ಹಮಾಸ್ ರೀತಿಯಲ್ಲಿ ಭಾರತದ ಮೇಲೆ ದಾಳಿ ಮಾಡುತ್ತೇವೆ: ಹುಚ್ಚಾಟ ಮೆರೆದ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ
ನವದೆಹಲಿ, ಅಕ್ಟೋಬರ್ 10: ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಎಂಬ ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಗುರುಪತ್ವಂತ್ ಪನ್ನುನ್ ಮತ್ತೆ ಹುಚ್ಚಾಟ ಮೆರೆದಿದ್ದಾನೆ. ಹಮಾಸ್ ರೀತಿಯಲ್ಲೇ ಭಾರತದ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಇತ್ತೀಚಿನ ವಿಡಿಯೊದಲ್ಲಿ ಈತನ ಹೇಳಿಕೆಗಳು ಬಹಿರಂಗಗೊಂಡಿವೆ. ಈ ವಿಡಿಯೊದಲ್ಲಿ ಪನ್ನುನ್ ಭಾರತಕ್ಕೆ ಬೆದರಿಕೆ ಹಾಕುವುದನ್ನು ಕಾಣಬಹುದಾಗಿದೆ.

ಪ್ರಧಾನಿ ಮೋದಿ ಪ್ಯಾಲೆಸ್ತೀನ್- ಇಸ್ರೇಲ್ ಸಂಘರ್ಷದಿಂದ ಕಲಿಯುವುದು ಬಹಳಷ್ಟಿದೆ. ಪಂಜಾಬ್ನಿಂದ ಹಿಡಿದು ಪ್ಯಾಲೆಸ್ತೀನ್ವರೆಗೆ ಆಕ್ರಮಣದಲ್ಲಿರುವ ಜನರು ಪ್ರತಿಕ್ರಿಯಿಸುತ್ತಾರೆ. ಹಿಂಸಾಚಾರವು ಹಿಂಸಾಚಾರವನ್ನೇ ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.
ಭಾರತವು ಪಂಜಾಬ್ ಅನ್ನು ಆಕ್ರಮಿಸಿಕೊಳ್ಳಲು ಹೋದರೆ, ಪ್ರತಿಕ್ರಿಯೆಯೂ ಹಮಾಸ್ನಂತೆ ಇರಲಿದೆ ಎಂದು ಬೆದರಿಕೆಯೊಡ್ಡಿದ್ದಾನೆ.
ಮೋದಿ ಮತ್ತು ಭಾರತ ಇದಕ್ಕೆ ಜವಾಬ್ದಾರರಾಗಿರುತ್ತೀರಿ. ನಮಗೆ ಮತದಾನದಲ್ಲಿ ನಂಬಿಕೆ ಇದೆ. ನಾವು ಮತವನ್ನು ನಂಬುತ್ತೇವೆ. ಆದರೆ, ಪಂಜಾಬ್ನ ವಿಮೋಚನೆಯು ನಮ್ಮ ಗುರಿಯಾಗಿದೆ. ಭಾರತೀಯರೇ ಆಯ್ಕೆ ನಿಮ್ಮದಾಗಿದೆ. ನಿಮಗೆ ಬ್ಯಾಲೆಟ್ ಬೇಕಾ ಅಥವಾ ಬುಲೆಟ್ ಬೇಕಾ ಎಂದು ಆತ ವಿಡಿಯೊದಲ್ಲಿ ಕೇಳುತ್ತಿರುವುದು ಕಂಡುಬರುತ್ತದೆ.
ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಈತನ ಪಾತ್ರ ಕಂಡುಬಂದಿದೆ. ಭಯೋತ್ಪಾನೆಯನ್ನು ಬಿತ್ತುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಭಾರತದ ಭಯೋತ್ಪಾದನಾ ನಿಗ್ರಹ ಸಂಸ್ಥೆ 2019 ರಲ್ಲಿ ಈತನ ವಿರುದ್ಧ ಮೊದಲ ಪ್ರಕರಣವನ್ನು ದಾಖಲಿಸಿದೆ.
ಪನ್ನೂನ್ ಪಂಜಾಬ್ ಮತ್ತು ದೇಶದ ಇತರೆಡೆಗಳಲ್ಲಿ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂಬ ಗಂಭೀರ ಆರೋಪಗಳಿವೆ.
ಭಾರತದಲ್ಲಿ ಪ್ರಾರಂಭವಾಗಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಮೇಲೆ ದಾಳಿ ನಡೆಸುವುದಾಗಿ ಈತ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ವಿಶ್ವಕಪ್ ಪ್ರಾರಂಭವಾಗುವುದಕ್ಕೂ ಮೊದಲು, ರಾಷ್ಟ್ರ ರಾಜಧಾನಿಯಲ್ಲಿ ಖಲಿಸ್ತಾನ್ ಪರ ಗೋಡೆಬರಹ ಕಾಣಿಸಿಕೊಂಡಿದೆ. ಆ ನಂತರ ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಾಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ ನಂತರ ಎರಡೂ ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಸಂಘರ್ಷದಲ್ಲಿ ಗುರುಪತ್ವಂತ್ ಪನ್ನೂನ್ ಬೆಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿ ಸಂಘಟನೆ ಭೀಕರ ದಾಳಿ ನಡೆಸಿದೆ.












Click it and Unblock the Notifications