ಕಾಮಲ್ ವೆಲ್ತ್ ನಲ್ಲಿ ಕೆಣಕಿದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
ನವದೆಹಲಿ, ಅಕ್ಟೋಬರ್.14: ಕಾಮನ್ ವೆಲ್ತ್ ವಿದೇಶಾಂಗ ವ್ಯವಹಾರಗಳ ಸಚಿವರ 20ನೇ ಸಭೆಯಲ್ಲಿ ಅತಿಯಾಗಿ ವರ್ತಿಸಿದ ಪಾಕಿಸ್ತಾನಕ್ಕೆ ಭಾರತವು ಬಿಸಿ ಮುಟ್ಟಿಸಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಬದಲಿಗೆ ಎಂಇಎ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದಕ್ಷಿಣ ಏಷ್ಯಾದ ದೇಶವು ಕಾಮನ್ ವೆಲ್ತ್ ವೇದಿಕೆಯನ್ನು "ತನ್ನದೇ ಆದ ಧರ್ಮಾಂಧ, ಕೆಟ್ಟ ಕಲ್ಪನೆ, ಕಿರಿದಾದ ಮತ್ತು ಏಕಪಕ್ಷೀಯ ಕಾರ್ಯಸೂಚಿಯನ್ನು ಅನುಸರಿಸಲು" ಆಯ್ಕೆ ಮಾಡಿರುವುದು ದುರದೃಷ್ಟಕರ ಎನ್ನುವ ಮೂಲಕ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ ದಿನ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಎಸ್.ಎಂ.ಖುರೇಶಿ "ದಕ್ಷಿಣ ಏಷ್ಯಾದ ಒಂದು ದೇಶವು ಸಮುದಾಯ ಗುಂಪುಗಳ ನಡುವೆ ವಿಭಜನೆ ಮತ್ತು ದ್ವೇಷವನ್ನು ಬೆಳೆಸಲು ಹೊರಟಿದೆ. ಅದಕ್ಕಾಗಿ ತನ್ನ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆ" ಎಂದು ಆರೋಪಿಸಿದ್ದರು.

ಪಾಕಿಸ್ತಾನ್ ವಿದೇಶಾಂಗ ಸಚಿವರ ಆರೋಪ:
ಭಾರತದ ಹೆಸರನ್ನು ಉಲ್ಲೇಖಿಸದೇ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ, ದಕ್ಷಿಣ ಏಷ್ಯಾದ ರಾಷ್ಟ್ರವು "ಲಕ್ಷಾಂತರ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ವಿವಾದಿತ ಭೂಪ್ರದೇಶದಲ್ಲಿ ಅಕ್ರಮ ಜನಸಂಖ್ಯಾ ಬದಲಾವಣೆಗೆ ಹೈಪರ್-ನ್ಯಾಷನಲಿಸಂ ಅನ್ನು ಉತ್ತೇಜಿಸಲಾಗಿದೆ ಮತ್ತು ಜನಾಂಗೀಯ ಉದ್ವಿಗ್ನತೆ ಬೀಜ ಬಿತ್ತಿದೆ ಎಂದು ಖುರೇಷಿ ದೂಷಿಸಿದ್ದಾರೆ.
"ಉಗ್ರರ ಜನ್ಮಸ್ಥಾನವಾಗಿರುವ ದೇಶದಿಂದ ಎಂಥಾ ಮಾತು?":
ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಖುರೇಶಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಎಂಇಎ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ತಿರುಗೇಟು ನೀಡಿದ್ದಾರೆ. ದಕ್ಷಿಣ ಏಷ್ಯಾದ ದೇಶವೊಂದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದನ್ನು ಕೇಳಿದಾಗ, ಅದು ಏಕೆ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಅಚ್ಚರಿ ಎಂದರೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ಪ್ರಾಯೋಜಿತ ರಾಷ್ಟ್ರ ಎಂದು ಅಂಗೀಕರಿಸಲ್ಪಟ್ಟವರ ಪ್ರತಿನಿಧಿಯೊಬ್ಬರು ಹೀಗೆ ಮಾತನಾಡುವುದೇ ಎಂದು ಪ್ರಶ್ನೆ ಮಾಡಿದ್ದಾರೆ. 49 ವರ್ಷಗಳ ಹಿಂದೆ ದಕ್ಷಿಣ ಏಷ್ಯಾಕ್ಕೆ ತನ್ನದೇ ಜನರನ್ನು ಕೊಂದಾಗ ನರಮೇಧವನ್ನು ತಂದ ದೇಶದಿಂದ ನಾವು ಇಂದು ಇಂಥ ಮಾತುಗಳನ್ನು ಕೇಳುವಂತಾಗಿದೆ" ಎಂದು ತಿರುಗೇಟು ಕೊಟ್ಟಿದ್ದಾರೆ.
"ಭಯೋತ್ಪಾದನೆಯ ಕೇಂದ್ರಬಿಂದು" ಎಂದು ಕರೆಸಿಕೊಂಡಿರುವ ಮತ್ತು ವಿಶ್ವಸಂಸ್ಥೆಯಿಂದ ನಿಷೇಧಿಸಿರುವ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರಿಗೆ ಆತಿಥ್ಯ ವಹಿಸುವ ಸಂಶಯಾಸ್ಪದ ದೇಶವದು ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.












Click it and Unblock the Notifications