ಕೂಡಲೇ ಅಫ್ಘಾನಿಸ್ತಾನ ಬಿಟ್ಟು ಬರುವಂತೆ ತನ್ನ ನಾಗರಿಕರಿಗೆ ಭಾರತ ಸೂಚನೆ
ನವದೆಹಲಿ, ಆಗಸ್ಟ್ 10: ವಿಶೇಷ ವಿಮಾನ ಮೂಲಕ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ನಾಗರಿಕರು ಹಿಂದಿರುಗುವಂತೆ ಸೂಚಿಸಲಾಗಿದೆ.
Recommended Video
ತಾಲಿಬಾನ್ ಜತೆಗೆ ತೀವ್ರ ಹಣಾಹಣಿ ನಡೆಯುತ್ತಿರುವ ಕಾರಣ ಮಜರ್ ಐ ಶರೀಫ್ನಿಂದ ವಿಶೇಷ ವಿಮಾನದ ಮೂಲಕ ಹಿಂದಿರುಗವಂತೆ ತಿಳಿಸಲಾಗಿದೆ.
ಮಜರ್ ಐ ಶರೀಫ್ನ ನಾಲ್ಕೂ ದಿಕ್ಕುಗಳಿಂದ ತಾಲಿಬಾನಿಗಳು ದಾಳಿ ನಡೆಸುತ್ತಿದ್ದಾರೆ. ಅವರು ಈಗಾಗಲೇ ಪಶ್ಚಿಮಕ್ಕೆ ಶೆಬರ್ಘನ್ ಮತ್ತು ಪೂರ್ವದಲ್ಲಿ ಕುಂಡುಜ್ ಮತ್ತು ತಲೋಕಾನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮಜರ್ ಐ ಶರೀಫ್ ಉತ್ತರದ ಬಹುದೊಡ್ಡ ನಗರವಾಗಿದೆ. ಅಫ್ಘಾನಿಸ್ತಾನದ ಮೂರು ಪ್ರಾಂತೀಯ ರಾಜಧಾನಿಗಳಾದ ಕುಂದುಜ್, ಸರ್ ಇ ಪುಲ್ ಮತ್ತು ತಲುಕನ್ ನಗರಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ.
ಕಳೆದ ಎರಡು ದಶಕಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಬೆನ್ನಲ್ಲೇ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಮುಂದಾಗಿರುವ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳಲು ಆಫ್ಘನ್ ಸೇನಾಪಡೆಗಳ ಮೇಲೆ ಯುದ್ಧ ಸಾರಿದ್ದವು.
ಕಳೆದ ಕೆಲ ತಿಂಗಳುಗಳಲ್ಲಿ ದೇಶದಲ್ಲಿ ಸ್ಫೋಟ, ಹಿಂಸಾಚಾರ, ವಿದ್ಯಾಸಂಸ್ಥೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಿದ್ದವು. ಹಿಂಸಾಚಾರದ ಹಿಂದೆ ತಾಲಿಬಾನ್ ಕೈವಾಡ ಇದೆಯೆಂದು ಸರ್ಕಾರ ಆರೋಪಿಸಿತ್ತು.
ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವಿನ ಶಾಂತಿ ಮಾತುಕತೆ ಸಮಯದಲ್ಲಿ, ಅಮೆರಿಕ ಸೈನಿಕರು ದೇಶದಿಂದ ಕಾಲುಕಿತ್ತರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದರು. ಅದರಂತೆ ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತ್ತು.
ಈ ಹಿಂದೆ ಸಾವಿರಾರು ಆಫ್ಘನ್ ಸೇನಾಪಡೆಯ ಸೈನಿಕರು ತಾಲಿಬಾನ್ ಬಂಡುಕೋರರ ನಡುವಿನ ಕಾದಾಟದಲ್ಲಿ ಹಿಮ್ಮೆಟ್ಟಿ ಪಾಕ್ ಗಡಿ ಪ್ರದೇಶದೊಳಕ್ಕೆ ನುಗ್ಗಿ ಅಲ್ಲಿನ ಆಶ್ರಯ ಪಡೆದುಕೊಂಡಿತ್ತು ಎನ್ನುವುದು ಗಮನಾರ್ಹ. ಇತ್ತೀಚಿಗಷ್ಟೆ ಕಂದಹಾರ್ನಲ್ಲಿ ಆಫ್ಘನ್ ಭದ್ರತಾಪಡೆಗಳು ಮತ್ತು ತಾಲಿಬಾನ್ ನಡುವಿನ ಸಂಘರ್ಷದ ವರದಿಗಾರಿಕೆಗೆಂದು ತೆರಳಿದ್ದ ಭಾರತೀಯ ಮೂಲದ ಪತ್ರಕರ್ತ ದಾನಿಶ್ ಸಿದ್ದಿಕಿ ತಾಲಿಬಾನಿಗಳ ಗುಂಡಿಗೆ ಬಲಿಯಾಗಿದ್ದು ಎನ್ನುವುದು ಉಲ್ಲೇಖನೀಯ.
