ಮೇಲ್ಮನವಿ ಸಲ್ಲಿಸಲು ಕುಲಭೂಷಣ್ ಜಾಧವ್ಗೆ ಅವಕಾಶ: ಕಾಯ್ದೆಗೆ ಪಾಕಿಸ್ತಾನ ತಿದ್ದುಪಡಿ
ಇಸ್ಲಾಮಾಬಾದ್, ನವೆಂಬರ್ 13: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಸಿವಿಲಿಯನ್ ನ್ಯಾಯಾಲಯದಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಪಾಕಿಸ್ತಾನವು ತನ್ನ ಸೇನಾ ಕಾಯ್ದೆಗೆ ತಿದ್ದುಪಡಿ ತರಲಿದೆ.
ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಸೇನಾ ನ್ಯಾಯಾಲಯವು ವಿಚಾರಣೆಗೊಳಪಡಿಸಿ ಸೇನಾ ಕಾಯ್ದೆಯಡಿ ಗಲ್ಲುಶಿಕ್ಷೆ ವಿಧಿಸಿತ್ತು. ಅದರ ವಿರುದ್ಧ ಮನವಿ ಸಲ್ಲಿಸಲು ಪ್ರಸ್ತುತದ ಕಾನೂನಿನಲ್ಲಿ ಅವಕಾಶವಿಲ್ಲ.
ಕುಲಭೂಷಣ್ ಜಾಧವ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿದ್ದ ಆದೇಶವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಕುಲಭೂಷಣ್ ಜಾಧವ್ ಅವರಿಗೆ ಕೌನ್ಸೆಲರ್ ಭೇಟಿಯ ಅವಕಾಶ ಕಲ್ಪಿಸಬೇಕು ಮತ್ತು ಅವರ ಗಲ್ಲುಶಿಕ್ಷೆಯನ್ನು ಪರಾಮರ್ಶಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಧವ್ ಅವರಿಗೆ ಮೇಲ್ಮನವಿ ಅವಕಾಶ ಕಲ್ಪಿಸಲು ಪಾಕಿಸ್ತಾನ ಮುಂದಾಗಿದೆ.

'ಕುಲಭೂಷಣ್ ಜಾಧವ್ ಅವರಿಗೆ ತಮ್ಮ ಶಿಕ್ಷೆಯನ್ನು ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ಸೂಚನೆಯಂತೆ ಪಾಕಿಸ್ತಾನ ತನ್ನ ಸೇನಾ ಕಾಯ್ದೆಗೆ ತಿದ್ದುಪಡಿ ತರಲಿದೆ. ಈ ಪ್ರಕರಣವು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ಯಾವುದೇ ವ್ಯಕ್ತಿ ಅಥವಾ ಗುಂಪು ಸಿವಿಲ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮತ್ತು ನ್ಯಾಯ ಕೋರುವುದನ್ನು ಸೇನಾ ಕಾಯ್ದೆ ಪ್ರತಿಬಂಧಿಸಿತ್ತು. ಆದರೆ ಕುಲಭೂಷಣ್ ಜಾಧವ್ಗಾಗಿ ವಿಶೇಷ ತಿದ್ದುಪಡಿ ಮಾಡಲಾಗುತ್ತಿದೆ' ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications