ಲಸಿಕೆ ನೀತಿ, ಕೋವಿಡ್ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿ: ಗೀತಾ ಗೋಪಿನಾಥ್
ವಿಶ್ವಸಂಸ್ಥೆ, ಮಾರ್ಚ್ 9: ಕೊರೊನಾ ವೈರಸ್ ಸಾಂಕ್ರಾಮಿಕದ ಹೋರಾಟದಲ್ಲಿ ಮತ್ತು ಲಸಿಕೆ ನೀತಿಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಸೋಮವಾರ ಹೇಳಿದ್ದಾರೆ. ಕೋವಿಡ್-19 ಲಸಿಕೆಗಳ ಉತ್ಪಾದನೆ ಮತ್ತು ಇತರೆ ಅನೇಕ ದೇಶಗಳಿಗೆ ಅವುಗಳನ್ನು ಪೂರೈಕೆ ಮಾಡುವ ಮೂಲಕ ಈ ಬಿಕ್ಕಟ್ಟಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಡಾ. ಹನ್ಸಾ ಮೆಹ್ತಾ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
'ತನ್ನ ಲಸಿಕೆ ನೀತಿಗಳಲ್ಲಿ ಭಾರತ ನಿಜಕ್ಕೂ ಮುಂಚೂಣಿಯಲ್ಲಿ ಕಾಣಿಸುತ್ತಿದೆ ಎಂದು ಉಲ್ಲೇಖಿಸಲು ಬಯಸುತ್ತೇನೆ. ಜಗತ್ತಿನ ಲಸಿಕೆಗಳಿಗೆ ಒಂದು ನಿಖರವಾದ ಉತ್ಪಾದನಾ ಕೇಂದ್ರ ಎಲ್ಲಿದೆ ಎಂದು ನೋಡಿದರೆ ಅದು ಭಾರತವಾಗಿರುತ್ತದೆ' ಎಂದು ಕೊಂಡಾಡಿದ್ದಾರೆ.

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಹೊಗಳಿದ ಗೀತಾ, ಅದು ಪ್ರತಿ ವರ್ಷವೂ ವಿಶ್ವದ ಬಹುತೇಕ ಲಸಿಕೆಗಳನ್ನು ಉತ್ಪಾದಿಸುತ್ತದೆ. ಜತೆಗೆ ಅದು ಕೋವಿಡ್ ಲಸಿಕೆಗಳನ್ನು ಉತ್ಪಾದಿಸುತ್ತಿದ್ದು, ಅದನ್ನು ಕೋವ್ಯಾಕ್ಸ್ಗೆ ರವಾನಿಸಿದೆ. ಅಲ್ಲಿಂದ ಜಗತ್ತಿನಾದ್ಯಂತ ದೇಶಗಳಿಗೆ ಹಂಚಿಕೆಯಾಗಿದೆ ಎಂದಿದ್ದಾರೆ.
ತನ್ನ ಲಸಿಕೆ ನೀತಿಗಳ ಮೂಲಕ ಭಾರತವು ಜಾಗತಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ವಿಶ್ವಕ್ಕೆ ಸಹಾಯ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತವು ಕೋವಿಡ್ ಸಾಂಕ್ರಾಮಿಕದಿಂದ ಭಾರಿ ಹೊಡೆತ ಅನುಭವಿಸಿತ್ತು. ಸಾಮಾನ್ಯವಾಗಿ ಶೇ 6ರ ಪ್ರಗತಿ ಕಾಣುವ ದೇಶವು, 2020ರಲ್ಲಿ 8ರ ನೇತ್ಯಾತ್ಮಕ ದಿಕ್ಕಿನಲ್ಲಿ ಸಾಗಿತ್ತು. ಆದರೆ ದೇಶವು ಮತ್ತೆ ತೆರೆಯುತ್ತಿದ್ದಂತೆಯೇ ಚಟುವಟಿಕೆಗಳು ಸುರುವಾಗುತ್ತಾ ಸುಧಾರಣೆಗೆ ಮರಳುತ್ತಿರುವುದನ್ನು ಕಾಣಬಹುದು ಎಂದಿದ್ದಾರೆ.












Click it and Unblock the Notifications