ಇದರಿಂದಾಗಿ ದೇಶದಲ್ಲಿ ಮತ್ತೆ ತಾಲಿಬಾನ್ ಆಡಳಿತ ಶುರುವಾಗಿ, ಜನಸಾಮಾನ್ಯರು ಅಪಾಯಕ್ಕೆ ಸಿಲುಕುವ ಆತಂಕವನ್ನು ಅಂತಾರಾಷ್ಟ್ರೀಯ ಸಮುದಾಯ ವ್ಯಕ್ತಪಡಿಸಿತ್ತು. ಅದೀಗ ನಿಜವಾಗುತ್ತಿದೆ ಎಂದು ರಾಜಕೀಯ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಶೇ.60 ಪ್ರತಿಶತ ದೇಶವನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ತಾಲಿಬಾನ್ ಮೂರು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವುದು ತಾಲಿಬಾನ್ ಮೇಲುಗೈ ಸಾಧಿಸಿರುವುದರ ಪ್ರತೀಕ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಭಾಗದಲ್ಲಿರುವ ತಖಾರ್ ಪ್ರಾಂತ್ಯದ ರಾಜಧಾನಿ ತಲೋಖನ್ ಕೂಡ ತಾಲಿಬಾನ್ ಹಿಡಿತಕ್ಕೆ ಸಿಕ್ಕುವ ಭೀತಿ ಎದುರಾಗಿದೆ. ಉಗ್ರರು ಈಗಾಗಲೇ ಕೆಲವು ಸರಕಾರಿ ಕಟ್ಟಡಗಳನ್ನು ಆಕ್ರಮಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಉಗ್ರರು ಮತ್ತು ಸೇನಾ ಪಡೆ ನಡುವಿನ ತೀವ್ರ ಕದನದ ಹಿನ್ನೆಲೆಯಲ್ಲಿ ನಾಗರಿಕರು ನಗರದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಕುಂಡುಜ್ನಲ್ಲಿ ಪ್ರಮುಖ ಸರಕಾರಿ ಕಟ್ಟಡಗಳನ್ನು ತಾಲಿಬಾನ್ ಆಕ್ರಮಿಸಿಕೊಂಡಿದೆ. ಇಲ್ಲಿ ವಿಮಾನ ನಿಲ್ದಾಣ ಮತ್ತು ತಮ್ಮ ನೆಲೆಗಳ ಹೊರತಾಗಿ ಯಾವ ಸ್ಥಳದಲ್ಲಿಯೂ ಆಫ್ಘನ್ ಪಡೆಗಳು ನಿಯಂತ್ರಣ ಉಳಿಸಿಕೊಂಡಿಲ್ಲ. 'ತೀವ್ರ ಕದನದ ಬಳಿಕ ದೇವರ ದಯೆಯಿಂದ ನಾವು ಕುಂಡುಜ್ ರಾಜಧಾನಿಯನ್ನು ವಶಪಡಿಸಿಕೊಂಡಿದ್ದೇವೆ' ಎಂದು ತಾಲಿಬಾನ್ ಹೇಳಿದೆ.
ಆಗಸ್ಟ್ 6ರಿಂದ ಒಟ್ಟು ಐದು ಪ್ರಾಂತೀಯ ರಾಜಧಾನಿಗಳನ್ನು ಆಫ್ಘನ್ ಪಡೆಗಳಿಂದ ಕಸಿದುಕೊಳ್ಳುವ ಮೂಲಕ ಉಗ್ರರ ಪಡೆ ಪ್ರಾಬಲ್ಯ ಸಾಧಿಸಿದೆ. ದೇಶದ ಉತ್ತರ ಭಾಗದಲ್ಲಿರುವ ಕುಂಡುಜ್, ಸಾರ್-ಇ ಪುಲ್ ಮತ್ತು ತಲೋಖನ್ ನಗರಗಳನ್ನು ಕೆಲವೇ ಗಂಟೆಗಳಲ್ಲಿ ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ.












Click it and Unblock the Notifications