ಪವಾಡ : ಕಠ್ಮಂಡುವಿನಲ್ಲಿ ನಾಲ್ಕು ತಿಂಗಳ ಮಗುವಿನ ರಕ್ಷಣೆ
ಕಠ್ಮಂಡು, ಏ. 30 : ಭೂಮಿಯ ಮೇಲೆ ಸರ್ವನಾಶಗಳೂ ಸಂಭವಿಸುತ್ತವೆ, ಪವಾಡಗಳೂ ಸಂಭವಿಸುತ್ತವೆ ಎನ್ನುವುದಕ್ಕೆ ಮೈನವಿರೇಳಿಸುವಂಥ ಈ ಘಟನೆಯೇ ಸಾಕ್ಷಿ. ನೇಪಾಳದ ಭೀಕರ ಭೂಕಂಪದಲ್ಲಿ ಎಷ್ಟೋ ಜನ ಮಣ್ಣಾಗಿದ್ದಾರೆ, ಎಷ್ಟೋ ಜನರನ್ನು ರಕ್ಷಿಸಲಾಗಿದೆ. ಆದರೆ, ಬಟ್ಟೆಯಲ್ಲಿ ಸುತ್ತಿದ್ದ, ಕುಂಚಿಗೆ ಕಟ್ಟಿಕೊಂಡಿದ್ದ ನಾಲ್ಕು ತಿಂಗಳ ಈ ಮಗುವನ್ನು ರಕ್ಷಿಸಿದ ಪರಿಯಿದೆಯಲ್ಲ... ಅಬ್ಬಾ!
ಶನಿವಾರ, ಏ.25ರಂದು ಭೂಮಿ ಗಡಗಡ ನಡುಗಿ ಸಹಸ್ರಾರು ಕಟ್ಟಡಗಳನ್ನು ನೆಲಸಮ ಮಾಡಿತು. ಕಟ್ಟಡವೊಂದರ ಅಡಿಯಲ್ಲಿ ಈ ಪುಟಾಣಿ ಸೋನಿತ್ ಅವಾಲ್ ಸಿಲುಕಿಕೊಂಡಿತ್ತು. ಅಪ್ಪನ ಆರ್ತನಾದ ಕೇಳಿ ನೇಪಾಳೀಸ್ ಆರ್ಮಿ ಶನಿವಾರವೇ ರಕ್ಷಣಾ ಕಾರ್ಯಾರಣೆಗಿಳಿದಿದ್ದರು. ಶನಿವಾರ ಮಧ್ಯರಾತ್ರಿಯವರೆಗೆ ಎಷ್ಟೇ ಸಾಹಸ ಮಾಡಿದರೂ ಮಗುವನ್ನು ಕಾಪಾಡಲು ಸಾಧ್ಯವಾಗಿರಲೇ ಇಲ್ಲ. [ನೇಪಾಳದಲ್ಲಿ ಉಳಿದಿರುವುದು ಬರೀ ಅವಶೇಷಗಳೇ!]
ಮಗುವನ್ನು ರಕ್ಷಿಸುವ ಆಶೆ ಬಿಟ್ಟು ಯೋಧರು ತೆರಳಿದ್ದರು. ಅಪ್ಪ ಶ್ಯಾಮ್ ಅವಾಲ್, ತನ್ನ ಮಗುವನ್ನು ಬದುಕಿಸಲಾಗಲಿಲ್ಲವಲ್ಲ ಎಂದು ಇಡೀ ರಾತ್ರಿ ಕಣ್ಣೀರುಗರೆಯುತ್ತ ಕುಳಿತಿದ್ದ, ಮಗುವನ್ನು ಪಾರು ಮಾಡಪ್ಪಾ ಎಂದು ಪಶುಪತಿನಾಥನನ್ನು ಪ್ರಾರ್ಥಿಸುತ್ತಿದ್ದ. ಭಾನುವಾರ ಸೂರ್ಯ ಬೆಳಗಿದನಲ್ಲ. ಅಚ್ಚರಿಯೆಂಬಂತೆ, ಮಗುವಿನ ಅಳುವಿನ ಕೀರುದನಿ ಅಪ್ಪನ ಕಿವಿಗೆ ಬಿದ್ದಿದೆ. ಕೂಡಲೆ ಕಾರ್ಯತತ್ಪರನಾದ ಅಪ್ಪ ನೇಪಾಳೀಸ್ ಆರ್ಮಿಗೆ ತಿಳಿಸಿದ್ದಾರೆ.
ಯೋಧರು ಹರಸಾಹಸಪಟ್ಟು, ಭಾರವಾದ ಜಂತಿಗಳ ಕೆಳಗೆ ಸಿಲುಕಿಕೊಂಡಿದ್ದ, ಮಣ್ಣಿನ ಮುಸುಕು ಹೊದ್ದಿದ್ದ ಸೋನಿತ್ ಅವಾಲ್ ನನ್ನು ರಕ್ಷಿಸಿದ್ದಾರೆ. ಮಗು ಬದುಕಿರುವುದು ತಿಳಿಯುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತು. ಸೋನಿತ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಿರಾಕಲ್ ಬೇಬಿ ಚೇತರಿಸಿಕೊಳ್ಳುತ್ತಿದೆ ಎಂದು ಕಠ್ಮಂಡು ಟುಡೆ ವೆಬ್ ಸೈಟ್ ವರದಿ ಮಾಡಿದೆ. [ಭೂಕಂಪದ ಮನಕಲಕುವ ಚಿತ್ರಗಳು]
ನೇಪಾಳದ ಪ್ರಧಾನಿ ಕೊಟ್ಟ ಲೆಕ್ಕದಂತೆ ಭೂಕಂಪದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಸಾಗುತ್ತಲೇ ಇದ್ದು, ಬುಧವಾರ ತಾನೆ ಮೂರು ದಿನಗಳಿಂದ ಅವಶೇಷದಡಿ ಸಿಲುಕಿ, ಮೂತ್ರ ಕುಡಿಯುತ್ತ ಜೀವ ಹಿಡಿದುಕೊಂಡಿದ್ದ ಯುವಕನನ್ನು ರಕ್ಷಿಸಲಾಗಿದೆ.