ಸೌದಿ : ನಿತಾಕತ್ ಉಲ್ಲಂಘಿಸಿದರೆ 17 ಲಕ್ಷ ದಂಡ
ನಿತಾಕತ್ ನಿಯಮವನ್ನು ನ.3ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲು ಸೌದಿ ಸರ್ಕಾರ ಅಗತ್ಯ ಸಿದ್ಧತೆ ಪ್ರಾರಂಭಿಸಿದೆ. ನ.3ರ ನಂತರ ನಿತಾಕತ್ ನಿಯಮ ಉಲ್ಲಂಘಿಸಿದರೆ, ವಿದೇಶಿಯರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸೌದಿ ಸರ್ಕಾರ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘಿಸಿದವರನ್ನು ಸೆರೆ ಹಿಡಿಯಲು ಸರ್ಕಾರ ಕಾರ್ಮಿಕ ಇಲಾಖೆಗೆ ವಿಶೇಷ ಅಧಿಕಾರಗಳನ್ನು ನೀಡಿದೆ.
ನಿತಾಕತ್ ಕಾನೂನಿನ ಪ್ರಕಾರ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಮತ್ತು ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡಿರುವ ವಿದೇಶಿಯ ವೀಸಾ , ನೌಕರಿ ಮತ್ತಿತರ ದಾಖಲೆ ಪತ್ರಗಳು ಸಮರ್ಪಕವಾಗಿರಬೇಕು. ದಾಖಲೆಪತ್ರಗಳಲ್ಲಿ ಯಾವುದೇ ರೀತಿಯ ಲೋಪದೋಷಗಳು ಅಥವ ಫೋರ್ಜರಿ ಪತ್ತೆಯಾದರೆ ನಿತಾಕತ್ ಉಲ್ಲಂಘನೆ ಅನ್ವಯ ಜೈಲು ಮತ್ತು 17 ಲಕ್ಷ ದಂಡ ಪಾವತಿ ಮಾಡಬೇಕಾಗುತ್ತದೆ.
ಭಾರತೀಯರು ಆತಂಕದಲ್ಲಿ : ಸುಮಾರು 12 ಲಕ್ಷ ಭಾರತೀಯರು ತಮ್ಮ ನೌಕರಿ, ಮುಂತಾದ ದಾಖಲೆಗಳನ್ನು ಸಮರ್ಪಕಗೊಳಿಸುವಂತೆ ಸೌದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಹಮೀದ್ ಅಲಿ ರಾವ್ ಪ್ರಕಾರ 3.55 ಲಕ್ಷ ಭಾರತೀಯರ ದಾಖಲೆಗಳು ಸಮರ್ಪಕವಾಗಿವೆ.
77 ಸಾವಿರ ಭಾರತೀಯರಿಗೆ ಸೌದಿ ಅರೇಬಿಯಾ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಇವರಲ್ಲಿ ಶೇ 95ರಷ್ಟು ಜನರಿಗೆ ಸೌದಿ ಸರ್ಕಾರ ವೀಸಾ ನೀಡಿ ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸಿದೆ. ನ.3ರೊಳಗೆ ಇವರು ಸೌದಿ ತೊರೆದು ಭಾರತಕ್ಕೆ ಮರಳಲಿದ್ದಾರೆ.
ಅಕ್ರಮವಾಗಿ ವಾಸವಾಗಿರುವ ಅನೇಕ ಭಾರತೀಯರನ್ನು ಸೌದಿಯ ಕಂಪನಿಗಳು ನೌಕರಿಯಿಂದ ವಜಾಗೊಳಿಸುತ್ತಿದ್ದಾರೆ. ಸೌದಿಯಲ್ಲಿರುವ ಭಾರತೀಯರ ಅನೇಕ ಸಂಘ ಸಂಸ್ಥೆಗಳು ತವರಿಗೆ ಮರಳುವವರನ್ನು ಸುರಕ್ಷಿತವಾಗಿ ದೇಶಕ್ಕೆ ಕಳುಹಿಸಲು ಪ್ರಯತ್ನ ನಡೆಸಿವೆ.
ನಿತಾಕತ್ ಎಂದರೇನು : ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯನ್ನು ನಿತಾಕತ್ ಎನ್ನುತ್ತಾರೆ. ಇದರ ಪ್ರಕಾರ, ಕಂಪನಿಗಳು 10 ಮಂದಿ ಹೊರದೇಶದವರ ಜೊತೆ ಒಬ್ಬರು ಸ್ಥಳೀಯ ಕೆಲಸಗಾರನಿಗೆ ಉದ್ಯೋಗ ನೀಡಬೇಕು. ಈ ನೀತಿ ಜಾರಿಗೆ ಬಂದ ನಂತರ ಸಹಸ್ರಾರು ವಿದೇಶಿಯರು ಸೌದಿಯಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ.