ಢಾಕಾ ಕೆಫೆ ದಾಳಿ 'ಮಾಸ್ಟರ್ ಮೈಂಡ್' ಮರ್ಜನ್ ಬಲಿ
ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೆಫೆಯೊಂದರ ಮೇಲೆ ದಾಳಿ ನಡೆಸಿ 29 ಮಂದಿ ಸಾವಿಗೆ ಕಾರಣನಾಗಿದ್ದ ಉಗ್ರನನ್ನು ಶುಕ್ರವಾರ ಬೆಳಗ್ಗೆ ಬಲಿ ಹಾಕಲಾಗಿದೆ.
ಢಾಕಾ, ಜನವರಿ 06: ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೆಫೆಯೊಂದರ ಮೇಲೆ ದಾಳಿ ನಡೆಸಿ 29 ಮಂದಿ ಸಾವಿಗೆ ಕಾರಣನಾಗಿದ್ದ ಉಗ್ರನನ್ನು ಶುಕ್ರವಾರ ಬೆಳಗ್ಗೆ ಬಲಿ ಹಾಕಲಾಗಿದೆ.
ಢಾಕಾದ ಮೊಹಮ್ಮದ್ಪುರ್ ಬೇರಿಬಂದ್ ಪ್ರದೇಶದಲ್ಲಿ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಮಾತ್ ಉಲ್ ಮುಜಾಹಿದೀನ್ ಸಂಘಟನೆಯ ನುರುಲ್ ಇಸ್ಲಾಮ್ ಅಲಿಯಾಸ್ ಮರ್ಜನ್ ಹತ್ಯೆ ಮಾಡಲಾಗಿದೆ. ಮರ್ಜನ್ ಜತೆಗೆ ಮತ್ತೊಬ್ಬ ಉಗ್ರ ಕೂಡಾ ಮೃತಪಟ್ಟಿದ್ದಾನೆ ಎಂದು ಭಯೋತ್ಪಾದಕ ನಿಗ್ರಹದ ದಳದ ಮುಖ್ಯಸ್ಥ ಮೋನಿರುಲ್ ಇಸ್ಲಾಮ್ ಹೇಳಿದ್ದಾರೆ.

2016ರ ಜುಲೈ 1 ರಂದು ಢಾಕಾದ ಗುಲ್ಶನ್ ಹೋಲಿ ಆರ್ಟಿಸಾನ್ ಬೇಕರಿ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತೀಯ ಯುವತಿ ಸೇರಿದಂತೆ 29 ಜನರು ಮೃತಪಟ್ಟಿದ್ದರು. ಐವರು ಈ ರೆಸ್ಟೋರೆಂಟ್ ಗೆ ನುಗ್ಗಿ ಬಾಂಬ್ ಎಸೆದು, ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿದ್ದ ಹಲವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.
#FLASH: Mastermind' of Bangladesh cafe siege killed in raid: police (AFP)
— ANI (@ANI_news) January 6, 2017
22 ಮಂದಿ ನಾಗರಿಕರು, ಐವರು ಗನ್ ಮ್ಯಾನ್ ಹಾಗೂ 2 ಪೊಲೀಸ್ ಸಿಬ್ಬಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು, 50 ಮಂದಿ ಗಾಯಗೊಂಡಿದ್ದರು. ಈ ಕೆಫೆ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. ಆದರೆ, ಬಾಂಗ್ಲಾದೇಶ ಪೊಲೀಸರು ಇದು ಜಮಾತ್ ಉಲ್ ಮುಜಾಹೀದ್ದೀನ್ ಕೃತ್ಯ ಎಂದು ವಾದಿಸಿದ್ದರು. (ಒನ್ಇಂಡಿಯಾ ಸುದ್ದಿ)











Click it and Unblock the Notifications