣದ ನೆರವು ಸಿಗಬೇಕಿದೆ. ಅಮೆರಿಕ ಐಎಂಎಫ್ ಮೇಲೆ ಪ್ರಭಾವ ಬೀರಿ ಪಾಕಿಸ್ತಾನಕ್ಕೆ ಈ ಹಣದ ನೆರವು ತಪ್ಪಿಸಬಹುದು. ಹಾಗೆಯೇ, ಭವಿಷ್ಯದಲ್ಲಿ ಐಎಂಎಫ್, ವರ್ಲ್ಡ್ ಬ್ಯಾಂಕ್ ಇತ್ಯಾದಿ ಹಣಕಾಸು ಸಂಸ್ಥೆಗಳಿಂದ ಪಾಕಿಸ್ತಾನಕ್ಕೆ ಹಣಕಾಸು ನೆರವು ಬರದಂತೆ ಬ್ಲ್ಯಾಕ್ಲಿಸ್ಟ್ನಲ್ಲಿಡುವ ಸಾಧ್ಯತೆ ಇದೆ.

ಜಿಬಿ ಭಾರತದಲ್ಲಿದ್ದರೆ...
ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶ ಭಾರತದ ಆಢಳಿತದಲ್ಲಿ ಇದ್ದಿದ್ದರೆ, ಮತ್ತು ಬಲೂಚಿಸ್ತಾನ್ ಸ್ವತಂತ್ರ ದೇಶವಾಗಿದ್ದರೆ ಅಮೆರಿಕಕ್ಕೆ ಅನುಕೂಲವಾಗುತ್ತಿತ್ತು ಎಂದು ಅಮೆರಿಕದ ರೋಡ್ ಐಲೆಂಡ್ನ ಸಂಸದ ಬಾಬ್ ಲ್ಯಾನ್ಷಿಯಾ ಅಭಿಪ್ರಾಯಪಟ್ಟಿದ್ದಾರೆ.
"ಗಿಲ್ಗಿಟ್ ಬಾಲ್ಟಿಸ್ತಾನ್ ಭಾರತದ ನಿಯಂತ್ರಣದಲ್ಲಿದ್ದರೆ ಚೀನಾಗೆ ತೊಂದರೆಯಾಗುತ್ತಿತ್ತು. ಚೀನಾದ ಬಿಆರ್ಐ (ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್) ಯೋಜನೆಯೂ ಕಷ್ಟವಾಗುತ್ತಿತ್ತು. ಅರೇಬಿಯನ್ ಸಮುದ್ರದ ಬಂದರುಗಳನ್ನು ಚೀನಾ ನೇರವಾಗಿ ಪ್ರವೇಶಿಸಲು ಆಗುತ್ತಿರಲಿಲ್ಲ" ಎಂದು ಲಾನ್ಷಿಯಾ ಹೇಳಿದ್ದಾರೆ.
ಹಾಗೆಯೇ, ಬಲೂಚಿಸ್ತಾನ್ ಸ್ವತಂತ್ರವಾಗಿದ್ದರೆ ಅಮೆರಿಕದ ಸೇನೆ ಪಾಕಿಸ್ತಾನದ ಮೇಲೆ ಅವಲಂಬಿತವಾಗುವ ಬದಲು ನೇರವಾಗಿ ಅಫ್ಘಾನಿಸ್ತಾನಕ್ಕೆ ಸೇನಾ ಪಡೆಗಳನ್ನು ಕಳುಹಿಸಬಹುದಾಗಿತ್ತು ಎಂದೂ ಲಾನ್ಷಿಯಾ ಅಭಿಪ್ರಾಯಪಟ್ಟಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications