ರಾಜನಾಥ್ ಸಿಂಗ್ ಪಾಕಿಸ್ತಾನ ಭೇಟಿಯ ವೇಳೆ ನಡೆದಿದ್ದು ಏನು?
ಇಸ್ಲಾಮಾಬಾದ್, ನವದೆಹಲಿ, ಆಗಸ್ಟ್ 4: ಎರಡು ದಿನಗಳ ಸಾರ್ಕ್ ಗೃಹ ಸಚಿವರ ಶೃಂಗಸಭೆಯಲ್ಲಿ ಭಾಗವಹಿಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ (ಆ 4) ನವದೆಹಲಿಗೆ ಹಿಂದಿರುಗಿದ್ದಾರೆ.
ಸಭೆಯಲ್ಲಿ ರಾಜನಾಥ್ ಸಿಂಗ್ ಭಾಷಣವನ್ನು ಪ್ರಸಾರ ಮಾಡದಂತೆ ಪಾಕಿಸ್ತಾನ ಎಲ್ಲಾ ಮಾಧ್ಯಮಗಳನ್ನು ಬ್ಲಾಕ್ ಔಟ್ ಮಾಡಿದ್ದು ಈಗ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ಸರಕಾರದ ಒಡೆತನದ ಪಿಟಿವಿ ಹೊರತು ಪಡಿಸಿ ಎಲ್ಲಾ ವಾಹಿನಿಗಳನ್ನು ಸಭೆಯಿಂದ ದೂರವಿರಿಸಲಾಗಿತ್ತು. (ಗೃಹ ಸಚಿವರು ಪಾಕಿಸ್ತಾನಕ್ಕೆ ಕಾಲಿಡದಂತೆ ಎಚ್ಚರಿಕೆ)
ಗುರುವಾರ ಬೆಳಗ್ಗೆ ರಾಜನಾಥ್ ಸಿಂಗ್ ಭಾಷಣವನ್ನು ಚಿತ್ರೀಕರಿಸದಂತೆ ಭಾರತದ ಮತ್ತು ಪಾಕಿಸ್ತಾನದ ಖಾಸಗಿ ವಾಹಿನಿಗಳಿಗೆ ಪಾಕ್ ಸರಕಾರ ನಿರ್ದೇಶನ ನೀಡಿ ಉದ್ದಟತನ ಮೆರೆದಿತ್ತು.
ಆದರೆ, ಗೃಹ ಸಚಿವರ ಭಾಷಣವನ್ನು ಬ್ಲಾಕ್ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತ ಸರಕಾರ ತಳ್ಳಿಹಾಕಿದೆ. ಗೃಹ ಸಚಿವರ ಭಾಷಣ ಪ್ರಸಾರ ಮಾಡಲು ಪಾಕ್ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಸಾರ್ಕ್ ಸಭೆ ಮುಕ್ತಾಯಗೊಂಡ ನಂತರ ಪಾಕ್ ಗೃಹ ಸಚಿವಾಲಯ ಆಯೋಜಿಸಿದ್ದ ಭೋಜನ ಕೂಟದಲ್ಲಿ ರಾಜನಾಥ್ ಸಿಂಗ್ ಭಾಗವಹಿಸದೇ ದೆಹಲಿಗೆ ವಾಪಸ್ ಆಗಿದ್ದಾರೆ.
ಪಾಕ್ ನೆಲದಲ್ಲಿ ನಿಂತು, ರಾಜನಾಥ್ ಸಿಂಗ್ ಭಯೋತ್ಪಾದನೆಯ ವಿರುದ್ದ ಉಗ್ರ ಭಾಷಣ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕಾಶ್ಮೀರ ಹಿಂಸಾಚಾರ
ಬುರ್ಹಾನ್ ವಾನಿ ಎನ್ಕೌಂಟರ್ ನಂತರ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಸಭೆಯಲ್ಲಿ ಉಲ್ಲೇಖಿಸುವ ಸಾಧ್ಯತೆಯಿರುವುದರಿಂದ, ಪಾಕ್ ಸರಕಾರ ಉದ್ದೇಶಪೂರ್ವಕವಾಗಿ ರಾಜನಾಥ್ ಭಾಷಣವನ್ನು ಚಿತ್ರೀಕರಿಸದಂತೆ ಸೂಚಿಸಿತ್ತು ಎನ್ನಲಾಗುತ್ತಿದೆ.

