ಜರ್ಮನಿಯ ಜಿ-7 ಶೃಂಗಸಭೆಯಲ್ಲಿ ಮೋದಿ, ಬೈಡೆನ್, ಮ್ಯಾಕ್ರೋನ್, ಟ್ರುಡೋ ಚರ್ಚೆ
ಎಲ್ಮೌ, ಜೂನ್ 27: ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹಲವು ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅನ್ನು ಭೇಟಿಯಾದ ಪ್ರಧಾನಿ ಮೋದಿ, ಪರಸ್ಪರ ಸಂವಾದ ನಡೆಸಿದರು.
ಜರ್ಮನಿ ಚಾನ್ಸೆಲರ್ ಸ್ಕೋಲ್ಜ್ ಆಹ್ವಾನದ ಮೇರೆಗೆ ದಕ್ಷಿಣ ಜರ್ಮನಿಯ ಸ್ಕ್ಲೋಸ್ ಎಲ್ಮೌವಿನ ಆಲ್ಪೈನ್ ಕ್ಯಾಸಲ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ.
ಜಿ7 ಶೃಂಗಸಭೆ ಹಿನ್ನೆಲೆ ಭಾನುವಾರದಿಂದ ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯನ್ನು ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸ್ವಾಗತಿಸಿದರು. ದಕ್ಷಿಣ ಜರ್ಮನಿ ಸುಂದರ ಸ್ಥಳವಾದ ಸ್ಕ್ಲೋಸ್ ಎಲ್ಮೌಗೆ ಆಗಮಿಸಿದ ಮೋದಿಯತ್ತ ಯುಎಸ್ ಪ್ರಧಾನಿ ಬೈಡೆನ್ ನಡೆದು ಬಂದರು. ನಗುನಗುತ್ತಾ ಉಭಯ ನಾಯಕರು ಹಸ್ತಲಾಘವ ಮಾಡಿಕೊಂಡರು.

ಕೆನಡಾ ಪ್ರಧಾನಿ ಜೊತೆಗೆ ನಿಂತ ನರೇಂದ್ರ ಮೋದಿ
ಗ್ರೂಪ್ ಫೋಟೋಗಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಪಕ್ಕದಲ್ಲಿ ನಿಂತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಪರಸ್ಪ ಸಂವಾದ ನಡೆಸಿರುವುದು ಕಂಡು ಬಂದಿತು. ಸೋಮವಾರ ಸಂಜೆ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಿದರು. ಗ್ರೂಪ್ ಫೋಟೋ ನಂತರ ನಾಯಕರು ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು. ನಂತರ ಜಿ7 ನಾಯಕರು ಶೃಂಗಸಭೆಯ ಸ್ಥಳಕ್ಕೆ ಹೋಗುತ್ತಿದ್ದಂತೆ, ತಮ್ಮ ಚರ್ಚೆಯನ್ನು ಮುಂದುವರೆಸಿದರು.

ಜೋ ಬೈಡೆನ್ ಜೊತೆಗೆ ಪ್ರಧಾನಿ ಮೋದಿ
ಕಳೆದ ಮೇ ತಿಂಗಳಿನಲ್ಲಿ ಜಪಾನ್ನಲ್ಲಿ ನಡೆದ ಕ್ವಾಡ್ ಶೃಂಗಸಭೆ ವೇಳೆ ಭೇಟಿಯ ನಂತರದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡೆನ್ ಮುಖಾಮುಖಿಯಾದರು. ಭಾರತ, ಇಸ್ರೇಲ್, ಯುಎಇ ಮತ್ತು ಯುಎಸ್ ಅನ್ನು ಒಳಗೊಂಡಿರುವ ಚತುರ್ಭುಜ ಆರ್ಥಿಕ ವೇದಿಕೆಯ I2U2 ವರ್ಚುವಲ್ ಶೃಂಗಸಭೆಗಾಗಿ ಉಭಯ ನಾಯಕರು ಜುಲೈನಲ್ಲಿ ಮತ್ತೊಮ್ಮೆ ಭೇಟಿಯಾಗಲಿದ್ದಾರೆ.

ಹಲವು ರಾಷ್ಟ್ರಗಳಿಗೆ ಜರ್ಮನಿ ಆಹ್ವಾನ
ಬವೇರಿಯಾದ ಎಲ್ಮಾವುನಲ್ಲಿ ನಡೆಯುವ ಜಿ-7 ಶೃಂಗಸಭೆಗೆ ಜರ್ಮನಿಯ ಪ್ರೆಸಿಡೆನ್ಸಿಯು ಅರ್ಜೆಂಟೀನಾ, ಭಾರತ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸಿದೆ. ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಪಾಲುದಾರ ದೇಶಗಳೊಂದಿಗೆ ಉತ್ಸಾಹಭರಿತ ಮಾತುಕತೆ ಅನ್ನು ಎದುರು ನೋಡುತ್ತಿದ್ದಾರೆ.

ಪ್ರಜಾಪ್ರಭುತ್ವ ದೇಶಗಳ ಸಂದೇಶ
"ಇದು ಎಲ್ಮಾವ್ನಿಂದ ಪ್ರಬಲ ಸಂಕೇತವನ್ನು ರವಾನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯದ ಬಗ್ಗೆ ಸಾಮಾನ್ಯ ಸಂದೇಶ ಕಳುಹಿಸಲಾಗುತ್ತಿದೆ. ಹವಾಮಾನ ಮತ್ತು ಸುಸ್ಥಿರ ಹೂಡಿಕೆಗಳ ಮೇಲೆ ಕೇಂದ್ರೀಕರಿಸುವ ಕಾಂಕ್ರೀಟ್ ಉಪಕ್ರಮಗಳು ಮತ್ತು ಪಾಲುದಾರಿಕೆಗಳನ್ನು ಪ್ರಾರಂಭಿಸುವುದು ನಮ್ಮ ಗುರಿಯಾಗಿದೆ. ವಿಶ್ವಾದ್ಯಂತ ಆಹಾರ ಭದ್ರತೆ ಸುಧಾರಿಸುವುದು, ಜಾಗತಿಕ ಆರೋಗ್ಯ ವೃದ್ಧಿಸುವುದು ಮತ್ತು ಪ್ರಜಾಪ್ರಭುತ್ವಗಳನ್ನು ಹೆಚ್ಚು ಚೇತರಿಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿದೆ," ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.












Click it and Unblock the Notifications