ಜಾಧವ್ ಗಲ್ಲುಶಿಕ್ಷೆ: ಐಸಿಜೆಯಲ್ಲಿ ಪಾಕ್ ವಿರುದ್ಧ ಭಾರತದ ತೀಕ್ಷ್ಣ ವಾದ
ಹೇಗ್, ಫೆಬ್ರವರಿ 18: ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸಿದ ತೀರ್ಪನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಭಾರತ, ಸೋಮವಾರ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ವಾದ ಮಂಡಿಸಿತು.
ನೆದರ್ಲ್ಯಾಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಯಾದವ್ ಪರ ಹರೀಶ್ ಸಾಳ್ವೆ ನೇತೃತ್ವದ ತಂಡ ತನ್ನ ವಾದ ಮತ್ತು ಸಾಕ್ಷ್ಯಗಳನ್ನು ದಾಖಲಿಸಿತು.
ಪಾಕಿಸ್ತಾನವು ತನ್ನ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಳ್ಳಲು ಮಂಗಳವಾರ ವಾದ ಮಂಡಿಸಲಿದೆ. ಹರೀಶ್ ಸಾಳ್ವೆ ಅವರು ಐಸಿಜೆ ಮುಂದಿಟ್ಟ ಸುದೀರ್ಘ ವಾದದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ, ಫೆಬ್ರವರಿಯಲ್ಲಿ ಮತ್ತೆ ವಿಚಾರಣೆ
* ಭಾರತೀಯನ ಜೀವ ಅಪಾಯದಲ್ಲಿರುವುದು ದುರದರಷ್ಟಕರ.
* ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಕುಲಭೂಷಣ್ ಭೇಟಿಗೆ ರಾಜತಾಂತ್ರಿಕರಿಗೆ ಪಾಕಿಸ್ತಾನ ಅವಕಾಶ ನೀಡಿಲ್ಲ. ಹದಿಮೂರು ಬಾರಿ ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿದೆ. ರಾಜತಾಂತ್ರಿಕ ಅನುಮತಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ.
*ಸೇನಾ ನ್ಯಾಯಾಲಯದ ವಿಚಾರಣೆ ಕ್ರಮ ತೃಪ್ತಿಕರವಾಗಿಲ್ಲ. ತನ್ನ ಕಾರ್ಯಸಾಧನೆಗಾಗಿ ಜಾಗತಿಕ ವೇದಿಕೆಯನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ.
* ಪಾಕಿಸ್ತಾನ ಸೇನೆ ಅಪಹರಣ ಮಾಡಿರುವುದಕ್ಕೆ ಭಾರತದ ಬಳಿ ಸಾಕ್ಷ್ಯ ಇದೆ. ಪಾಕಿಸ್ತಾನ ಜಾಧವ್ ಅವರನ್ನು ವಶಕ್ಕೆ ಪಡೆದುಕೊಂಡ ದಿನಾಂಕವನ್ನು ತಿಳಿಸಿಲ್ಲ.
* ಜಾಧವ್ ವಿರುದ್ಧ ತಡವಾಗಿ ಎಫ್ಐಆರ್ ದಾಖಲಿಸಲಾಗಿದೆ. ನಕಲಿ ದಾಖಲೆಗಳ ಮೂಲಕ ಪಾಕಿಸ್ತಾನ ಸುಳ್ಳು ಪ್ರಚಾರ ಮಾಡಿದೆ. ಪಾಕಿಸ್ತಾನವು ಜಾಧವ್ ಅವರ ಪತ್ನಿಯ ಕುರಿತಾದ ವಿವರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಜಾಧವ್ ಅವರ ಗುರುತಿಗಾಗಿ ಭಾರತ ದಾಖಲೆಗಳನ್ನು ಒದಗಿಸಿತ್ತು.
* ಜಾಧವ್ ಬಂಧನ ಕಾನೂನು ವಿರೋಧಿ. ಪಾಕಿಸ್ತಾನದ ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ. ಭಾರತ ಆರೋಪಪಟ್ಟಿಯ ಪ್ರತಿಗಳನ್ನು ಕೇಳಿತ್ತು. ಆದರೆ ಇದುವರೆಗೂ ಜಾಧವ್ ವಿಚಾರಣೆಯ ಯಾವ ದಾಖಲೆಗಳನ್ನೂ ಪಾಕಿಸ್ತಾನ ಒದಗಿಸಿಲ್ಲ. ಸಾಕ್ಷಿಗಳ ವಿಚಾರಣೆಗೆ ಸಹ ಅವಕಾಶ ನೀಡಿಲ್ಲ.
* ಕುಲಭೂಷಣ್ ಜಾಧವ್ಗೆ ತನ್ನ ಹಕ್ಕುಗಳನ್ನು ನೀಡಿಲ್ಲ. ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ.
ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?
* ಬೇಹುಗಾರಿಕೆ ಆರೋಪದಡಿ ಗಲ್ಲುಶಿಕ್ಷೆ ನೀಡಲಾಗಿದೆ. ಆದರೆ, ಪ್ರಕರಣದ ವಿಚಾರಣೆಯನ್ನು ಸೂಕ್ತವಾಗಿ ನಡೆಸಿಲ್ಲ.
* ಗೂಢಚಾರಿಗಳಿಗೂ ವಿಯೆನ್ನಾ ಒಪ್ಪಂದದಲ್ಲಿ ಎಲ್ಲ ಹಕ್ಕುಗಳನ್ನು ನೀಡಲಾಗಿದೆ. ಪಾಕಿಸ್ತಾನ ಮಾನವ ಹಕ್ಕುಗಳಿಗಿಂತ ದೇಶದ ಸಾರ್ವಭೌಮತೆಗೆ ಆದ್ಯತೆ ನೀಡಿದೆ.