ಭೋಜನ ಕೂಟದಲ್ಲೂ ರಾಜನಾಥ್ ಭಾಗವಹಿಸಲಿಲ್ಲ
ಪಾಕಿಸ್ತಾನದ ಗೃಹ ಸಚಿವ ನಿಸಾರ್ ಅಲಿ ಖಾನ್ ಚೌಧರಿ ಆಯೋಜಿಸಿದ್ದ ಭೋಜನಕೂಟದಲ್ಲಿ ರಾಜನಾಥ್ ಸಿಂಗ್ ಭಾಗವಹಿಸದೇ ದೆಹಲಿಗೆ ವಾಪಸ್ ಆಗಿದ್ದಾರೆ. ಇದಲ್ಲದೇ ದೆಹಲಿ ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಯನ್ನು ಸಹ ರದ್ದುಗೊಳಿಸಲಾಗಿದೆ.

ರಾಜನಾಥ್ ಸಿಂಗ್ ಭಾಷಣ
ಸಾರ್ಕ್ ಸಭೆಯಲ್ಲಿ ಭಯೋತ್ಪಾದನೆಯ ವಿರುದ್ದ ರಾಜನಾಥ್ ಸಿಂಗ್ ಕಟುವಾಗಿ ಟೀಕಿಸಿದ್ದಾರೆ. ಉಗ್ರರು "ಉಗ್ರರೇ" ಅವರು "ಮಹಾತ್ಮ"ರಾಗಲು ಸಾಧ್ಯವಿಲ್ಲ. ಉಗ್ರರಿಗೆ ಬೆಂಬಲ ನೀಡುವವರು ಯಾರೇ ಇರಲಿ ಅವರನ್ನು ರಕ್ಷಿಸುವ ಕೆಲಸವನ್ನು ಯಾವುದೇ ದೇಶ ಮಾಡಬಾರದೆಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರಿಯಾಗಿ ಗೌರವ ಸಿಗಲಿಲ್ಲವೇ
ಇದೇ ಮೊದಲ ಬಾರಿಗೆ ರಾಜನಾಥ್ ಮತ್ತು ಪಾಕ್ ಗೃಹ ಸಚಿವ ನಿಸಾರ್ ಖಾನ್ ಭೇಟಿಯಾದರೂ, ಸರಿಯಾದ ಗೌರವ ರಾಜನಾಥ್ ಸಿಂಗ್ ಅವರಿಗೆ ಸಿಗಲಿಲ್ಲ ಎನ್ನುವ ಮಾಹಿತಿಯಿದೆ. ಸಿಂಗ್ ಅವರನ್ನು ಸ್ವಾಗತಿಸಲು ಬಂದಿದ್ದ ಪಾಕ್ ಗೃಹ ಸಚಿವರು ಕಾಟಾಚಾರಕ್ಕೆ ಹ್ಯಾಂಡ್ ಶೇಕ್ ಮಾಡಿ ಸಭಾಂಗಣಕ್ಕೆ ತೆರಳಿದರು ಎನ್ನಲಾಗುತ್ತಿದೆ.

ಬುರ್ಹಾನ್ ವಾನಿ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಕೆಲವರು ಘೋಷಿಸುತ್ತಿದ್ದಾರೆ. ಭಯೋತ್ಪಾದಕರನ್ನು ಹುತಾತ್ಮ ಎಂದು ವೈಭವೀಕರಿಸುವುದು ಶಾಂತಿ ಬಯಸುವ ಯಾವುದೇ ದೇಶಕ್ಕೆ ಒಳ್ಳೆಯದಲ್ಲ ಎಂದು ರಾಜನಾಥ್ ಸಿಂಗ್ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಅಲ್ಲಿ ನೆಲೆಸಿರುವ ಉಗ್ರ ಸಂಘಟನೆಯ ಮುಖಂಡರಿಗೆ ಸಭೆಯಲ್ಲಿ ಸಂದೇಶ ರವಾನಿಸಿದ್ದಾರೆ.












Click it and Unblock the Notifications